ಮಂಗಳೂರು,ಏ.15: ಮಂಗಳೂರು ನಗರದ ಕಲೆ, ಸಂಸ್ಕೃತಿ, ರಾಜಕೀಯ ಸೇರಿದಂತೆ ಸಮಗ್ರ ಇತಿಹಾಸದ ಅವಲೋಕನವನ್ನು ಬಿಂಬಿಸುವ ನಗರ ಕೋಶ “ಮಂಗಳೂರು ದರ್ಶನ’ ಗುರುವಾರ ಮಂಗಳೂರು ಪುರಭವನದಲ್ಲಿ ಬಿಡುಗಡೆಗೊಂಡಿತು. ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಅನಾವರಣಗೊಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಬಿ. ರಮಾಧಿನಾಥ ರೈ ಮಾತನಾಡಿ, ಸುಸ್ಥಿರ ಸಮಾಜಕ್ಕಾಗಿ ಇತಿಹಾಸದ ಅವಧಿಲೋಕನ ಅತ್ಯಂತ ಅಗತ್ಯ. ಜತೆಗೆ ದ.ಕ. ಜಿಲ್ಲೆಯ ಇತಿಧಿಹಾಸದ ಪರಂಪರೆ ಉಳಿಸಿಧಿಕೊಳ್ಳುವ ಅನಿಧಿವಾರ್ಯತೆಯೂ ನಮ್ಮ ಜವಾಬ್ದಾರಿ ಎಂದರು.
ಭೂತ ಕಾಲದ ವಿಷಯ ಹಾಗೂ ವರ್ತಧಿಮಾನದ ಅನುಭವಗಳು ಜತೆಯಾಗಿ ಸಾಗಿದರೆ ಸುಂದರ ಸಮಾಜ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಮಂಗಳೂರು ನಗರದ ಇತಿಹಾಸದ ಸಮಗ್ರ ಅವಲೋಕನವನ್ನು “ಮಂಗಳೂರು ದರ್ಶನ’ ನಡೆಸಿದ್ದು, ಇದು ಇತಿಹಾಸದ ಅಧ್ಯಯನದ ಅಮೂಲ್ಯ ರತ್ನ. ಮುಂದಿನ ತಲೆಮಾರಿಗೂ ನೂತನ 3 ಸಂಪುಟಗಳು ಕಾಲಕೋಶ ವಾಗಿ ಶಾಶ್ವತ ಮಾನ್ಯತೆ ಸಂಪಾದಿಸುತ್ತದೆ ಎಂದು ಶ್ಲಾಘಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಪ್ರೊ. ಸಿ.ಎನ್. ರಾಮಚಂದ್ರನ್ ಮಾತನಾಡಿ, ದ.ಕ. ಜಿಲ್ಲೆ ಬಹುಧರ್ಮೀಯ ಹಾಗೂ ಬಹುಭಾಷಿಕರ ನಾಡು ಎಂಬ ವಿಶೇಷತೆ ಪಡೆದುಕೊಂಡಿದೆ. ಇದರ ಆಶಯವನ್ನು ಜತೆಯಲ್ಲಿರಿಸಿಕೊಂಡು, ಮಂಗಳೂರು ನಗರವನ್ನು ಭಿನ್ನ ಪರಿಪೇಕ್ಷಗಳಿಂದ ಕಟ್ಟಿಕೊಡುವ ಹೊಸ ಪ್ರಯತ್ನ “ಮಂಗಳೂರು ದರ್ಶನ’ದ ಮೂಲಕ ನಡೆದಿದೆ. ಯಾವ ನಗರದ ಬಗ್ಗೆಯೂ ಬಾರದ ರೀತಿಯಲ್ಲಿ ಬಹುಶಿಸ್ತೀಯ ಮಾದರಿಯಲ್ಲಿ “ಮಂಗಳೂರು ದರ್ಶನ’ ಮೂಡಿಬಂದಿದೆ. ಡಾ. ಬಿ.ಎ. ವಿವೇಕ್ ರೈ ಸಂಪಾದಕತ್ವದ ತಂಡ ಈ ನಿಟ್ಟಿನಲ್ಲಿ ಯಶಸ್ವಿ ದಾಖಲೀಕರಣ ನಡೆಸಿದೆ ಎಂದರು.
ಶಾಸಕ ಜೆ.ಆರ್. ಲೋಬೋ ಅಧ್ಯಕ್ಷತೆ ವಹಿಸಿದ್ದರು. ಸಚಿವ ಅಭಯಚಂದ್ರ ಜೈನ್, ಶಾಸಕ ಮೊದಿನ್ ಬಾವಾ, ಮೇಯರ್ ಹರಿನಾಥ್, ಮುಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಎಸ್ಪಿ ಡಾ. ಶರಣಪ್ಪ ಎಸ್.ಡಿ., ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮೊಹಮ್ಮದ್ ಹನೀಫ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ, ಮನಪಾ ಆಯುಕ್ತ ಡಾ. ಎಚ್.ಎನ್. ಗೋಪಾಲ ಕೃಷ್ಣ, ಸಂಪುಟದ ಸಹಾಯಕ ಸಂಪಾದಕರಾದ ಡಾ.ವಾಮನ ನಂದಾವರ, ಡಾ. ಸತ್ಯ ನಾರಾಯಣ ಮಲ್ಲಿಪಟ್ಟಣ, ಮುದ್ದು ಮೂಡುಬೆಳ್ಳೆ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸ್ವಾಗತಿಸಿದರು. ಡಾ. ಬಿ.ಎ. ವಿವೇಕ್ ರೈ ಪ್ರಸ್ತಾವನೆ ಗೈದರು. ಮುಡಾ ಆಯುಕ್ತ ಮೊಹಮ್ಮದ್ ನಜೀರ್ ವಂದಿಸಿದರು. ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
“ಮಂಗಳೂರು ದರ್ಶನ’ ಸಂಪುಟದ ಪ್ರಧಾನ ಸಂಪಾದಕ ಡಾ| ಬಿ.ಎ. ವಿವೇಕ್ ರೈ ಮಾತನಾಡಿ, ಮಂಗಳೂರು ದರ್ಶನ 3 ಸಂಪುಟದಲ್ಲಿದೆ. ಸಂಪುಟ ಕ್ರೌನ್ ನಾಲ್ಕನೆಯ ಒಂದು ಭಾಗದ ಅಳತೆಯಲ್ಲಿದೆ. ಮೊದಲ ಸಂಪುಟ 794 ಪುಟ, ಎರಡನೆಯ ಸಂಪುಟ 836 ಪುಟ ಹಾಗೂ ಮೂರನೆಯ ಸಂಪುಟ 870 ಪುಟಗಳ ಗಾತ್ರ ಹೊಂದಿದ್ದು, ಒಟ್ಟು 2,500 ಪುಟಗಳಿವೆ. ಇದರಲ್ಲಿ ಒಟ್ಟು 400 ಲೇಖನಗಳಿವೆ. ಈ ಲೇಖನಗಳು 4 ಸಾಲಿನಿಂದ 40 ಪುಟಗಳ ವ್ಯಾಪ್ತಿಯಲ್ಲಿವೆ.
ಮಂಗಳೂರಿನ ಪರಿಚಯ, ಭೂ ವಿವರಣೆ, ಪ್ರಾಚೀನ ಹಾಗೂ ಆಧುನಿಕ ಇತಿಹಾಸ, ಪ್ರಾರ್ಥನಾ ಕೇಂದ್ರ, ಮಂಗಳೂರು ಪಾಲಿಕೆಯ ಹುಟ್ಟು ಮತ್ತು ಬೆಳವಣಿಗೆ, ಸಾರಿಗೆ ಸಂಪರ್ಕ, ಜಿಲ್ಲಾಡಳಿತ, ಶಿಕ್ಷಣ, ಮಾಧ್ಯಮ, ಮಂಗಳೂರನ್ನು ಬೆಳಗಿಸಿದ ಹಿರಿಯರು, ವಿವಿಧ ಸಾಹಿತ್ಯ ಪ್ರಕಾರ, ಸಂದರ್ಶನ, ಸಿನೆಮಾ ಸೇರಿದಂತೆ ಸಮಗ್ರ ವಿವರಗಳನ್ನು ಸಂಪುಟದಲ್ಲಿ ನೀಡಲಾಗಿದೆ ಎಂದರು.
“ಮಂಗಳೂರು ದರ್ಶನ’ ಮೂರೂ ಸಂಪುಟವನ್ನು ಸೇರಿ ಒಟ್ಟು ಮುಖಬೆಲೆ 1,500 ರೂ. ಆದರೂ ಸಾರ್ವಜನಿಕರಿಗೆ ಉತ್ತೇಜಕವಾಗಿ ಮೂರೂ ಸಂಪುಟಗಳನ್ನು ಬಿಡುಗಡೆಯಾದ ದಿನದಿಂದ 2 ತಿಂಗಳ ವರೆಗೆ ರಿಯಾಯಿತಿ ದರ ಕೇವಲ 800 ರೂ.ಗಳಿಗೆ ಮಾರಾಟ ಮಾಡಲಾಗುವುದು. ಮೂರೂ ಸಂಪುಟಗಳನ್ನು ರಟ್ಟಿನ ಪೆಟ್ಟಿಗೆಯಲ್ಲಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದರು.
ಬಿಡಿ ಸಂಪುಟದ ಮಾರಾಟ ಇಲ್ಲ. ಎ. 25ರ ಅನಂತರ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಶೋಕ್ನಗರ, ಕೊಂಕಣಿ ಸಾಹಿತ್ಯ ಅಕಾಡೆಮಿ ಲಾಲ್ಭಾಗ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅತ್ತಾವರ, ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಪ್ರತಿಗಳು ಲಭ್ಯವಿರಲಿದೆ ಎಂದರು.