ಮಂಗಳೂರು, ನ.19: ಬಂಟ್ವಾಳ ತಾಲೂಕಿನ ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಉದ್ಯೋಗ ಮೇಳವನ್ನು ಸೆಲ್ಕೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಡಾ.ಎಚ್. ಹರೀಶ್ ಹಂದೆ ಅವರು ಗುರುವಾರ ಬೆಳಿಗ್ಗೆ ಉದ್ಘಾಟಿಸಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಎಜ್ಯುಕೇಶನ್ ಸಂಸ್ಥೆಯ ಅದ್ಘ್ಯಕ್ಷ ಡಾ. ಮೋಹನ್ ಆಳ್ವ,ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ದ.ಕ.ಜಿಲ್ಲಾ ಎಸ್ಪಿ ಡಾ. ಶರಣಪ್ಪ, ಅಪರ ಜಿಲ್ಲಾಕಾರಿ ಕುಮಾರ್, ಜಿಪಂ ಸಿಇಒ ಶ್ರೀವಿದ್ಯಾ, ಬುಡ ಅಧ್ಯಕ್ಷ ಪಿಯೂಷ್ ರೊಡ್ರಿಗಸ್, ಜಿಪಂ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ಉದ್ಯೋಗ ಮೇಳ ಸಂಯೋಜಕ ವಿವೇಕ್ ಆಳ್ವ, ಡಾ.ಯು.ಟಿ.ಇಫ್ತಿಕಾರ್ ಅಲಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉದ್ಯೋಗ ಮೇಳದಲ್ಲಿ 15 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ಆಚರಿ ಮೂಡಿಸಿದರು.
ದ.ಕ. ಜಿಲ್ಲಾಡಳಿತ, ಪರಿಸರ ಮತ್ತು ಜೀವಿಶಾಸ ಇಲಾಖೆಯ ಸಹಭಾಗಿತ್ವದಲ್ಲಿ ನಡೆಯಲಿರುವ ಈ ‘ಮಂಗಳೂರು ಉದ್ಯೋಗ ಮೇಳ 2015’ರಲ್ಲಿ ಭಾರತದ 213 ಕಂಪೆನಿಗಳು, 8 ವಿದೇಶಿ ಕಂಪೆನಿಗಳು ಭಾಗವಹಿಸಲು ನೋಂದಯಿಸಿಕೊಂಡಿವೆ ಎಂದು ದ.ಕ. ಜಿಲ್ಲಾಕಾರಿ ಎ.ಬಿ.ಇಬ್ರಾಹೀಂ ಮಾಹಿತಿ ನೀಡಿದರು.
ಈವರೆಗೆ 14,300 ಮಂದಿ ಉದ್ಯೋಗಾ ಕಾಂಕ್ಷಿಗಳು ಉದ್ಯೋಗಮೇಳದಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿದ್ದಾರೆ. ಕಳೆದ 30 ಗಂಟೆಗಳಲ್ಲಿ ಆನ್ಲೈನ್ನಲ್ಲಿ ಹೆಸರು ನೋಂದಾವಣೆ ಮಾಡುವ ಪ್ರಕ್ರಿಯೆ ನಿರೀಕ್ಷೆಗಿಂತಲೂ ಹೆಚ್ಚಿದೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಉದ್ಯೋಗಮೇಳದ ಕೌಂಟರ್ನಲ್ಲಿಯೂ ಹೆಸರನ್ನು ನೋಂದಾಯಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಉದ್ಯೋಗಮೇಳದಲ್ಲಿ ಸಂದರ್ಶನಕ್ಕೆ ಹಾಜರಾಗಲು ಬಯಸಿ ನೋಂದಾವಣೆ ಮಾಡಿದ ಉದ್ಯೋಗಾಕಾಂಕ್ಷಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶೇಕಡಾ 75ರಷ್ಟು ಮಂದಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಂದರ್ಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಪ್ರಸಕ್ತ ದ.ಕ. ಜಿಲ್ಲೆಯಲ್ಲಿ ಉದ್ಯೋಗವಿಲ್ಲದೆ ಕೆಲವು ಯುವಕರು ಕಿಡಿಗೇಡಿಗಳೊಂದಿಗೆ ಸೇರಿ ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸುತ್ತಿದ್ದಾರೆ. ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಮೂಲಕ ಯುವಕರು ತಪ್ಪುದಾರಿಯತ್ತ ಹೋಗುವುದನ್ನು ತಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಯುವಕರಿಗೆ ಉದ್ಯೋಗಮೇಳದ ಮೂಲಕ ಉದ್ಯೋಗ ದೊರಕಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದರು.
ವಿದ್ಯಾರ್ಹತೆಗೆ ತಕ್ಕಂತೆ ಕಲರ್ ಕೋಡಿಂಗ್
ಉದ್ಯೋಗಮೇಳದಲ್ಲಿ ಸಂದರ್ಶನಕ್ಕೆ ಬರುವವರು ಹೆಸರು ನೋಂದಾವಣೆಯಾದ ಕೂಡಲೆ ಅವರಿಗೆ ಅವರ ಶಿಕ್ಷಣದ ಅರ್ಹತೆಗೆ ತಕ್ಕಂತೆ ಕಲರ್ ಕೋಡಿಂಗ್ ನೀಡಲಾಯಿತು. ಕಂಪೆನಿಗಳ ಮಳಿಗೆಗಳ ಮುಂದೆ ಅವರಿಗೆ ಬೇಕಾದ ಉದ್ಯೋಗಿಗಳ ಅರ್ಹತೆಗೆ ತಕ್ಕಂತೆ ಕಲರ್ ಕೋಡನ್ನು ಅಳವಡಿಸಲಾಯಿತು.
ಅಭ್ಯರ್ಥಿಗೆ ನೀಡಲಾದ ಕಲರ್ ಕೋಡ್ ಕಂಪೆನಿಗಳ ಮುಂದೆ ಇರುವ ಕಲರ್ಕೋಡ್ಗೆ ಹೊಂದಾಣಿಕೆಯಾದರೆ ಆ ಕಂಪೆನಿಯ ಮಳಿಗೆಯಲ್ಲಿ ಉದ್ಯೋಗಾಕಾಂಕ್ಷಿ ಸಂದರ್ಶನಕ್ಕೆ ಹಾಜರಾಗುವ ವ್ಯವಸ್ಥೆ ಮಾಡಲಾಗಿತ್ತು.
ಕಳೆದ ಮೂರು ತಿಂಗಳಿನಿಂದ ಉದ್ಯೋಗ ಮೇಳದ ಯಶಸ್ಸಿಗೆ ಸಿದ್ಧತೆ ಮಾಡಲಾಗಿತ್ತು. ಬೆಂಗಳೂರು, ಮಂಗಳೂರು, ದುಬೈ, ಶಾರ್ಜಾ, ಅಬುಧಾಬಿಗಳಲ್ಲಿ ಸಭೆಯನ್ನು ನಡೆಸಲಾಗಿತ್ತು. ಉದ್ಯೋಗಾಕಾಂಕ್ಷಿಗಳು ಫೋಟೊ, ಬಯೋಡಾಟ, ಮಾರ್ಕ್ಸ್ ಕಾರ್ಡ್, ಅನುಭವ ಪ್ರಮಾಣ ಪತ್ರಗಳ ಹತ್ತು ಪ್ರತಿಗಳನ್ನು ತರಲು ಸೂಚಿಸಲಾತ್ತು. ಹತ್ತು ಪ್ರತಿ ತರದೆ ಇದ್ದವರಿಗೆ ಆವರಣದಲ್ಲಿ 7 ಜೆರಾಕ್ಸ್ ಮೆಷಿನ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಉದ್ಯೋಗಾಕಾಂಕ್ಷಿಗಳು ಕಾರ್ಪೊರೇಟ್ ಕಂಪೆನಿಗಳ ಸಂದರ್ಶನದಲ್ಲಿ ಭಾಗವಹಿಸುವ ರೀತಿಯಲ್ಲಿ ಸಭ್ಯತೆಯ ಉಡುಗೆಗಳೊಂದಿಗೆ ಬರಬೇಕು ಅವರಿಗೆ ಮೊದಲೇ ಸೂಚಿಸಲಾಗಿತ್ತು.
ಕಂಪೆನಿಗಳಿಗೆ ವಿಶೇಷ ವ್ಯವಸ್ಥೆ
ಬೆಂಗಳೂರಿನಿಂದ ಉದ್ಯೋಗಮೇಳದಲ್ಲಿ ಭಾಗವಹಿಸಲು ಬರುವ ಕಂಪೆನಿಗಳಿಗೆ 6 ವೋಲ್ವೋ ಬಸ್ ವ್ಯವಸ್ಥೆ, 1 ಟೆಂಪೊ ಟ್ರಾವೆಲರ್ ವ್ಯವಸ್ಥೆ ಮಾಡಲಾಗಿತ್ತು. ಭಾಗವಹಿಸುವ ಕಂಪೆನಿಗಳಿಗೆ ಕೆನರಾ ಎಂಜಿನಿಯರಿಂಗ್ ಕಾಲೇಜಿನ ಮೈನ್ಬ್ಲಾಕ್ನಲ್ಲಿ 100, ಹಾಸ್ಟೆಲ್ ಬ್ಲಾಕ್ನಲ್ಲಿ 40, ಮೆಕ್ಯಾನಿಕಲ್ ಬ್ಲಾಕ್ನಲ್ಲಿ 15, ಮತ್ತು ಪೆಂಡಾಲ್ ಹಾಕಿ 66 ಮಳಿಗೆಗಳ ವ್ಯವಸ್ಥೆಗೊಳಿಸಲಾಗಿತ್ತು,
ಬಸ್ ವ್ಯವಸ್ಥೆ
ಉದ್ಯೋಗಮೇಳದಲ್ಲಿ ಭಾಗವಹಿಸಲು ಬರುವ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಪಂಪ್ವೆಲ್, ಬಿ.ಸಿ.ರೋಡ್, ಮಾರಿಪಳ್ಳ ಕ್ರಾಸ್, ಗುರುಪುರ ಕೈಕಂಬದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿ ಬಿ.ಸಿ.ರೋಡ್ ಬಸ್ ನಿಲ್ದಾಣ, ಸ್ಟೇಟ್ಬ್ಯಾಂಕ್ ಬಸ್ ನಿಲ್ದಾಣ, ಲಾಲ್ಬಾಗ್ಗಳಿಂದ ಕೆಎಸ್ಸಾರ್ಟಿಸಿಯ ಟಿಕೆಟ್ ಆಧಾರಿತ ಬಸ್ ವ್ಯವಸ್ಥೆ ಮಾಡಲಾಗಿತ್ತು.