ಬಂಟ್ವಾಳ, ಮಾ.16: ಆಂಧ್ರಪ್ರದೇಶದಿಂದ ಮಂಗಳೂರಿಗೆ ಕಲ್ಲಂಗಡಿ ಹಣ್ಣುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಬಸ್ ನಿಲುದಾಣ ಮತ್ತು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯಲ್ಲಿ ಉರುಳಿ ಬಿದ್ದ ಘಟನೆ ನಿನ್ನೆ ಬಿ ಮೂಡ ಗ್ರಾಮದ ತಲಪಾಡಿಯಲ್ಲಿ ಸಂಭವಿಸಿದೆ. ಈ ವೇಳೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ವ್ಯಕ್ತಿಯೋರ್ವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಕುಂಪಿಲ ನಿವಾಸಿ ಸತೀಶ್ ಶೆಟ್ಟಿ (38) ಎಂದು ಹೆಸರಿಸಲಾಗಿದೆ.
ಸತೀಶ್ ಶೆಟ್ಟಿಯವರ ಮನೆಯಲ್ಲಿ ನೇಮೋತ್ಸವ ನಡೆದಿದ್ದು, ಅದಕ್ಕಾಗಿ ಬಂದಿದ್ದ ಚಿಕ್ಕಮ್ಮನ ಮಗ ಕಂದಾವರ ಗ್ರಾಮದ ನಿವಾಸಿ ಮಹೇಶ್ ಶೆಟ್ಟಿಯವರು ವಾಪಸಾಗುವಾಗ ಅವರ ಬೈಕ್ ನಲ್ಲಿ ಪ್ರಯಾಣಿಸಿ ಅಪರಾಹ್ನ 12 ಗಂಟೆಯ ಸುಮಾರಿಗೆ ತಲಪಾಡಿ ಬಸ್ ನಿಲುದಾಣದಲ್ಲಿಳಿದು ಮಂಗಳೂರಿಗೆ ಹೋಗಲು ಬಸ್ ಗಾಗಿ ಕಾಯುತ್ತಿದ್ದರು. ಮಹೇಶ್ ಶೆಟ್ಟಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಬಿ.ಸಿ.ರೋಡ್ ಕಡೆಯಿಂದ ವೇಗವಾಗಿ ಬಂದ ಕಲ್ಲಂಗಡಿ ಹಣ್ಣುಗಳನ್ನು ಹೊತ್ತಿದ್ದ ಲಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸತೀಶ್ ಶೆಟ್ಟಿಯವರಿಗೆ ಅಪ್ಪಳಿಸಿ ಬಸ್ ನಿಲುದಾಣಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಬದಿಯ ಮೂರು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಸತೀಶ್ ಶೆಟ್ಟಿಯವರನ್ನು ತಕ್ಷಣ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 3.15ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಅಪಘಾತದ ಬಳಿಕ ಲಾರಿಯ ಚಾಲಕ ಮತ್ತು ನಿರ್ವಾಹಕ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಅಪಘಾತದಿಂದಾಗಿ ಬಸ್ ನಿಲುದಾಣ ಸಂಪೂರ್ಣ ಧ್ವಂಸಗೊಂಡಿದ್ದು, ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಈ ಬಗ್ಗೆ ಮಹೇಶ್ ಶೆಟ್ಟಿಯವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಸಂಚಾರ ಠಾಣಾ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.