ಮಂಗಳೂರು / ಉಳ್ಳಾಲ, ಎಪ್ರಿಲ್.13: ನಿನ್ನೆ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಮೊಗವೀರ ಪಟ್ಣ ನಿವಾಸಿ ಮೀನುಗಾರ ರಾಜು ಕೋಟ್ಯಾನ್ ಅವರ ಶವವನ್ನು ಉಳ್ಳಾಲ ಪೊಲೀಸ್ ಠಾಣೆಯೆದುರು ಇಟ್ಟು ಮೊಗವೀರ ಸಮಾಜದವರು ಇಂದು ಮತ್ತೆ ಪ್ರತಿಭಟನೆ ನಡೆಸಿದ್ದಾರೆ.
ಕೋಟೆಪುರ ಸಮೀಪ ಮೊಗವೀರಪಟ್ನ ನಿವಾಸಿ ಮೀನುಗಾರ ರಾಜು ಕೋಟ್ಯಾನ್ (41) ಅವರನ್ನು ಅಪರಿಚಿತ ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಹತ್ಯೆಗೈದಿದ್ದು, ಕೋಟೆಪುರ ರಸ್ತೆಯಲ್ಲಿರುವ ಬರಾಕ ಆಯಿಲ್ ಮಿಲ್ ಬಳಿಯಿರುವ ಪೊದೆಯಲ್ಲಿ ಇವರ ಮೃತದೇಹ ಪತ್ತೆಯಾಗಿತ್ತು.
ಈ ಘಟನೆಯನ್ನು ಖಂಡಿಸಿ ಹಾಗೂ 24 ಗಂಟೆಯೊಳಗೆ ಆರೋಪಿಗಳ ಬಂಧನಕ್ಕೆ ಆಗ್ರಹಿ ಮಂಗಳವಾರ ರಾತ್ರಿ ಮೊಗವೀರ ಮಹಿಳೆಯರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇಂದು ಶವಯಾತ್ರೆ ಸಂದರ್ಭ ಮತ್ತೆ ಉಳ್ಳಾಲ ಪೊಲೀಸ್ ಠಾಣೆಯೆದುರು ಶವವನ್ನು ಇರಿಸಿ ಪ್ರತಿಭಟನೆ ನಡೆಸಿದ್ದಾರೆ.
ಬುಧವಾರ ಬೆಳಿಗ್ಗೆ ಮೊಗವೀರಪಟ್ನದ ರಾಜು ಕೋಟ್ಯಾನ್ ಅವರ ಮನೆಯಿಂದ ಹೊರಟ ಶವಯಾತ್ರೆ ಸೀರೋಡ್ ಮೂಲಕ ಛೋಟಾ ಮಂಗಳೂರು ರಸ್ತೆಯಾಗಿ ಉಳ್ಳಾಲ ಜಂಕ್ಷನ್ನಿನಿಂದ ಹಾದು ಹೋದ ಬಳಿಕ ಉಳ್ಳಾಲ ಠಾಣೆಯೆದರು ಶವ ಇರಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿದ್ದಾರೆ.
ಉಳ್ಳಾಲದಲ್ಲಿ ಮೊಗವೀರರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದರೂ ಪೊಲೀಸರು ಈವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಚೂರಿ ಇರಿತ, ಹಲ್ಲೆ, ಮನೆಗಳಿಗೆ ಹಾನಿ ನಡೆದರೂ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಪತ್ತೆ ಇನ್ನೂ ಆಗಿಲ್ಲ. ಅದೇ ಮೊಗವೀರರ ಮೇಲೆ ಆರೋಪ ಕೇಳಿಬಂದಲ್ಲಿ ಅವರ ಮನೆಗೆ ನುಗ್ಗಿ ಕೊಂಡೊಯ್ಯುವ ಪೊಲೀಸರು ಇದೀಗ ರಾಜು ಕೋಟ್ಯಾನ್ ಹತ್ಯೆ ಆರೋಪಿಗಳನ್ನು ಬಂಧಿಸುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಶವಯಾತ್ರೆಯಲ್ಲಿ ಭಾಗವಹಿಸಿದ್ದ ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನ ನಿರತರು ಅಕ್ರೋಷ ವ್ಯಕ್ತಪಡಿಸಿ, ಪೊಲೀಸರ ಹಾಗೂ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಮೃತರ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹ:
ಇದೇ ಸಂದರ್ಭದಲ್ಲಿ ಉಳ್ಳಾಲ ಮೊಗವೀರ ಸಮಾಜದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ಅವರು, ಅಮಾನುಷವಾಗಿ ಹತ್ಯೆಯಾದ ಶ್ರಮಜೀವಿ.ಮೀನುಗಾರ ರಾಜು ಕೋಟ್ಯಾನ್ ಅವರ ಮನೆಮಂದಿಯ ಸ್ಥಿತಿಯನ್ನು ನೋಡುವಾಗ ಕಣ್ಣಿನಲ್ಲಿ ನೀರಿನ ಬದಲು ರಕ್ತ ಬರುವಂತಹ ಸ್ಥಿತಿ ಇದೆ. ಪತ್ನಿ ಹಾಗೂ ಅವರ ಅಂಗವಿಕಲ ಸಹೋದರ ಸಹಿತ ಇಡೀ ಕುಟುಂಬದ ಜವಾಬ್ದಾರಿಯನ್ನು ರಾಜು ಕೋಟ್ಯಾನ್ ನಿರ್ವಹಿಸುತ್ತಿದ್ದರು. ಆದರೆ ಸದ್ಯ ಬಡ ಕುಟುಂಬ ದಿಕ್ಕೆಂಟಂತಾಗಿದೆ. ಸರಕಾರ ಕೂಡಲೇ ಮೃತರ ಕುಟುಂಬಕ್ಕೆ ರೂ. 50 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಡಿಸಿಪಿ ಕೆ.ಎಂ.ಶಾಂತರಾಜು, ಎಸಿಪಿಗಳಾದ ಕಲ್ಯಾಣಿ ಶೆಟ್ಟಿ, ಉದಯ .ಎಂ.ನಾಯಕ್, ಮದನ್.ಎ.ಗಾಂವ್ಕರ್ , ಸಿಸಿಬಿ ತಂಡ , ಕೊಣಾಜೆ ಹಾಗೂ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದಾರೆ. ಯಾವೂದೇ ಹೆಚ್ಚಿನ ಅನಾಹುತ ಸಂಭವಿಸದಂತೆ ಸ್ಥಳದಲ್ಲಿ ನಾಲ್ಕು ಕೆ.ಎಸ್.ಆರ್.ಪಿ ತುಕಡಿಗಳನ್ನುನಿಯೋಜಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಐವರು ಆರೋಪಿಗಳು ಪೊಲೀಸ್ ವಶಕ್ಕೆ:
ಉಳ್ಳಾಲ ಮೊಗವೀರಪಟ್ಟಣದಲ್ಲಿ ನಡೆದ ಮೀನುಗಾರ ರಾಜೇಶ್ ಕೋಟ್ಯಾನ್ ಅವರ ಕೊಲೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ನಿನ್ನೆ ಶಂಕಿತ ಆರೋಪಿಯೋರ್ವನನ್ನು ವಶಕ್ಕೆ ಪಡೆದುಕೊಂಡಿದ್ದರೆ, ಇಂದು ಬೆಳಿಗ್ಗೆ ಮತ್ತೆ ನಾಲ್ವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ಬಂಧಿತ ಆರೋಪಿಗಳನ್ನು ನವಾಝ್, ಫಯಾಝ್, ರಮೀಝ್ ಹಾಗೂ ತೌಸೀಫ್ ಎನ್ನಲಾಗಿದೆ.
ಘಟನೆ ವಿವರ :
ಮಂಗಳವಾರ ದಾಮೋದರ ಸುವರ್ಣ ಅವರ ಬೋಟ್ನಲ್ಲಿ ರಾಜೇಶ್ ತಮ್ಮ ಮೊಬೈಲ್ನ್ನು ಮನೆಯಲ್ಲೇ ಬಿಟ್ಟು ಊಟದ ಬುತ್ತಿಯೊಂದಿಗೆ ಮೀನುಗಾರಿಕೆಗೆ ಹೊರಟಿದ್ದರು. ಇವರ ಇಬ್ಬರು ಸ್ನೇಹಿತರು ಅದಾಗಲೇ ಬೋಟ್ ತಲುಪಿದ್ದರೂ ರಾಜೇಶನ ಸುಳಿವು ಮಾತ್ರ ಕಂಡಿರಲಿಲ್ಲ. ತಡವಾಗುತ್ತಿರುವುದನ್ನು ಗಮನಿಸಿ ಇವರ ಮೊಬೈಲ್ಗೆ ಕರೆ ಮಾಡಿದಾಗ ಹೊರಟು ಹೋಗಿದ್ದಾರೆ ಎನ್ನುವುದು ತಿಳಿದುಬಂದಿತ್ತು.
ಈ ಹಿನ್ನೆಲೆಯಲ್ಲಿ ಸ್ಥಳೀಯರು ಹುಡುಕಾಡಿದಾಗ ಕೋಟೆಪುರ ರಸ್ತೆಯಲ್ಲಿರುವ ಬರಾಕ ಆಯಿಲ್ ಮಿಲ್ ಬಳಿಯಿರುವ ಪೊದೆಯಲ್ಲಿ ಇವರ ಮೃತದೇಹ ಪತ್ತೆಯಾಗಿತ್ತು. ದುಷ್ಕರ್ಮಿಗಳು ಬ್ಯಾಟ್ನಿಂದ ಅವರ ಮುಖದ ಮೇಲೆ ಬಲವಾಗಿ ಬೀಸಿದ್ದಲ್ಲದೇ ಕಲ್ಲಿನಿಂದ ಜಜ್ಜಿದ ಗುರುತುಗಳಿದ್ದವು. ಮುಖ ಗುರುತು ಸಿಗದಂತಾಗಿದ್ದರಿಂದ ಕೋಟ್ಯಾನ್ ಮೇಲೆ ಆ್ಯಸಿಡ್ ಎರಚಿ ಕೊಲೆ ಮಾಡಲಾಗಿದೆ ಎಂದು ಆರಂಭದಲ್ಲಿ ಅಂದಾಜಿಸಲಾಗಿತ್ತು. ಆದರೆ, ತನಿಖೆಯ ವೇಳೆ ಬ್ಯಾಟ್ ಮತ್ತು ಕಲ್ಲುಗಳಿಂದ ಜಜ್ಜಿ ಕೊಲೆ ನಡೆಸಿರುವುದಾಗಿ ತಿಳಿದು ಬಂದಿದೆ.