ಬಂಟ್ವಾಳ : ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಗೂಡ್ಸ್ ರೈಲಿನಲ್ಲಿ ಅನುಮತಿಯಿಲ್ಲದೇ ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದರು ಎನ್ನಲಾದ ಸುಮಾರು 8 ಲಕ್ಷ ರೂ. ಮೌಲ್ಯದ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರಿನಿಂದ ಸಕ್ಲೇಸ್ಪುರಕ್ಕೆ ತೆರಳುತ್ತಿದ್ದ ಗೂಡ್ಸ್ ರೈಲಿನ 6 ಬೋಗಿಗಳಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 300ಕ್ಕೂ ಹೆಚ್ಚು ಮೆಟ್ರಿಕ್ ಟನ್ ಮರಳನ್ನು ಬುಧವಾರ ಬಿ.ಸಿ.ರೋಡ್ ಸಮೀಪ ಪತ್ತೆ ಹಚ್ಚಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಯು. ಬೆಳ್ಳಿಯಪ್ಪ ಅವರ ನೇತೃತ್ವದ ಪೊಲೀಸರು ತಡೆಹಿಡಿದು ಮುಟ್ಟುಗೋಲು ಹಾಕಿದ್ದಾರೆ.
ಮರಳು ಸಾಗಾಟ-ಮಾರಾಟಕ್ಕೆ ಟೆಂಡರ್ ವ್ಯವಸ್ಥೆ ಜಾರಿಗೊಳಿಸಿದ ಬಳಿಕ, ಹೊರ ಜಿಲ್ಲೆಗಳಿಗೆ ಮರಳು ಸಾಗಾಟ ಮಾಡುವುದನ್ನು ಜಿಲ್ಲಾಡಳಿತ ನಿಷೇಧ ಹೇರಿತ್ತು. ಈ ಹಿನ್ನೆಲೆಯಲ್ಲಿ ರೈಲಿನಲ್ಲಿ ಅಕ್ರಮವಾಗಿ ಬೆಂಗಳೂರಿಗೆ ಮರಳು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಬಂಟ್ವಾಳ ರೈಲು ನಿಲ್ದಾಣದ ಮ್ಯಾನೇಜರ್ ಬಾಲಕೃಷ್ಣ ಅವರು ಈ ಮರಳು ರೈಲ್ವೆ ಇಲಾಖೆಗೆ ಸಂಬಂಧಿಸಿದ ಕೆಲಸಕ್ಕೆ ಸಕಲೇಶಪುರ ಸಾಗಿಸುತ್ತಿರುವುದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಸಂಬಂಧ ಪಟ್ಟ ದಾಖಲೆ ಅಥವಾ ಪರವಾನಿಗೆ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಈ ಮರಳು ಸಾಗಾಟದ ಬಗ್ಗೆ ತಮಗೆ ಯಾವೂದೇ ಮಾಹಿತಿ ನಮ್ಮ ಇಲಾಖೆಯಿಂದ ಬಂದಿಲ್ಲ ಎಂದು ರೈಲ್ವೆ ಇಲಾಖೆಯ ಹಿರಿಯ ವಿಭಾಗೀಯ ಮ್ಯಾನೇಜರ್ (ಡಿಆರ್ಎಮ್) ಹೇಳಿದ್ದಾರೆ.
ಯಾವೂದೇ ದಾಖಲೆ ಪತ್ರಗಳಿಲ್ಲದೇ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾದ ಮರಳನ್ನು ವಶಪಡಿಸಿಕೊಂಡ ಬಳಿಕ ಗೂಡ್ಸ್ ರೈಲು ತನ್ನ ಪ್ರಯಾಣ ಮುಂದುವರೆಸಿದೆ.