ಮಂಗಳೂರು, ಏ.20 : ಎ.ಜೆ ಆಸ್ಪತ್ರೆಯಲ್ಲಿ ಮತ್ತೊಂದು ಅಂಗದಾನಕ್ಕೆ ಸಿದ್ದತೆ ನಡೆದಿದೆ. ಮಿದುಳು ನಿಷ್ಕ್ರೀಯಗೊಂಡಿರುವ ಕೊಡಗು ಜಿಲ್ಲೆಯ ಯುವಕನ ಅಂಗ ದಾನಕ್ಕೆ ಆಸ್ಪತ್ರೆಯಲ್ಲಿ ಸಿದ್ದತೆ ನಡೆಯುತ್ತಿದೆ.
ಕೊಡಗು ಜಿಲ್ಲೆಯ ಸಿದ್ದಾಪುರದ ವಿಜಯಕಾಂತ್ (20) ಎಂಬವರು ಬೈಕ್ನಲ್ಲಿ ಹೋಗುತ್ತಿದ್ದಾಗ ಏ.14ರಂದು ಅಪಘಾತದಿಂದ ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ 16 ರಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ತರಲಾಗಿತ್ತು. ನಂತರ 17ರಂದು ಅಲ್ಲಿಂದ ಎಜೆ ಆಸ್ಪತ್ರೆಗೆ ವರ್ಗಾಯಿಸ ಲಾಗಿತ್ತು.
ಚಿಕಿತ್ಸೆಗೆ ಸ್ಪಂದಿಸದ ವಿಜಯ್ಕಾಂತ್ ಮಂಗಳವಾರ ಸಾಯಂಕಾಲ ಮಿದುಳು ನಿಷ್ಕ್ರೀಯಗೊಂಡ ಕಾರಣ ಸಾವನಪ್ಪಿದ್ದಾರೆ. ಅವರ ಕುಟುಂಬದ ಸದಸ್ಯರು ಅಂಗದಾನಕ್ಕೆ ಒಪ್ಪಿಸಿದ ಸೂಚಿಸಿದ ಬಳಿಕ ಮುಂದಿನ ಪ್ರಕ್ರಿಯೆ ತೆಗೆದುಕೊಳ್ಳಲಾಗಿತ್ತು.
ರೋಗಿಯೊಬ್ಬರಿಗೆ ಹೃದಯ ಕಸಿಗೆ ಕಾದಿದ್ದ ಬೆಂಗಳೂರಿನ ವೈದ್ಯರ ತಂಡ ಮಂಗಳವಾರ ಸಂಜೆಯೇ ವಿಮಾನ ಮೂಲಕ ಆಗಮಿಸಿದರೂ ಸ್ವೀಕರಿಸುವವರ ದೇಹದೊಂದಿಗೆ ಹೊಂದಾಣಿಕೆಯಾಗದ ಕಾರಣ ಅವರು ಹಿಂದಿರುಗಬೇಕಾಯಿತು.
ಕಿಡ್ನಿ, ಕಾರ್ನಿಯಾಗಳನ್ನು ಬೆಂಗಳೂರಿನಿಂದ ಬರುವ ವೈದ್ಯರ ತಂಡ ಕೊಂಡೊಯ್ಯಲಿದೆ ಎಂದು ಎಜೆ ಆಸ್ಪತ್ರೆ ಮೂಲಗಳು ತಿಳಿಸಿವೆ.