ಮಂಗಳೂರು, ಸೆ.30: ದೇಶದಲ್ಲಿ ಸ್ವಾತಂತ್ರ್ಯ ಆಂದೋಲನ ತೀವ್ರವಾದಾಗ, ಭೀಕರ ಬರಗಾಲದಿಂದ ಜನತೆ ತತ್ತರಿಸುತ್ತಿರುವಾಗ ಕೋಮುವಾದ, ಎರಡನೇ ಜಾಗತಿಕ ಮಹಾ ಯುದ್ದದ ಭೀಕರತೆಗಳು ಜನತೆಯ ಬದುಕಿನ ನೆಮ್ಮದಿಯನ್ನು ಕದಡುತ್ತಿರುವಾಗ 1943ರಲ್ಲಿ ಜನರ ನೋವಿನ ಧ್ವನಿಯಾಗಿ ಹುಟ್ಟಿದ ದೇಶದ ಮೊದಲ ಸಾಂಸ್ಕೃತಿಕ ಸಂಘಟನೆಯೇ ಭಾರತೀಯ ಜನಕಲಾ ಸಮಿತಿ ಇಪ್ಟಾ. ದೇಶದ ಮಹಾನ್ ಕಲಾವಿದರು ಕಲಾಮಾಧ್ಯಮಗಳಾದ ರಂಗಭೂಮಿ, ನೃತ್ಯ, ಸಂಗೀತ, ಚಲನಚಿತ್ರ, ಚಿತ್ರಕಲೆ, ಜನಪದ ಕಲಾ ಪ್ರಕಾರಗಳ ಮೂಲಕ ಸಾಂಸ್ಕೃತಿಕ ಆಂದೋಲನವನ್ನು ಆರಂಭಿಸಿದರು. `ಬದುಕಿಗಾಗಿ ಕಲೆ’ ಎಂಬ ತತ್ವದೊಡನೆ ಮಾನವನ ಘನತೆ, ಸಮಾನತೆ, ಸ್ವಾತಂತ್ರ್ಯ, ಸ್ವಾವಲಂಬನೆ, ಸೌಹಾರ್ದತೆಗಾಗಿ, ದೇಶದ ಏಕತೆಗಾಗಿ ಈ ಸಂಘಟನೆಯಲ್ಲಿ ಲಕ್ಷಾಂತರ ಕಾರ್ಯಕರ್ತರು ದುಡಿಯುತ್ತಿದ್ದಾರೆ.
ಇಪ್ಟಾದ ಜಾಗತೀಕರಣ, ಖಾಸಗೀಕರಣ ನೀತಿಗಳ ವಿರುದ್ಧದ ಜನಜಾಗೃತಿಗೊಳಿಸುವ `ರೈಲು ಗಾಲಿಯ ಮೇಲೆ ಸ್ವಾತಂತ್ರ್ಯಯಾನ’ ಜಾಥಾದ ಜನಾಂದೋಲನ ಗೀತೆಗಳು ಹಾಗೂ `ಸ್ವಾತಂತ್ರ್ಯ’ ಎಂಬ ಬೀದಿ ನಾಟಕ ಮಂಗಳೂರಿನ ದ.ಕ ಜಿಲ್ಲಾಧಿಕಾರಿ ಕಛೇರಿಯೆದುರು ಇಂದು ಜರಗಿತು. ಪಾತಾಳದ ಕುಡಿಯುವ ನೀರು ಪಡೆಯುವುದನ್ನೊಳಗೊಂಡು ಆಕಾಶದ ವಿಮಾನಯಾನ ಮಾಡುವ ಎಲ್ಲದಕ್ಕೂ ನಮ್ಮ ಸರಕಾರ ವಿದೇಶಿ ಕಂಪೆನಿಗಳನ್ನು ಆಹ್ವಾನಿಸುತ್ತಿದೆ. ಪಾತಾಳ – ಆಕಾಶಗಳ ನಡುವಿನ ಪ್ರತಿ ವಸ್ತು, ವಿದ್ಯಮಾನಗಳೂ ಜಾಗತೀಕರಣಕ್ಕೊಳಪಟ್ಟಿದೆ. ನಮ್ಮ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಲು ಮತ್ತೊಮ್ಮೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಣಿಯಾಗುವ ಅನಿವಾರ್ಯತೆಯ ಬಗ್ಗೆ ಸಾರ್ವಜನಿಕರನ್ನು ಬಡಿದೆಬ್ಬಿಸಿತು.
ಭಗತ್ಸಿಂಗ್ ಜನ್ಮದಿನದಂದು ಬೆಂಗಳೂರಿನಲ್ಲಿ ಉದ್ಘಾಟನೆಗೊಂಡ ಸಾತಿ ಸುಂದರೇಶ್ ನೇತೃತ್ವದ ಈ ಜಾಥಾ ಮ್ಯಸೂರು, ಹಾಸನ, ಬಿಸಿ ರೋಡ್, ಮಂಗಳೂರು, ಕಾರವಾರ, ಗೋವಾ, ಬೆಳಗಾವಿ ಮೂಲಕ ಸಂಚರಿಸಿ ಗಾಂಧಿಜಯಂತಿಯಂದು ಧಾರವಾಡದಲ್ಲಿ ಮುಕ್ತಾಯವಾಗಲಿದೆ.
ಮಂಗಳೂರಿಗೆ ಬಂದ ಜಾಥಾದ ಕಾರ್ಯಕ್ರಮಗಳನ್ನು ಬೇಂಕ್ ನೌಕರರ ಸಂಘದ ಎಐಬಿಇಎ ರಾಷ್ಟ್ರೀಯ ನಾಯಕ ಪಿ.ಆರ್ ಕಾರಂತ್ ತಮಟೆ ಬಾರಿಸಿ ಉದ್ಘಾಟಿಸಿದರು. ಡಾ| ಬಿ. ಶ್ರೀನಿವಾಸ್ ಕಕ್ಕಿಲ್ಲಾಯ, ಎನ್ ಎಫ್ ಐ ಡಬ್ಲ್ಯೂ ರಾಜ್ಯ ನಾಯಕಿ ಜ್ಯೋತಿ ಸುಂದರೇಶ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಹೆಚ್. ವಿ ರಾವ್, ಇಪ್ಟಾದ ಜಿಲ್ಲಾಧ್ಯಕ್ಷರಾದ ವಿ.ಎಸ್. ಬೇರಿಂಜ, ಸಂಚಾಲಕರಾದ ಸುರೇಶ್ ಕುಮಾರ್, ಬಿ.ಶೇಕರ್, ಆರ್.ಡಿ ಸೋನ್ಸ್, ಪ್ರಭಾಕರ್ ರಾವ್, ಎಂ. ಕರುಣಾಕರ್, ಚಿತ್ರಾಕ್ಷಿ, ಸುಲೋಚನ, ಸರಸ್ವತಿ ಕೆ ಮೊದಲಾದವರು ಉಪಸ್ಥಿತರಿದ್ದರು.