ಮಂಗಳೂರು : ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜು ಮಟ್ಟದಲ್ಲಿ ಆಟೋಟ ನಡೆಸುವುದು ಸಾಮಾನ್ಯ. ವಿಶೇಷ ಒಲಂಪಿಕ್ಸ್ ನಡೆಸಲು ವಿಶೇಷ ಕಾಳಜಿ ಅಗತ್ಯವಾಗಿದ್ದು ಅದರಲ್ಲಿ ಸಿಗುವ ಆನಂದ ಅಪಾರವಾಗಿದೆ ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು.
ವಿಶೇಷ ಒಲಂಪಿಕ್ಸ್ ಭಾರತ್, ರಾಷ್ಟ್ರೀಯ ಕ್ರೀಡಾಕೂಟ ಫೆಡರೇಷನ್, ಹಾಗೂ ಯುವಜನ ಸಬಲೀಕರಣ ಕ್ರೀಡಾ ಇಲಾಖೆ ಭಾರತ ಸರಕಾರ ವತಿಯಿಂದ ಮಂಗಳೂರಿನ ಪುರಭವನದಲ್ಲಿ ಅಯೋಜಿಸಲಾದ ವಿಶೇಷ ಒಲಂಪಿಕ್ಸ್ ಭಾರತ್ ಕರ್ನಾಟಕ ಮಾನ್ಯತಾ ಪತ್ರ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಶೇಷ ಮಕ್ಕಳಿಗೆ ನೀಡುವ ಅನುದಾನವನ್ನು ಸಂಘಸಂಸ್ಥೆಗಳು ದುರುಪಯೋಗಪಡಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಈ ಬಗ್ಗೆ ಕಠಿಣ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ತಿಳಿಸಿಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತೆ ಅರ್ಚನಾ ಅವರನ್ನು ಅತಿಥಿಗಳು ಸನ್ಮಾನಿಸಿದರು.ವೇದಿಕೆಯಲ್ಲಿ ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಜಿಲ್ಲಾ ಪಂಚಾಯತ್ ಸಿ.ಇ.ಒ ಶ್ರೀವಿದ್ಯಾ, ಬಂಟ್ಸ್ ವೆಲ್ಫೆರ್ ಟ್ರಸ್ಟ್ ಚೇರ್ಮ್ಯಾನ್ ಎ. ಸದಾನಂದ ಶೆಟ್ಟಿ, ಮಾಜಿ ಮೇಯರ್ ಮಹಾಬಲ ಮಾರ್ಲ, ಆಗ್ನೇಸ್ ಕುಂದರ್, ಫಾ.ಫ್ರಾನ್ಸಿಸ್, ಅಮರೇಂದ್ರ ಆಂಜನಪ್ಪ ಮತ್ತಿತರರು ಉಪಸ್ಥಿತರಿದ್ದರು. ಸಾನಿಧ್ಯ ಸಂಸ್ಥೆಯ ಮುಖ್ಯಸ್ಥ ವಸಂತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ವಂದಿಸಿದರು.