
ಮಂಗಳೂರು : ನಕಲಿ ಸೀಲ್ ಹಾಕಿದ ನಕಲಿ ಪರವಾನಿಗೆ ಪತ್ರವನ್ನು ಬಳಸಿ ಕೇರಳಕ್ಕೆ ಮರಳು ಸಾಗಿಸಲು ಉಪಯೋಗಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ನೇತ್ರತ್ವದ ತಂಡ ಆರೋಪಿಗಳನ್ನು ಬಂಧಿಸಿ ಹಲವಾರು ನಕಲಿ ಪರವಾನಿಗೆ ಪತ್ರವನ್ನು ವಶಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಆರೋಪಿಗಳು ಒರಿಸ್ಸಾದಿಂದ ಮರಳನ್ನು ತರುವುದಾಗಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ದ.ಕ ಜಿಲ್ಲೆಯ ಆಸುಪಾಸುಗಳಲ್ಲಿ ಮರಳನ್ನು ಕಾನೂನು ಬಾಹಿರವಾಗಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಮರಳನ್ನು ಲಾರಿಗೆ ತುಂಬಿ ವಾಣಿಜ್ಯ ಇಲಾಖೆಯ ನಕಲಿ ಸೀಲುಗಳನ್ನು ತಯಾರಿಸಿ ಅವುಗಳ ಬಿಲ್ಗಳನ್ನು ಬಳಸಿ ನೆರೆಯ ಕೇರಳ ರಾಜ್ಯಕ್ಕೆ ಸಾಗಿಸಿ ಕರ್ನಾಟಕ ರಾಜ್ಯಕ್ಕೆ ತೆರಿಗೆ ವಂಚಿಸುತ್ತಿರುವ ಕುಖ್ಯಾತ ಜಾಲ ಇದಾಗಿದೆ ಎಂದು ತಿಳಿದು ಬಂದಿದೆ.
ಬಂಧಿತರನ್ನು ಕಾಸರಗೋಡು ಚೇರಿಕುಂಡ್ ತಾಯಲ್ ಮನೆಯ ಮಹಮ್ಮದ್ ಮುಸ್ತಾಫ ಹಾಗೂ ಕಾಸರಗೋಡು ಹೊಸಂಗಡಿಯ ಸಮೃದ್ಧಿ ಹಿಲ್ಸೈಡ್ ಕಾಂಪ್ಲೆಕ್ಸ್ ಸಮೀಪದ ನಿವಾಸಿ ಸಚಿನ್ ಸಾಲ್ಯಾನ್ ಎಂದು ಗುರುತಿಸಲಾಗಿದೆ.
ಇವರ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಈ ವೇಳೆ ಆರೋಪಿಗಳು ತಲೆಮರೆಸಿಕೊಂಡಿದ್ದರು.ಬಳಿಕ ನಗರ ಪೊಲೀಸ್ ಕಮಿಷನರ್ ನೇತ್ರತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿಲಾಗಿದೆ. ಉರ್ವ ಪೊಲೀಸ್ ಠಾಣಾ ನಿರೀಕ್ಷಕ ರವೀಶ್ ಎಸ್. ನಾಯಕ್ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಕರಣವನ್ನು ಹೆಚ್ಚಿನ ತನಿಖೆಗೆ ಉರ್ವಾ ಪೂಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.