ಉಳ್ಳಾಲ. ಮಾ, 11: ಇಂದು ಸಮಾಜದಲ್ಲಿ ಸಾಮರಸ್ಯ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಯುವಕರು ಜಾತ್ಯತೀತ ಮೌಲ್ಯಗಳನ್ನು ಉಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ಅವರು ಸುಂಕದಕಟ್ಟೆಯ ಕಿದ್ಮತುಲ್ ಇಸ್ಲಾಂ ಸೋಶಿಯಲ್ ಆಂಡ್ ವೆಲ್ಫೇರ್ ಅಸೋಸಿಯೇಶನ್ನ ದ್ವಿತೀಯ ವಾರ್ಷಿಕೋತ್ಸವ ಸಮಾರಂಭ ಸುಂಕದಕಟ್ಟೆಯಲ್ಲಿ ಇತ್ತಿಚೆಗೆ ನಡೆದ ಏಕದಿನ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬದ್ರಿಯಾ ಜುಮಾ ಮಸೀದಿಯ ಮುದರ್ರಿಸ್ ಕೆಬಿ ಅಬ್ದುಲ್ ರಝಾಕ್ ಮಿಸ್ಬಾಹಿ ಮಾತನಾಡಿ, ಯುವ ಜನತೆಯು ಇಂದು ಅಡ್ಡ ಹಾದಿಯನ್ನು ತುಳಿಯುತ್ತಿದ್ದು ಈ ನಿಟ್ಟಿನಲ್ಲಿ ಒಂದು ಸಂಘಟಿತ ಧಾರ್ಮಿಕ ಉದ್ಭೋದನೆಯ ಅಗತ್ಯವಿದೆ ಎಂದರು.
ಕಾರ್ಯಕ್ರಮವನ್ನು ಪಳ್ಳಿಕ್ಕೆರೆ ಸಂಯುಕ್ತ ಖಾಝಿ ಪಿಕೆ ಅಬ್ದುಲ್ ಕಾದರ್ ಮುಸ್ಲಿಯಾರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಮೀರ್ ದಾರಿಮಿ ಕೊಲ್ಲಂ ಧಾರ್ಮಿಕ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸೈಯದ್ ಬದ್ರುದ್ದೀನ್ ಸಖಾಫಿ ತಂಙಳ್, ಮಂಜೇಶ್ವರ ಶಾಸಕ ಪಿಬಿ ಅಬ್ದುಲ್ ರಝಾಕ್, ಜಿಲ್ಲಾ ಪಂಚಾಯತ್ ಸದಸ್ಯ ಎಂಎಸ್ ಮುಹಮ್ಮದ್, ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ, ಸದಸ್ಯ ಇಸ್ಮಾಯಿಲ್ ಸೆರಾಜೆ ಮತ್ತಿತರರು ಉಪಸ್ಥಿತರಿದ್ದರು