ಮಂಗಳೂರು,ಮಾ.11: ಇಂದಿನಿಂದ ಮಾ.28ರವರೆಗೆ ರಾಜ್ಯದ 1032 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳ 200ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ವಿಧಿಸಲು ಪೊಲೀಸ್ ಆಯುಕ್ತ ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆಸಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ, ಒಟ್ಟು 6.40 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ಕಾರ್ಯಕಕ್ಕೆ 1032 ಮುಖ್ಯ ಅಧೀಕ್ಷಕರು, 1032 ಸಹಮುಖ್ಯ ಅಧೀಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಾಮಾಣ್ಯ ಪರೀಕ್ಷಾ ಕೇಂದ್ರಗಳಿಗೆ ತಲಾ 3 ಜನರನ್ನೊಳಗೊಂಡ 2,478 ಸಿಟ್ಟಿಂಗ್ಸ್ಕ್ವಾರ್ಡ್ಗಳ ತಂಡ, ಸೂಕ್ಷ್ಮ ಕೇಂದ್ರಗಳಿಗೆ ತಲಾ ಐದು ಜನರ 775 ಸಿಟ್ಟಿಂಗ್ಸ್ಕ್ವಾರ್ಡ್ಗಳ ತಂಡ ಮತ್ತು ಅತೀ ಸೂಕ್ಷ್ಮ ಕೇಂದ್ರಗಳಿಗೆ ತಲಾ 6 ಜನರುಳ್ಳ 306 ಸಿಟ್ಟಿಂಗ್ಸ್ಕ್ವಾರ್ಡ್ಗಳ ತಂಡ ರಚಿಸಲಾಗಿದೆ.
ಪೊಲೀಸ್ ಬಂದೋಬಸ್ತ್
ಕಳೆದ ವರ್ಷಕ್ಕಿಂತ ಈ ವರ್ಷ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ 27 ಸಾವಿರದಷ್ಟು ಹೆಚ್ಚಾಗಿದೆ. ರಾಜ್ಯಾದ್ಯಂತ ಒಟ್ಟು 1032 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಇವುಗಳಲ್ಲಿ 155 ಸೂಕ್ಷ್ಮ ಹಾಗೂ 51 ಅತಿ ಸೂಕ್ಷ್ಮಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದೆ. ಪ್ರತೀ ಪರೀಕ್ಷಾ ಕೇಂದ್ರಕ್ಕೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ವಿಡಿಯೋ ರೆಕಾರ್ಡರ್ನೊಂದಿಗೆ ಗಸ್ತು ತಿರುತ್ತಿರುತ್ತಾರೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಅವರು ವಿವರಿಸಿದರು.
ಸಹಾಯವಾಣಿ ಆರಂಭ
ಪರೀಕ್ಷೆ ಬಗ್ಗೆ ಯಾವುದೇ ಗೊಂದಲಗಳಿದ್ದರೆ ಪರಿಹರಿಸಿಕೊಳ್ಳಲು ವಿದ್ಯಾರ್ಥಿಗಳಿಗಾಗಿ ಈ ವರ್ಷವೂ ಇಲಾಖೆಯಿಂದ ಸಹಾಯವಾಣಿ(080-23083800/ 23361858) ಆರಂಭಿಸಲಾಗಿದೆ. ಭಾನುವಾರವೂ ಸೇರಿದಂತೆ ಪರೀಕ್ಷಾ ಮುಕ್ತಾಯದ ದಿನವರೆಗೂ ಬೆಳಗ್ಗೆ 9ರಿಂದ ರಾತ್ರಿ 9ರವರೆಗೂ ಈ ಸಹಾಯವಾಣಿಗಳು ಕಾರ್ಯನಿರ್ವಹಿಸಲಿವೆ ಎಂದು ಇದೇ ವೇಳೆ ಪಲ್ಲವಿ ಅಕುರಾತಿ ತಿಳಿಸಿದರು.