ಪುತ್ತೂರು, ಮಾ.16: ಶ್ಯಾಮ ಪ್ರಸಾದ್ ಶಾಸ್ತ್ರಿ ಅಸಹಜ ಸಾವಿನ ತನಿಖೆ ಅಂತಿಮ ಹಂತದಲ್ಲಿದೆ. ಇದನ್ನು ವ್ಯವಸ್ಥಿತ ಕೊಲೆ ಎಂದು ಬಿಂಬಿಸಲು ಗೋವಿಂದ ಶಾಸ್ತ್ರಿ ಎಂಬವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಈ ಹಿಂದೆ ದಾಖಲಿಸಿದ ಪ್ರತ್ಯೇಕ ದೂರುಗಳ ಹಿನ್ನೆಲೆಯಲ್ಲಿ ಗೋವಿಂದ ಶಾಸ್ತ್ರಿ ಅವರನ್ನು ಬಂಧಿಸಿ ಸಮಗ್ರ ತನಿಖೆ ನಡೆಸುವಂತೆ ಶ್ಯಾಮ್ ಪ್ರಸಾದ್ ಶಾಸ್ತ್ರಿಯವರ ಹಿರಿಯ ಸಹೋದರ ಸಿ.ಎಂ. ಗಂಗಾಧರ ಶಾಸ್ತ್ರಿ ಆಗ್ರಹಿಸಿದರು.
ದಿವಾಕರ ಶಾಸ್ತ್ರಿ ಮತ್ತು ಇತರರ ಮೇಲೆ ಕೊಲೆ ದೂರನ್ನು ಪುತ್ತೂರಿನ ನ್ಯಾಯಾಲಯದಲ್ಲಿ ದಾಖಲಿಸಿದ ಗೋವಿಂದ ಶಾಸ್ತ್ರಿಯವರ ಆರೋಪ ಸತ್ಯಕ್ಕೆ ದೂರವಾಗಿವೆ. ಶ್ಯಾಮಪ್ರಸಾದ್ ಶಾಸ್ತ್ರಿಯವರ ಆತ್ಮಹತ್ಯೆ ಮತ್ತು ಪ್ರೇಮಲತಾ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ತನಿಖಾಧಿಕಾರಿಗಳ ಮತ್ತು ನ್ಯಾಯಾಂಗ ವ್ಯವಸ್ಥೆಯ ದಿಕ್ಕು ತಪ್ಪಿಸುವ ಪ್ರಯತ್ನ ಇದಾಗಿದೆ. ರಾಘವೇಶ್ವರ ಶ್ರೀ, ಡಾ.ಪ್ರಭಾಕರ ಭಟ್ ಕಲ್ಲಡ್ಕ, ಬಿ.ಶಿವಶಂಕರ ಭಟ್ ಅವರು ಆತ್ಮಹತ್ಯೆ ಪ್ರಕರಣದ ಆರೋಪಿಗಳಾಗುವುದನ್ನು ತಪ್ಪಿಸಲು ಈ ದೂರನ್ನು ನ್ಯಾಯಾಲಯಕ್ಕೆ ನೀಡಲಾಗಿದೆ. ಪ್ರೇಮಲತಾ ದಿವಾಕರ್, ಡಾ.ಗಣೇಶ ಶರ್ಮ, ಕೆ.ಕೆ.ವೆಂಕಟಕೃಷ್ಣರಿಗೆ ಬಂದ ಬೆದರಿಕೆ ಪತ್ರಗಳನ್ನು ಗೋವಿಂದ ಶಾಸ್ತ್ರಿಯೇ ಕಳುಹಿಸಿರುವ ಸಂಶಯವಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ದೂರುದಾರ ಗೋವಿಂದ ಶಾಸ್ತ್ರಿ ನಮ್ಮ ಕುಟುಂಬದ ಆಪ್ತ ಬಂಧುವಲ್ಲ. ದೂರು ದಾಖಲಿಸಲು ಯಾವುದೋ ಸ್ವಾರ್ಥ ಉದ್ದೇಶ ಇರಬೇಕು ಎಂದು ಅಭಿಪ್ರಾಯಪಟ್ಟರು. ದಿವಾಕರ ಶಾಸ್ತ್ರಿಯವರ ಕೋವಿಗೆ ಬಂಟ್ವಾಳ ತಾಲೂಕು ಆಡಳಿತ ಪರವಾನಗಿ ನೀಡಿದೆ. ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಶಾಮ ಪ್ರಸಾದ್ ಶಾಸ್ತ್ರಿಯವರು ಇದೇ ಕೋವಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಖಿನ್ನತೆಯಿದ್ದ ಶ್ಯಾಮಪ್ರಸಾದ್ರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯಾವ ಕೋವಿ ಎಂದು ಆಯ್ಕೆ ಮಾಡುವ ವಿವೇಚನೆ ಇರಲಿಲ್ಲ. ಎರಡೂ ಕೋವಿಗಳನ್ನು ಪೊಲೀಸರು ತನಿಖೆ ಸಂದರ್ಭದಲ್ಲಿ ವಶಕ್ಕೆ ತೆಗೆದುಕೊಂಡಿರುತ್ತಾರೆ ಎಂದರು. ದಿ. ಶ್ಯಾಮ್ ಪ್ರಸಾದ್ ಶಾಸ್ತ್ರಿಯವರ ಪತ್ನಿ ಸಂದ್ಯಾ ಲಕ್ಷ್ಮಿ ಉಪಸ್ಥಿತರಿದ್ದರು.