ಮಂಗಳೂರು,ನ.19: ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಇಲಾಖೆ ನೀಡುವ ನ್ಯಾಷನಲ್ ಚೈಲ್ಡ್ ಅವಾರ್ಡ್ ಫಾರ್ಎಕ್ಸ್ಪೆನ್ಶನಲ್ ಅಚೀವ್ಮೆಂಟ್-೨೦೧೫ ರಾಷ್ಟ್ರೀಯ ಅಸಾಧಾರಣ ಪ್ರತಿಭಾ ಪುರಸ್ಕಾರವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಸ್ವೀಕರಿಸಿರುವ ಮೂಡಬಿದಿರೆ ಜೈನ ಪ್ರೌಢಶಾಲಾ ವಿದ್ಯಾರ್ಥಿನಿ ಪಂಚಮಿ ಮಾರೂರು ಅವರನ್ನು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪೌರ ಸನ್ಮಾನ ನೀಡಿ ಗೌರವಿಸಲಾಯ್ತು.
ನಗರದ ಕೊಡಿಯಾಲ್ಬೈಲ್ನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ಪಂಚಮಿ ಮಾರೂರು ಅವರನ್ನುಅಭಿನಂದಿಸುತ್ತಾ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಎಳವಯಸಿನಲ್ಲೆ ಹೆತ್ತವರು ಗುರುತಿಸಿ ಪ್ರೋತ್ಸಾಹಿಸಬೇಕು, ಇದರಿಂದ ಮಕ್ಕಳಲ್ಲಿರುವ ಅಗಾಧ ಪ್ರತಿಭೆ ಬೆಳಕಿಗೆ ಬಂದು ಉನ್ನತ ಸ್ಥಾನ ಮಾನಗಳಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ನುಡಿದರು.
ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು. ಕೆ.ಎಸ್. ಕಲ್ಲೂರಾಯ, ಲೀಲಾ ಉಪಾಧ್ಯಾಯ, ಡಾ. ಎಂ. ಪ್ರಭಾಕರ ಜೋಶಿ, ವಿಜಯಲಕ್ಷ್ಮೀ ಬಿ. ಶೆಟ್ಟಿ, ಪೊಳಲಿ ನಿತ್ಯಾನಂದಕಾರಂತ, ದಯಾನಂದ ಪೈ, ಬಾಲಕೃಷ್ಣ ಭಾರದ್ವಾಜ್, ಐತ್ತಪ್ಪ ಬಿ. ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
ಪೂರ್ಣಿಮಾ ರಾವ್ ಪೇಜಾವರ, ಧನ್ಯವಾದಗೈದರು, ದಯಾನಂದ ಕಟೀಲ್ ಕಾರ್ಯಕ್ರಮ ನಿರೂಪಿಸಿದರು.