ಮಂಗಳೂರು, ಫೆ.26: ತುಳು ಸಾಧಕರ ಸಾಕ್ಷ್ಯಚಿತ್ರಗಳ ಬಿಡುಗಡೆ ಕಾರ್ಯಕ್ರಮ ಶನಿವಾರ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ತುಳುಭವನದಲ್ಲಿ ನಡೆಯಿತು.
ರಂಗಕರ್ಮಿ ಸದಾನಂದ ಸುವರ್ಣ ಉದ್ಘಾಟನೆ ನೆರವೇರಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಎಮ್. ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸಿದ್ದರು.
ತುಳು ಅಕಾಡೆಮಿಯು 2015-16ರ ಸಾಲಿನ ಕ್ರಿಯಾ ಯೋಜನೆಯಲ್ಲಿ ಅವಕಾಶ ಕಲ್ಪಿಸಿಕೊಂಡಿರುವಂತೆ ತುಳು ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಒಟ್ಟು 14 ಮಹನೀಯರ ಕುರಿತಂತೆ ತಲಾ 25 ನಿಮಿಷಗಳ 14 ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದೆ.
ತುಳು ಭಾಷೆ ಮತ್ತು ಸಂಸ್ಕೃತಿಯ ಪೋಷಣೆ ಮತ್ತು ಬೆಳವಣಿಗೆಗಾಗಿ ಅನನ್ಯ ಕೊಡುಗೆ ನೀಡಿದವರಾದ ಸಾಹಿತಿ ಡಾ. ಅಮೃತ ಸೋಮೇಶ್ವರ, ಸಾಹಿತಿ ಕವಿ ನಾಡೋಜ ಡಾ. ಕಯ್ಯೆರ ಕಿಞ್ಞಣ್ಣ ರೈ, ಜಾನಪದ ವಿದ್ವಾಂಸರಾದ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್, ಯಕ್ಷಗಾನ ಕಲಾವಿದರಾದ ಮಿಜಾರ್ ಅಣ್ಣಪ್ಪ, ಅಳಿಕೆ ರಾಮಯ್ಯ ರೈ, ಜಾನಪದ ಕಲಾವಿದ ಬೆಟ್ಟಂಪಾಡಿ ಚೋಮ, ಖ್ಯಾತ ಭಾಗವತರಾದ ದಾಸರಬೈಲು ಚನಿಯ ನಾಯ್ಕಾ, ನಾಟಕಕಾರ ಮಚ್ಚೇಂದ್ರನಾಥ ಪಾಂಡೇಶ್ವರ, ಸಂಘಟಕರಾದ ಎಸ್. ಯು. ಪಣಿಯಾಡಿ, ಸಂಶೋಧಕರಾದ ವೆಂಕಟರಾಜ ಪುಣಿಚಿತ್ತಾಯ, ಪತ್ರಕರ್ತ ಹಾಗೂ ಸಹಕಾರಿ ದುರೀಣರಾದ ಅಮ್ಮೆಂಬಳ ಬಾಳಪ್ಪ, ನಾಟಕ ಮತ್ತು ಚಲನಚಿತ್ರ ನಟ ಕೆ. ಎನ್. ಟೈಲರ್, ಜಾನಪದ ಸಂಶೋಧಕ ಡಾ. ಕೊಯಿರಾ ಬಾಳೆಪುಣಿ, ಜಾನಪದ ಕಲಾವಿದೆ ಕೊರಪ್ಪೊಳು ಇವರುಗಳ ಕುರಿತ ಸಾಕ್ಷ್ಯಚಿತ್ರಗಳು ಬಿಡುಗಡೆಯಾಯಿತು.