ಮಂಗಳೂರು,ನ.24: ತುಳು ಭಾಷೆ -ಸಂಸ್ಕೃತಿ, ನಾಡು -ನುಡಿಯ ಪ್ರೇಮವನ್ನು ಉಳಿಸಿ-ಬೆಳೆಸುವ ಕೆಲಸ ಮಕ್ಕಳ ಮಟ್ಟದಿಂದಲೇ ಆಗಬೇಕಾದುದು ಅಗತ್ಯ. ಈ ನೆಲೆಯಲ್ಲಿ ಮಕ್ಕಳಲ್ಲಿ ಆಸಕ್ತಿ ಮೂಡಿಸುವಂತೆ ರೂಪಿಸಿದ ಕುಡ್ಲ ತುಳು ಮಿನದನ-2015 ಸಾರ್ಥಕ ಕಾರ್ಯಕ್ರಮವಾಗಿದೆ. ಶಾಲಾ ಮಕ್ಕಳಿಗೆ ವಿವಿಧ ಸಾಹಿತ್ಯೀಕ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿದ್ದು ಶ್ಲಾಘನೀಯ ಕಾರ್ಯ’ಎಂದು ವಿಧಾನ ಪರಿಷತ್ ಮತ್ತು ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾ.ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಶಾರದ ವಿದ್ಯಾ ಸಂಸ್ಥೆಗಳು, ಯುವವಾಹಿನಿ (ರಿ)ಮಂಗಳೂರು, ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಹಯೋಗದೊಂದಿಗೆ ಆಯೋಜಿಸಿದ `ಕುಡ್ಲ ತುಳು ಮಿನದನ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಂ.ಆರ್.ಪಿ.ಎಲ್ನ ಮ್ಯಾನೇಜರ್ ವೀಣಾ ಟಿ.ಶೆಟ್ಟಿ ಮಾತನಾಡಿ ತುಳು ಕಾರ್ಯಕ್ರಮಗಳಲ್ಲಿ ತುಳುವರು ಹೆಚ್ಚೆಚ್ಚು ಭಾಗವಹಿಸುವ ಮೂಲಕ ತುಳುವನ್ನು ಪ್ರೋತ್ಸಾಹಿಸಬೇಕು. ತುಳು ಅಕಾಡೆಮಿ ರೂಪಿಸಿದ ಇಂತಹ ಕಾರ್ಯಕ್ರಮ ಮಾದರಿಯಾಗಿದ್ದು, ತುಳುವರನ್ನು ಜಾಗೃತಗೊಳಿಸುತ್ತವೆ. ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್.ಲೋಬೋ ಉಪಸ್ಥಿತರಿದ್ದು ಬಹುಮಾನ ವಿತರಿಸಿದರು. ತುಳು ಅಕಾಡೆಮಿ ಅಧ್ಯಕ್ಷರಾದ ಎಮ್.ಜಾನಕಿ ಬ್ರಹ್ಮಾವರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕೆ.ಎಸ್.ಕಲ್ಲೂರಾಯ, ಪ್ರದೀಪ್ ಕುಮಾರ್ ಕಲ್ಕೂರ, ಡಾ.ಲೀಲಾ ಉಪಾಧ್ಯಾಯ , ಹರೀಶ್ ಕೆ.ಪೂಜಾರಿ, ದೇವಕಿ ಅಚ್ಚುತ, ಸುಧಾಕರ ಪೇಜಾವರ, ಅಕಾಡೆಮಿ ಸದಸ್ಯರಾದ ರೂಪಕಲಾ ಆಳ್ವ, ಮೋಹನ್ ಕೊಪ್ಪಲ ಕದ್ರಿ, ಪ್ರೋ.ಡಿ.ವೇದಾವತಿ, ಜಯಶೀಲ ಉಪಸ್ಥಿತರಿದ್ದರು.
ದಯಾನಂದ ಕಟೀಲು ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಸದಸ್ಯ ರಘು ಇಡ್ಕಿದು ಧನ್ಯವಾದ ಸಮರ್ಪಿಸಿದರು. ಸಮಾರಂಭದ ಬಳಿಕ `ಕೋಡ್ದಬ್ಬು ತಮಾನಿಗ ತುಳು ನೃತ್ಯರೂಪಕ ಪ್ರದರ್ಶನಗೊಂಡಿತು.