ಮಂಗಳೂರು: ದ.ಕ. ಜಿಲ್ಲೆಯಲ್ಲಿ ಎದುರಾಗುವ ತುರ್ತು ಕುಡಿಯುವ ನೀರಿನ ಅಗತ್ಯತೆಗೆ ಒಟ್ಟು 6.39 ಕೋ. ರೂ. ಸರಕಾರದಿಂದ ಮಂಜೂರಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಬಾರದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಕುರಿತು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದ.ಕ. ಜಿಲ್ಲೆಯ ಒಂದೊಂದು ವಿಧಾನಸಭಾ ಕ್ಷೇತ್ರಗಳಿಗೆ ತಲಾ 50 ಲಕ್ಷ ರೂ.ಗಳಂತೆ ಒಟ್ಟು 3.50 ಕೋ. ರೂ. ಹಾಗೂ ಜಿಲ್ಲೆಯ ನಗರಾಡಳಿತ ಪ್ರದೇಶಗಳಿಗೆ 2.89 ಕೋ. ರೂ. ಬಿಡುಗಡೆ ಆಗಿದೆ ಎಂದು ಅವರು ಹೇಳಿದರು.
ಮಳೆ ಜಾಸ್ತಿ ಬೀಳುವ ಕಾರಣದಿಂದ ಇಲ್ಲಿ ಪ್ರಕೃತಿ ವಿಕೋಪ ನಡೆದರೂ ಬರದ ಸಮಸ್ಯೆ ಇದೆ. ಇನ್ನೆರಡು ತಿಂಗಳು ಕುಡಿಯುವ ನೀರಿನ ಸಮಸ್ಯೆ ಈ ಭಾಗದಲ್ಲಿ ಕಾಡಲಿದೆ. ಆದ್ಯತೆ ನೆಲೆಯಲ್ಲಿ ಕುಡಿಯುವ ನೀರು ಒದಗಿಸಲು ಅಧಿಕಾರಿಗಳು ಮೀನಮೇಷ ಮಾಡಬಾರದು. ನೀರು ಬಿಡುವ ಸಿಬಂದಿ ಕೂಡ ಯಾವುದೇ ಉದಾಸೀನ ಮಾಡಬಾರದು. ನೀರು ಒದಗಿಸುವ ನಿಟ್ಟಿನಲ್ಲಿ ಪುರಸಭೆ, ನಗರಸಭೆ, ಪಾಲಿಕೆ ಆಯುಕ್ತರು ಜವಾಬ್ದಾರರು ಎಂದು ಅವರು ಹೇಳಿದರು.
ಸಭೆಯಲ್ಲಿ ಸಚಿವ ಅಭಯಚಂದ್ರ ಜೈನ್, ಶಾಸಕ ಮೊಯ್ದಿನ್ ಬಾವ, ಮೇಯರ್ ಹರಿನಾಥ್, ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಜಿ.ಪಂ. ಸಿಇಒ ಶ್ರೀವಿದ್ಯಾ ಉಪಸ್ಥಿತರಿದ್ದರು.