ಮಂಗಳೂರು, ನ.18: ಕಾನೂನಿನ ಚೌಕಟ್ಟಿನೊಳಗೆ ಸ್ಮಾರ್ಟ್ ಸಿಟಿ ಕನಸುಗಳು ಸಾಕಾರಗೊಳ್ಳುವಂತೆ ಮಾಡಲು ಸಾರ್ವಜನಿಕರ ಸಹಭಾಗಿತ್ವ ಮುಖ್ಯ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಸ್ಮಾರ್ಟ್ಸಿಟಿ ಆಯ್ಕೆ ಪ್ರಸ್ತಾವ ಸಲ್ಲಿಕೆಯ ಪಟ್ಟಿಯಲ್ಲಿ ಮಂಗಳೂರು ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಅಂತಿಮ ಪ್ರಸ್ತಾವನೆ ಸಿದ್ಧಪಡಿಸಲು ಅನುಕೂಲವಾಗು ವಂತೆ ಮಂಗಳೂರಿನ ಡಾ.ಟಿ.ಎಂ.ಎ.ಪೈ ಇಂಟರ್ನ್ಯಾಷನಲ್ ಕನ್ವೆನ್ಶನ್ ಸೆಂಟರ್ನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ನಿಸ್ಪಾನ ಇನೊವೇಟಿವ್ ಪ್ಲಾಟ್ಫಾರ್ಮ್ಸ್ ಸಂಸ್ಥೆಯ ಸಹಯೋಗದಲ್ಲಿ ‘ಸುಸ್ಥಿರ ಸ್ಮಾರ್ಟ್ ಸಿಟಿ’ ಕುರಿತು 2 ದಿನಗಳ ಕಾಲ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಮಂಗಳವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಸ್ಮಾರ್ಟ್ಸಿಟಿ ಪಟ್ಟಿಯಲ್ಲಿ ಮಂಗಳೂರಿನ ಸ್ಥಾನ ಮೊದಲ 20ರಲ್ಲಿ ನಿಗದಿಯಾಗುವ ಕುರಿತಂತೆ ಮಂಗಳೂರು ಮನಪಾ ರಾಜ್ಯದಲ್ಲೇ ಅತೀ ಹೆಚ್ಚಿನ ಹಾಗೂ ಉತ್ಸಾಹದ ಕೆಲಸವನ್ನು ಮಾಡಿದೆ. ದೇಶದಲ್ಲೇ ಮಂಗಳೂರು ನಂ.1ರ ಸ್ಥಾನದಲ್ಲಿ ಸಕ್ರಿಯತೆಯನ್ನು ಪಡೆದುಕೊಳ್ಳಲಿದೆ ಎಂದವರು ಆಶಿಸಿದರು.
ಮನಪಾ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮನಪಾ ಪ್ರತಿಪಕ್ಷ ನಾಯಕ ಸುಧೀರ್ ಶೆಟ್ಟಿ ಕಣ್ಣೂರು, ನಿಸ್ಪಾನ ಇನೊವೇಟಿವ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನರೇಂದ್ರಕುಮಾರ್ ಉಪಸ್ಥಿತರಿದ್ದರು.