ಉಡುಪಿ: ಕೆಲಸ ಮುಗಿಸಿ ಮನೆಗೆ ಸಾಗುತ್ತಿದ್ದ ಯುವತಿಯೋರ್ವಳನ್ನು ಅಡ್ಡಗಟ್ಟಿ ಆಕೆಯಮೇಲೆ ಅತ್ಯಾಚಾರ ನಡೆಸಿ ಬಳಿಕ ಆಕೆಯನ್ನು ಕೊಂದ ಭೀಕರ ಘಟನೆ ಕುಂದಾಪುರ ತಾಲೂಕಿನ ಗೋಳಿಯಂಗಡಿಯ ಕಾರಿಕೊಡ್ಲು ಎಂಬಲ್ಲಿ ಗುರುವಾರ ಸಂಜೆ ವೇಳೆ ನಡೆದಿದ್ದು ರಾತ್ರಿ 8.30 ರ ಸುಮಾರಿಗೆ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳೀಯ ನಿವಾಸಿಯಾಗಿರುವ ಸುಚಿತ್ರಾ ನಾಯ್ಕ್ (22) ಕೊಲೆಗೀಡಾದ ದುರ್ದೈವಿ ಯುವತಿಯಾಗಿದ್ದು, ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಯನ್ನು ಮಣಿಕಂಠ (27) ಎಂದು ಗುರುತಿಸಲಾಗಿದೆ. ಸದ್ಯ ಆತ ಪೊಲೀಸರ ಕಸ್ಟಡಿಯಲ್ಲಿದ್ದು ತನಿಖೆ ನಡೆಯುತ್ತಿದೆ.
( ಶಂಕಿತ ಆರೋಪಿ)
ನಡೆದಿದ್ದೇನು?: ಗೋಳಿಯಂಗಡಿ ಪೇಟೆಯಲ್ಲಿರುವ ದಿನಸಿ ಹಾಗೂ ಹಾರ್ಡವೇರ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸುಚಿತ್ರಾ ನಾಯ್ಕ್ ನಿತ್ಯ 5.45ಕ್ಕೆ ಮನೆಗೆ ತೆರಳುತ್ತಿದ್ದರು. ಮನೆಗೆ ತೆರಳುವ ಗೋಳಿಯಂಗಡಿಯ ಕಾರಿಕೊಡ್ಲು ಮಾರ್ಗ ದುರ್ಗಮವಾಗಿದ್ದು ನಿತ್ಯ ಸಂಚಾರವಾದ್ದರಿಂದ ನಿರ್ಭಯಳಾಗಿಯೇ ತೆರಳುತ್ತಿದ್ದಳು ಈ ಸುಚಿತ್ರಾ. ಆದರೇ ಗುರುವರ ಸಂಜೆ ಮಾತ್ರ ಕೆಲಸ ಮುಗಿಸಿ ಮನೆಗೆ ಹೊರಟ ಆಕೆ ಮನೆ ಸೇರಿರಲಿಲ್ಲ. ಆಕೆ ಮನೆಗೆ ಬಾರದ ಹಿನ್ನೆಲೆ ಆಕೆ ಮನೆಯವರು ಆಕೆಯನ್ನು ಎಲ್ಲೆಡೆ ಹುಡುಕಾಡಿದ್ದರು. ಹೀಗೆ ಆಕೆ ಮನೆಗೆ ತೆರಳುವ ಕಾಲು ಹಾದಿಯಲ್ಲೂ ಹುಡುಕಾಟ ನಡೆಸಿದ್ದರು ಇದೇ ವೇಳೆ ಅರೆನಗ್ನ ಸ್ಥಿತಿಯಲ್ಲಿ ಸುಚಿತ್ರಾ ಶವ ಹಾಡಿಯಲ್ಲಿ ಪತ್ತೆಯಾಗಿತ್ತು.
ಇದೇ ವೇಳೆ ಬಾರೊಂದರಲ್ಲಿ ಕುಡಿದು ಯಾರದೋ ಬಳಿ ತಾನು ಹುಡುಗಿಯನ್ನು ಕೊಲೆ ಮಾಡಿರುವುದಾಗಿ ಹೇಳಿಕೊಂಡ ಮಣಿಕಂಠನ ಬಗ್ಗೆ ಅನುಮಾನದಿಂದಲೇ ಸ್ಥಳೀಯರು ಆತನನ್ನು ಹಿಡಿದಿಟ್ಟುಕೊಂಡಿದ್ದಾರೆ. ಇದೊಂದು ಅತ್ಯಾಚಾರ ಹಾಗೂ ಕೊಲೆ ಪ್ರಕರಣವೆಂದು ತಿಳಿಯುತ್ತಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಪೊಲೀಸರು ಸ್ಥಳಕ್ಕಾಗಮಿಸಿ ಶಂಕಿತ ಆರೋಪಿ ಮಣಿಕಂಠನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಆಕೆಯನ್ನು ಹಲವು ಮೀಟರುಗಳ ದೂರವೇ ಅತ್ಯಾಚಾರ ನಡೆಸಿ ಬಳಿಕ ಶವವನ್ನು ಎಳೆದು ತಂದು ಪೊದೆ ಸಮೀಪ ಎಸೆದಿದ್ದಾನೆ ಎನ್ನಲಾಗುತ್ತಿದೆ. ಸುಚಿತ್ರಾ ಶವದ ಮೇಲೆ ಕತ್ತಿಯಿಂದ ಕಡಿದ ರೀತಿಯ ಗಾಯದ ಗುರುತುಗಳಿದ್ದು ಆಕೆಯನ್ನು ಅಮಾನುಷವಾಗಿ ಕೊಲೆಗೈಯಲಾಗಿತ್ತೆನ್ನುವುದನ್ನು ಸಾಕ್ಷಿಕರಿಸಿದೆ.
ಖತರ್ನಕ್ ಆರೋಪಿ: ನಟೋರಿಯಸ್ ಆಗಿರುವ ಮಣಿಕಂಠ ಈ ಹಿಂದೆ ಯುವತಿಯೋರ್ವಳನ್ನು ಅಡ್ಡಗಟ್ಟಿ ಮಾನಭಂಗಕ್ಕೆ ಯತ್ನಿಸಿದ ಕೇಸಿನಲ್ಲಿ ಜೈಲುವಾಸ ಅನುಭವಿಸಿ ಬಂದಿದ್ದನೆನ್ನಲಾಗಿದೆ. ಕೆಲ ದಿನಗಳ್ಇಂದಲೂ ಸುಚಿತ್ರಾ ಬೆನ್ನಹಿಂದೆ ಬಿದ್ದ ಮಣಿಕಂಠ ಆಕೆ ಜೊತೆ ಅನುಚಿತವಾಗಿಯೂ ವರ್ತಿಸಿದ್ದನಂತೆ.
ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಕೆ. ಅಣ್ಣಾಮಲೈ, ಹೆಚ್ಚುವರಿ ಎಸ್ಪಿ ಸಂತೋಷ್ ಕುಮಾರ್, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವ್ರತ್ತನಿರೀಕ್ಷಕ ದಿವಾಕರ್, ಶಂಕರನಾರಾಯಣ ಠಾಣೆ ಎಸ್ಸೈ ದೇಜಪ್ಪ, ಉಡುಪಿ ಜಿಲ್ಲಾ ಅಪರಾಧ ಪತ್ತೆ ದಳದ ನಿರೀಕ್ಷಕ ಜಯಶಂಕರ್, ಗ್ರಹರಕ್ಷಕದಳದ ಸೆಕೆಂಡ್ ಇನ್ ಕಮಾಂಡೇಂಟ್ ರಾಜೇಶ್ ಕೆ.ಸಿ. ಮೊದಲಾದವರು ಭೇಟಿ ನೀಡಿದ್ದರು,
ಸುಚಿತ್ರಾ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಕೆ.ಎಂ.ಸಿ.ಗೆ ಸಾಗಿಸಲಾಗಿದೆ.