ಮಂಗಳೂರು, ಮಾ.16 : ರಂಗಭೂಮಿಯ ಹಿರಿಯ ಹಾಗೂ ಖ್ಯಾತ ಕಲಾವಿದ ತುಳು ಚಿತ್ರ ರಂಗಕ್ಕೆ ಅನನ್ಯ ಕೊಡುಗೆ ನೀಡಿದ ತುಳು ಚಿತ್ರನಟ ಕೆ.ಎನ್.ಟೇಲರ್ ಅವರ ಹೆಸರನ್ನು ನಗರದ ಪುರಭವನದ ಮುಂಭಾಗದ ವೃತ್ತಕ್ಕೆ ಇಡಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಈ ಬಗ್ಗೆ ಬುಧವಾರ ಮಂಗಳೂರಿನ ಪುರಭವನದ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ತುರವೇ ಸ್ಥಾಪಕಾಧ್ಯಕ್ಷ ಯೋಗಿಶ್ ಶೆಟ್ಟಿ ಜೆಪ್ಪು ಮಾತನಾಡಿ, ನಗರದ ಪುರಭವನದ ಮುಂಭಾಗದ ವೃತ್ತಕ್ಕೆ ಇತ್ತೀಚಿಗೆ ದೈವಧೀನರಾದ ತುಳು ಚಿತ್ರನಟ ಕೆ.ಎನ್.ಟೇಲರ್ ಅವರ ಹೆಸರನ್ನು ಇಡಬೇಕು ಹಾಗೂ ಆ ವೃತ್ತದಲ್ಲಿ ಅವರ ಪ್ರತಿಮೆ ಸ್ಥಾಪಿಸ ಬೇಕು ಎಂದು ಒತ್ತಾಯಿಸಿದರು.
ತುಳುನಾಡ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ರಾವ್ ಕಡಬ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಸಿರಾಜ್ ಅಡ್ಕರ್ ಮುಂತಾದವರು ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದರು.
ಪ್ರತಿಭಟನಾ ಸಭೆಯ ಬಳಿಕ ವೇದಿಕೆಯ ನಿಯೋಗವು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸಿತು. ಜೊತೆಗೆ ಈ ಬಗ್ಗೆ ತ್ವರಿತ ನಿರ್ಧಾರ ಕೈಗೊಳ್ಳುವಂತೆ ಮಂಗಳೂರು ಮಹಾನಗರ ಪಾಲಿಕೆಗೂ ಮನವಿ ಸಲ್ಲಿಸಲಾಯಿತು.