ಉಳ್ಳಾಲ.ಮಾರ್ಚ್.27: ಸಾಂತ್ವನ ಯೋಜನೆಯಡಿ ಬಡ ಹೆಣ್ಮಕ್ಕಳ ಮದುವೆ, ಆರ್ಥಿಕವಾಗಿ ಹಿಂದುಳಿದವರಿಗೆ ಮನೆ ಕಟ್ಟುವ ಸಾಮಾಜಿಕ ಕೆಲಸ ಎಸ್ವೈಎಸ್ ಮಾಡುತ್ತಿದೆ ಎಂದು ಸುನ್ನೀ ಯುವಜನ ಸಂಘದ ರಾಜ್ಯಾಧ್ಯಕ್ಷ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಅಭಿಪ್ರಾಯಪಟ್ಟರು.
ಸುನ್ನೀ ಯುವಜನ ಸಂಘ ಕೆ.ಸಿ.ರೋಡು ಘಟಕದ ಆಶ್ರಯದಲ್ಲಿ ಭಾನುವಾರ ಕೊಟೆಕಾರ್ ಖಾಸಗಿ ಸಭಾಂಗಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವಕರಲ್ಲಿ ಧಾರ್ಮಿಕ ಜ್ಞಾನ ಮೂಡಿಸಿ ಬಲಿಷ್ಟಗೊಳಿಸುವ ಉದ್ದೇಶ ಸಂಘಟನೆ ಹೊಂದಿದ್ದು ಇತರ ಸಾಮಾಜಿಕ ಸೇವೆಗಳನ್ನು ಸಾಂತ್ವನ ಯೋಜನೆಯಡಿ ನಡೆಸಲಾಗುತ್ತಿದೆ. ಇಂದು ಆರ್ಥಿಕವಾಗಿ ಜಗತ್ತೇ ಸಂಕಷ್ಟದಲ್ಲಿದ್ದು ಇಂತಹ ಸಂದರ್ಭದಲ್ಲಿ ಹೆಣ್ಮಕ್ಕಳ ವಿವಾಹ ನಡೆಸುವುದು ಹೆತ್ತವರಿಂದ ಅಸಾಧ್ಯ ಎನಿಸಿದೆ. ಮಸೀದಿ ಹಾಗೂ ಜಮಾಅತ್ ಸಮಿತಿಗಳು ವ್ಯಾಪ್ತಿಯಲ್ಲಿರುವ ಮದರಸಗಳನ್ನೇ ಮುನ್ನಡೆಸಲು ಕಷ್ಟಪಡುತ್ತಿದ್ದು ಇಂತಹ ಸಂದರ್ಭದಲ್ಲಿ ದಾನಿಗಳ ನೆರವಿನಿಂದ ಬಡ ಹೆಣ್ಮಕ್ಕಳಿಗೆ ವಿವಾಹ ಮಾಡುವಲ್ಲಿ ಎಸ್ವೈಎಸ್ ಯಶಸ್ವಿಯಾಗಿದೆ ಎಂದರು.
ಹಿದಯಾತ್ ನಗರ ಅಲ್ ಹಿದಾಯ ಜುಮ್ಮಾ ಮಸೀದಿ ಖತೀಬ್ ಅಸ್ಸಯ್ಯದ್ ಸಿ.ಟಿ.ಎಂ.ಅಲೀಂ ಪೂಕೋಯ ತಂಙಳ್ ದುವಾ ನೆರವೇರಿಸಿದರು. ಮಾಣಿ ದಾರುಲ್ ಇರ್ಷಾದ್ ಎಜ್ಯುಕೇಶನ್ ಸೆಂಟರ್ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ವಿವಾಹದ ನೇತೃತ್ವ ವಹಿಸಿದ್ದರು.
ಕಳೆದ ಡಿಸೆಂಬರ್ನಲ್ಲಿ ಐದು ಜೋಡಿ ವಿವಾಹ ನಡೆಸುವ ಉದ್ದೇಶ ಇತ್ತಾದರೂ ವಧು-ವರ ಇಲ್ಲದ ಕಾರಣ ಮೂರು ಜೋಡಿ ನಡೆಸಲಾಗಿತ್ತು. ಎರಡು ಜೋಡಿಯ ಚಿನ್ನಾಭರಣ, ವಸ್ತ್ರ ಮೀಸಲಿಟ್ಟು ಇದೀಗ ಮುಂದುವರಿದ ಭಾಗವಾಗಿ ಇದೀಗ ಇನ್ನೆರಡು ಜೋಡಿ ವಿವಾಹ ನಡೆಸಲಾಗಿದೆ’ ಎಂದು ಎಸ್ವೈಎಸ್ ಅಧ್ಯಕ್ಷ ಎನ್.ಎಸ್.ಉಮ್ಮರ್ ಮಾಸ್ಟರ್ ತಿಳಿಸಿದರು.
ಜಿಲ್ಲಾ ವಕ್ಫ್ ಅಧ್ಯಕ್ಷ ಎಸ್ಎಂಆರ್ ರಶೀದ್, ಎಸ್ಜೆಎಂ ತಲಪಾಡಿ ವಲಯಾಧ್ಯಕ್ಷ ಇಬ್ರಾಹಿಂ ಮದನಿ ತಲಪಾಡಿ, ಅಬ್ದುಲ್ ಹಕೀಂ ಮದನಿ ಉಚ್ಚಿಲ, ಕೆ.ಸಿ.ರೋಡ್ ಮಸೀದಿ ಮುದರ್ರಿಸ್ ಮುನೀರ್ ಸಖಾಫಿ, ಎಸ್ವೈಎಸ್ ಮದುವೆ ಸಮಿತಿ ಅಧ್ಯಕ್ಷ ಯು.ಬಿ.ಮಹಮ್ಮದ್ ಹಾಜಿ, ತಾ.ಪಂ.ಸದಸ್ಯ ಸಿದ್ದೀಕ್ ತಲಪಾಡಿ, ಡಾ.ಅಬ್ದುಲ್ ಖಾದರ್ ಹಾಜಿ ತಲಪಾಡಿ, ಎಸ್ಎಂಎ ತಲಪಾಡಿ ಅಧ್ಯಕ್ಷ ಬಾವ ಹಾಜಿ ಪಂಜಾಳ, ಎಸ್ಎಸ್ಎಫ್ ತಲಪಾಡಿ ಘಟಕಾಧ್ಯಕ್ಷ ಅಬ್ದುಲ್ ಹಕೀಂ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ಸಂಘಟನೆಯ ಮಹತ್ವ ವಿಚಾರದಲ್ಲಿ ನಡೆದ ಅಧ್ಯಯನ ಶಿಬಿರದಲ್ಲಿ ಹಂಝ ಮದನಿ ಮಿತ್ತೂರು ವಿಷಯ ಮಂಡಿಸಿದರು. ಸಾಮೂಹಿಕ ವಿವಾಹದಲ್ಲಿ ಖತೀಜತ್ತುಲ್ ಕುಬ್ರಾ-ನಸ್ರುಲ್ಲಾ ಹಾಗೂ ಉಮೈರಾ ಬಾನು-ಸಯ್ಯದ್ ಅಬ್ದುಲ್ಲಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಎಸ್ವೈಎಸ್ ಕೆ.ಸಿ.ರೋಡು ಘಟಕಾಧ್ಯಕ್ಷ ಎನ್.ಎಸ್.ಉಮ್ಮರ್ ಮಾಸ್ಟರ್ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಪಲ್ಲ ವಂದಿಸಿದರು.