ಉಡುಪಿ: ಉಡುಪಿ ಅಬಕಾರಿಯ ವಿಶೇಷ ಪತ್ತೆದಳದ ಉಪನಿರೀಕ್ಷಕ (ಸಬ್ ಇನ್ಸ್ಪೆಕ್ಟರ್) ಆಗಿದ್ದ ಕುಂದಾಪುರ ತಾಲೂಕಿನ ಹೆಮ್ಮಾಡಿ ನಿವಾಸಿ ಶಂಕರ್ ಎ.ಪಿ. (58) ಹೃದಯಾಘಾತದಿಂದ ನಿಧನರಾಗಿದ್ದಾರೆ.
(ಶಂಕರ್ ಎ.ಪಿ. )
ಗುರುವಾರ ಮಧ್ಯಾಹ್ನದ ಸುಮಾರಿಗೆ ಎದೆನೋವು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಶಂಕರ್ ಅವರನ್ನು ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಕೂಡ ಅವರು ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ.
ಮೃತ ಶಂಕರ್ ಅವರು ಪತ್ನಿ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಕುಟುಂಬಿಕರನ್ನು ಅಗಲಿದ್ದಾರೆ.
ಅಬಕಾರಿ ಇಲಾಖೆಯಲ್ಲಿ……
1981ರಲ್ಲಿ ಅಬಕಾರಿ ಇಲಾಖೆಯ ಸೇವೆಗೆ ಸೇರಿದ ಅವರು ಹಲವು ವರ್ಷಗಳ ಕಾಲ ವಿವಿದೆಡೆಯಲ್ಲಿ ಕಾರ್ಯನಿರ್ವಹಿಸಿದ್ದರು. ಕುಂದಾಪುರದಲ್ಲಿಯೂ ಮೂರ್ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವೆಯಲ್ಲಿ ಮುಂಬಡ್ತಿ ಹೊಂದಿದ್ದರು. ಪ್ರಸ್ತುತ ಉಡುಪಿಯ ಅಬಕಾರಿ ಇಲಾಖೆಯ ವಿಶೇಶಪತ್ತೆದಳ ವಿಭಾಗದಲ್ಲಿ ಎಸ್.ಐ. ಆಗಿದ್ದರು.
ಸಮಾಜ ಸೇವೆ…..
ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿದ್ದ ಶಂಕರ್ ಎ.ಪಿ. ಅವರು ದೇವಸ್ಥಾನದ ಅಭಿವೃದ್ಧಿಗಾಗಿ ಹತ್ತುಹಲವು ಯೋಜನೆಗಳನ್ನು ರೂಪಿಸಿದ್ದರು. ಅಲ್ಲದೇ ಇವರ ಅಧ್ಯಕ್ಷತೆಯ ಅವಧಿಯಲ್ಲಿ ದೇವಸ್ಥಾನವು ಬಹಳಷ್ಟು ಸುಧಾರಣೆ ಕಂಡಿದ್ದಲ್ಲದೇ ಹಲವಾರು ಪ್ರಗತಿ ಕೆಲಸಗಳು ನಡೆದಿದ್ದವು. ಊರಿನಲ್ಲಿ ಸಮಾಜ ಸೇವೆ ಮಾಡುತ್ತ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದ ಶಂಕರ್ ಅವರ ಅಗಲುವಿಕೆಯಿಂದಾಗಿ ಊರಿನಲ್ಲಿ ನೀರವ ಮೌನ ಆವರಿಸಿದೆ.
ಮೃತರ ಮನೆಗೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಅಬಕಾರಿ ಇಲಾಕೆ ಡೆಪ್ಯೂಟಿ ಕಮಿಷನರ್ ಕೆ.ಎಸ್. ಮುರಳಿ, ಡೆಪ್ಯೂಟಿ ಸುಪರಿಟೆಂಡೆಂಟ್ ಕೆ. ವಿನೋದ್ ಕುಮಾರ್, ಉಡುಪಿ ಎಸ್ಪಿ ಕೆ. ಅಣ್ಣಾಮಲೈ, ಕುಂದಾಪುರ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ., ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಭಾಸ್ಕರ ಬಿಲ್ಲವ, ಮಂಜು ಬಿಲ್ಲವ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರು ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವಾನ ಹೇಳಿದರು.
(ವರದಿ- ಯೋಗೀಶ್ ಕುಂಭಾಸಿ)