ಮಂಗಳೂರು ಫೆ.28: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ 2015ನೆ ಸಾಲಿನ ಅಕಾಡಮಿ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಮತ್ತು ಯುವ ಪುರಸ್ಕಾರ ಪ್ರದಾನ ಸಮಾರಂಭ ಮಾ. 5, 6ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನಾಗ ಯಕ್ಷಿ ಸಭಾಭವನದಲ್ಲಿ ನಡೆಯಲಿದೆ.
ರಾಮ ಚಂದ್ರ ಮಹಾಬಲೇಶ್ವರ ಶೇಟ್ ಶಿರಸಿ ( ಕೊಂಕಣಿ ಸಾಹಿತ್ಯ) ಕಾಸರಗೋಡು ಚಿನ್ನಾ (ಕೊಂಕಣಿ ಕಲೆ ) ಆಲೂಪೀಲೂ ಮರಾಠಿ ( ಕೊಂಕಣಿ ಜಾನಪದ) ಅವರಿಗೆ ಅಕಾಡಮಿ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಫಾ. ಡೆನಿಸ್ ಕಾಸ್ತೆಲಿನೊ ಮಂಗಳೂರು ( ಕೊಂಕಣಿ ಲೇಖನ ಸಂಗ್ರಹ- ದಲಿತ್), ಓಂ ಗಣೇಶ್ ಉಪ್ಪುಂದ ( ಕೊಂಕಣಿಗೆ ಭಾಷಾಂತರ ನಾಟಕ- ಬಾಯ್ಲ ಭ್ಹಾಡೆ ಬಾಯ್ಲ ) ರೋನಿ ಅರುಣ್ ( ಕೊಂಕಣಿ ಜೀವನ ಚರಿತ್ರೆಯ ಅಧ್ಯಯನ ಕೃತಿ )ಅವರಿಗೆ ಪುಸ್ತಕ ಬಹುಮಾನ ಪ್ರದಾನಿಸಲಾಗುವುದು.
ರಾಜರಾಮ ಸುರೇಶ್ ಪ್ರಭು ಭಟ್ಕಳ, ನಸರುಲ್ಲಾ ಅಸ್ಕೆರಿ ಭಟ್ಕಳ, ಅಂಜಲಿ ವಿಲ್ಸನ್ ವಾಜ್ ಶಿರಸಿ ಅವರಿಗೆ ಯುವ ಪುರಸ್ಕಾರ ನೀಡಿ ಗೌರವಿಸಲಾಗುವುದು.ಸಾಧಕರಾದ ಭಟ್ಕಳದ ಸಾಮಾಜಿಕ, ಶೈಕ್ಷಣಿಕ ರಂಗಗಳಲ್ಲಿ ಸೇವೆಗೈದ ಹಿರಿಯ ಧುರೀಣ ಎಸ್.ಎಂ. ಸೈಯದ್ ಖಲೀಲ್ ಭಟ್ಕಳ, ಪ್ರದೀಪ್ ಜಿ. ಪೈ ಭಟ್ಕಳ, ಜಾರ್ಜ್ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಲಾಗುವುದು.
ಮಾ. 5 ರಂದು ಸಂಜೆ 5 ಗಂಟೆಗೆ ಕೊಂಕಣಿ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ. ಮಾ.6ರಂದು ಬೆಳಗ್ಗೆ 10:30ಕ್ಕೆ ಪ್ರಶಸ್ತಿ ವಿಜೇತರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 4ಕ್ಕೆ ಸಾಂಸ್ಕೃತಿಕ ಮೆರವಣಿಗೆ ಇದೆ. 5 ಗಂಟೆಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.