ಕುಂದಾಪುರ: ಇಲ್ಲಿನ ಬಸ್ರೂರು ಮೂರುಕೈ ಸಮೀಪ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಸಲುವಾಗಿ ಹೆದ್ದಾರಿ ಸಮೀಪದಲ್ಲಿ ಬೃಹತ್ ಗಾತ್ರದ ಮರವೊಂದನ್ನು ಕಡಿದು ಉರುಳಿಸಿದ ಪರಿಣಾಮ ಗಂಟೆಗಟ್ಟಲೇ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಕುಂದಾಪುರ ಶಾಸ್ತ್ರೀ ವೃತ್ತದಿಂದ ಕುಂದಾಪುರ ಬಸ್ರೂರು ಮೂರುಕೈವೆರೆಗಿನ ವ್ಯಾಪ್ತಿಯಲ್ಲಿ ಕಳೆದ ಕೆಲವಾರು ದಿನಗಳಿಂದ ಹೆದ್ದಾರಿ ಚತುಷ್ಪತ ಕಾಮಗಾರಿ ಬರದಿಂದ ಸಾಗುತ್ತಿದ್ದು ಶನಿವಾರ ಮಧ್ಯಾಹ್ನ 2.15ರ ಸುಮಾರಿಗೆ ಇಲ್ಲಿನ ಬಸ್ರೂರು ಮೂರುಕೈ ಸಮೀಪದಲ್ಲಿರುವ ದೊಡ್ಡ ಗಾತ್ರದ ಮರವೊಂದನ್ನು ಧರೆಗುರುಳಿಸಲಾಗಿತ್ತು. ಯಾವುದೇ ರೆಂಬೆಕೊಂಬೆಗಳನ್ನು ಮೊದಲಿಗೆ ಕಡಿಯದೇ ಸಂಪೂರ್ಣ ಮರವನ್ನು ಕಟಾವು ಮಾಡಿದ ಪರಿಣಾಮ ಬೃಹತ್ ಮರವು ಕುಂದಾಪುರ-ಸಿದ್ದಾಪುರ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿತ್ತು.
ಗಂಟೆಗಟ್ಟಲೇ ಟ್ರಾಫಿಕ್ ಜಾಮ್
ರಸ್ತೆ ಮೇಲೆ ಮರವು ಉರುಳಿದ ಪರಿಣಾಮ ಕುಂದಾಪುರ-ಉಡುಪಿ ಹಾಗೂ ಕುಂದಾಪುರ-ಸಿದ್ದಾಪುರ ಹೆದ್ದಾರಿಯಲ್ಲಿ ಕಿಲೋಮೀಟರ್ ದೂರಕ್ಕೆ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಒಂದೆರಡು ಆಂಬುಲೆನ್ಸುಗಳು ಕೂಡ ಈ ವಾಹನ ದಟ್ಟಣೆಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಇನ್ನು ಶನಿವಾರ ಕುಂದಾಪುರದಲ್ಲಿ ದೊಡ್ಡ ಪ್ರಮಾಣದ ಸಂತೆ ನಡೆಯುವ ಕಾರಣ, ಶಾಲಾ-ಕಾಲೇಜುಗಳು ರಜೆಯಿದ್ದ ಕಾರಣ ನೂರಾರು ವಾಹನಗಳು ರಸ್ತೆಯಲ್ಲಿದ್ದವು. ಅರ್ಧಗಂಟೆಯಾದರೂ ಸ್ಥಳಕ್ಕೆ ಕುಂದಾಪುರ ಸಂಚಾರಿ ಠಾಣೆ ಸಿಬ್ಬಂದಿಗಳು ಬಾರದಿರುವುದು ಸ್ಥಳಿಯರನ್ನು ಹಾಗೂ ವಾಹನ ಸವಾರರನ್ನು ಕೆರಳಿಸಿತ್ತು.
ಬಾರದ ಟ್ರಾಫಿಕ್ ಪೊಲೀಸರು
ಮಧ್ಯಾಹ್ನ 2.15ರ ಸುಮಾರಿಗೆ ಮರ ಉರುಳಿಸಿದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದ್ದು ಅರ್ಧ ತಾಸು ಕಳೆದರೂ ಕುಂದಾಪುರ ಸಂಚಾರಿ ಪೊಲೀಸರು ಮಾತ್ರ ಇತ್ತ ಬಾರಲೇ ಇಲ್ಲ. ಪೊಲೀಸರು ಬಾರದೇ ಕುಂದಾಪುರ ಶಾಸ್ತ್ರೀ ವೃತ್ತದವರೆಗೂ ಹಾಗೂ ವಿನಾಯಕ ಕೋಡಿ ಜಂಕ್ಷನ್ ತನಕವೂ ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೊನೆಗೂ ರಸ್ತೆಗಿಳಿದ ಸಾರ್ವಜನಿಕರೇ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಹರಸಾಹಸಪಡುವ ದೃಶ್ಯ ಮಧ್ಯಾಹ್ನ 2.50 ರವರೆಗೂ ಕಂಡುಬಂತು.