ಬೀಡ್: ಬೋರ್ವೆಲ್ನಿಂದ ಸತತವಾಗಿ ನೀರು ಹೊತ್ತು ತರುತ್ತಿದ್ದ 12 ವರ್ಷದ ಬಾಲಕಿಯೊಬ್ಬಳು ಹೃದಯಾಘಾತದಿಂದ ಸಾವ್ನನಪ್ಪಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.
5ನೇ ತರಗತಿಯ ಬಾಲಕಿ ಯೋಗಿತಾ ಭಾನುವಾರ ಮಧ್ಯಾಹ್ನ 40 ಡಿಗ್ರಿ ಬಿಸಿಲಿನಲ್ಲಿ 500 ಮೀಟರ್ ದೂರದ ಬೋರ್ವೆಲ್ನಿಂದ ಮನೆಗೆ ಸತತವಾಗಿ ನೀರು ಹೊತ್ತೊಯ್ಯುತ್ತಿದ್ದಳು. ಅದಾಗಲೇ 4 ಸುತ್ತು ನೀರು ತಂದಿದ್ದ ಯೋಗಿತಾ 5ನೇ ಬಾರಿಗೆ ಕುಸಿದು ಬಿದ್ದಿದ್ದಳು. ಕೂಡಲೇ ಸ್ಥಳಕ್ಕೆ ಬಂದ ವೈದ್ಯರು ಯೋಗಿತಾಳನ್ನು ಪರೀಕ್ಷಿಸಿದಾಗ ಆಕೆಗೆ ನಿರ್ಜಲೀಕರಣವಾಗಿ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿರುವುದನ್ನು ದೃಢಪಡಿಸಿದ್ರು.
ಮರಾಠವಾಡದ ಬೀಡ್ ಸೇರಿದಂತೆ 7 ಜಿಲ್ಲೆಗಳು ಸತತ 3 ವರ್ಷಗಳಿಂದ ಬರಗಾಲ ಎದುರಿಸುತ್ತಿದೆ. ಈಗಾಗಲೇ ದೇಶದಲ್ಲಿ ಬಿಸಿಲಿನಿಂದ 110ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಮೂರು ವಾರಗಳಲ್ಲಿ ಒರಿಸ್ಸಾದಲ್ಲಿ 45 ಮಂದಿ ಮತ್ತು ತೆಲಂಗಾಣದಲ್ಲಿ 35 ಮಂದಿ ಸಾವನ್ನಪ್ಪಿದ್ದಾರೆ.
ಈ ಬಾರಿಯ ಮುಂಗಾರಿನಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಹಿಂದೆಂದಿಗಿಂತ ಹೆಚ್ಚು ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.