
ಮಂಗಳೂರು,ಜ.17; ಟೀಮ್ ಮಂಗಳೂರು ಹಾಗೂ ರೋಟರಿ ಆಶ್ರಯದಲ್ಲಿ ಎರಡು ದಿನಗಳ ಪಣಂಬೂರು ಕಡಲ ಕಿನಾರೆಯಲ್ಲಿ ಆಯೋಜಿಸಲಾದ ಗಾಳಿಪಟ ಉತ್ಸವಕ್ಕೆ ಶನಿವಾರ ಸಂಜೆ ಚಾಲನೆ ನೀಡಲಾಯಿತು.
`ಟೀಮ್ ಮಂಗಳೂರು’ ಹವ್ಯಾಸಿ ಗಾಳಿಪಟ ತಂಡದ ಸಹಕಾರದೊಂದಿಗೆ ರೋಟರಿ ಕ್ಲಬ್ ಈ ಉತ್ಸವ ಆಯೋಜಿಸಿದ್ದು, ರಾತ್ರಿ ಬೆಳಕಿನ ವರ್ಣ ಲೇಪದೊಂದಿಗೆ ವಿಶೇಷವಾಗಿರುವ ನೈಟ್ ಕೈಟ್ಫ್ಲೈಯಿಂಗ್ ಕೂಡಾ ಈ ಬಾರಿಯ ವಿಶೇಷ.
ಉತ್ಸವದಲ್ಲಿ ಭಾರತೀಯ ಸಾಂಸ್ಕೃತಿಕ ಪ್ರತೀಕಗಳ ಬೃಹತ್ ಗಾಳಿಪಟಗಳ ಜತೆಗೆ ವಿದೇಶದ ಹಲವಾರು ತಾಂತ್ರಿಕ ಪ್ರಕಾರಗಳ ಮತ್ತು ವಾಯು ತುಂಬಿ ಹಾರಲಿರುವ ಎರೋಫೋಯ್ಗ್ ಗಾಳಿಪಟಗಳು ಬಾನಿಗೇರಿ ಮನರಂಜಿಸಿತು. ಜತೆಗೆ ತುಳುನಾಡಿನ ನೇತ್ರಾವತಿ ನದಿಯ ಸಂರಕ್ಷಣೆಗಾಗಿ `ನೇತ್ರಾವತಿ ಉಳಿಸಿ’ ಎಂಬ ಪರಿಸರ ಜಾಗೃತಿಯ ಸಂದೇಶವುಳ್ಳ ಗಾಳಿಪಟವೂ ಹಾರಾಡಿತು.

`ಸಮಾನತೆ ಮತ್ತು ಏಕತೆ’ ಎಂಬ ದೃಷ್ಟಿಕೋನದಿಂದ `ಒಂದೇ ಆಕಾಶ, ಒಂದೇ ನೆಲ, ಒಂದೇ ಕುಟುಂಬ’ ಎಂಬ ಧ್ಯೇಯ ಘೋಷಣೆಯೊಂದಿಗೆ ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆದಿದೆ. ಜಾತಿ, ಧರ್ಮ, ಮತ, ಪಂಥ ಎಂಬ ಯಾವ ವಿಂಗಡನೆಯೂ ಇಲ್ಲದೆ ಸರ್ವರೂ ಸಂತಸ ಪಡುವಲ್ಲಿ ಸಮಾನ ಅರ್ಹರು ಎಂಬುದು ಈ ಉತ್ಸವದ ಮೂಲ ಉದ್ದೇಶವಾಗಿತ್ತು.
ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಆಸ್ಟ್ರೇಲಿಯಾ, ಟರ್ಕಿ, ನೆದರ್ಲ್ಯಾಂಡ್, ಕಾಂಬೋಡಿಯಾ, ಉಕ್ರೇನ್, ಕುವೈಟ್, ಥಾಯ್ಲೆಂಡ್, ನೈಜೀರಿಯಾ, ಇಟಲಿ, ಭಾರತ ಸೇರಿದಂತೆ 14 ರಾಷ್ಟ್ರಗಳ ಗಾಳಿಪಟ ತಂಡಗಳು ಉತ್ಸವದಲ್ಲಿ ಭಾಗವಹಿಸಿದವು.
ಬಾನಂಗಳದಲ್ಲಿ ಹಾರಾಡುತ್ತಿರುವ ಬಣ್ಣಬಣ್ಣದ ಗಾಳಿಪಟಗಳ ಈ ದೃಶ್ಯ ವೈಭವವನ್ನು ನೋಡಲು ಚಿಣ್ಣರಿಂದ ಹಿಡಿದು ಹಿರಿಯರ ತನಕ ಜನಸ್ತೋಮವೇ ಕಡಲ ಕಿನಾರೆಯಲ್ಲಿ ಸೇರಿತ್ತು. ಪಡುವಿನಂಚಿನಲ್ಲಿ ಸೂರ್ಯ ಮುಳುಗುತ್ತಿದ್ದಂತೆಯೇ ವಿಭಿನ್ನ ಪರಿಕಲ್ಪನೆಯಲ್ಲಿ ಮೂಡಿಬಂದ ಪಟಗಳು ಬಾನಂಗಳದಲ್ಲಿ ಹಾರುತ್ತಿದ್ದುದನ್ನು ನೋಡಿ ಪ್ರೇಕ್ಷಕರು ಕೇಕೆ ಹಾಕಿ ಸಂಭ್ರಮಿಸಿದರು.

ಗಾಳಿಪಟ ಹಾರಿಸುವುದರಲ್ಲಿ ವಿಶ್ವಖ್ಯಾತಿ ಪಡೆದ ಟೀಂ ಮಂಗಳೂರು ಕಳೆದ ಹದಿನೇಳು ವರ್ಷಗಳಿಂದ ವೈಶಿಷ್ಟ್ಯಪೂರ್ಣ ಗಾಳಿಪಟಗಳನ್ನು ಬಾನಂಗಳದಲ್ಲಿ ಹಾರಿಸುವ ಮೂಲಕ ಜನಮನ್ನಣೆ ಗಳಿಸಿತ್ತು. ಈ ಬಾರಿಯೂ ಕಥಕ್ ಯಕ್ಷಗಾನ ರೂಪಕ `ವಿಭೀಷಣ’ನ ಮುಖವಾಡದ ಗಾಳಿಪಟ ನೆರದವರ ಪ್ರಶಂಸೆಗೆ ಪಾತ್ರವಾಯಿತು. ಜತೆಗೆ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಹಾಗೂ ಪತ್ನಿ ಬ್ಲಾಸಂ ಶ್ರೀದೇವಿಯ ಮುಖವರ್ಣದ ಗಾಳಿಪಟವನ್ನು ಹಾರಿಸಿದರು.
ಗಾಳಿಪಟ ಉತ್ಸವಕ್ಕೆ ಮೆರುಗು ನೀಟ್ಟಿನಲ್ಲಿ ಎಬಿಸಿಡಿ ಸಂಸ್ಥೆಯಿಂದ ಇದೇ ಸಂದರ್ಭದಲ್ಲಿ ನಡೆದ `ಸಾಂಸ್ಕೃತಿಕ ವೈಭವ’ ಗಾಳಿಪಟ ಉತ್ಸವಕ್ಕೆ ಮತ್ತಷ್ಟು ಸಂಭ್ರಮ ನೀಡಿತ್ತು.