ಉಡುಪಿ: ಹಲವು ಭಾಗ್ಯಗಳನ್ನು ರಾಜ್ಯದ ಜನರಿಗೆ ನೀಡಿದ ಹೆಗ್ಗಳಿಕೆಯಲ್ಲಿರುವ ಸಿದ್ದರಾಮಯ್ಯನವರ ಸರಕಾರ ಇದೀಗಾ ಕರಾವಳಿ ಜನರನ್ನು ಕತ್ತಲ ಭಾಗ್ಯದಲ್ಲಿ ಹೈರಾಣಾಗಿಸಿದೆ. ನಮ್ಮ ಜಿಲ್ಲೆಯ ಜನರಿಗೆ ವಿದ್ಯುತ್ ಕೊಡದ ಸರಕಾರ ನಗರಗಳಿಗೆ ವಿದ್ಯುತ್ ಸರಬರಾಜು ಮಾಡುವ ಮೂಲಕ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ಧೋರಣೆಯನ್ನು ಅನುಸರಿಸಿದೆ. ಇನ್ನಾದರೂ ವಿದ್ಯುತ್ ವಿಚಾರದಲ್ಲಿ ಸಂಬಂಧಿತ ಇಲಾಖೆ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳು, ರೈತರು ಹಾಗೂ ಸಾಮಾನ್ಯ ಜನರಿಗೆ ಪೂರಕವಾಗಿ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಕೋಟ ಮೆಸ್ಕಾಂ ಕಚೇರಿ ಎದುರು ಬುಧವಾರ ಸಂಜೆ ಬ್ರಹತ್ ಪ್ರತಿಭಟನೆ ನಡೆಯಿತು.
ಮಾಬುಕಳದಿಂದ ಸಾಲಿಗ್ರಾಮದವರೆಗೂ ವಾಹನ ಜಾಥ ಹಾಗೂ ಸಾಲಿಗ್ರಾಮದಿಂದ ಕೋಟ ಮೆಸ್ಕಾಂ ಕಛೇರಿವರೆಗೂ ನೂರಾರು ಸಂಖ್ಯೆಯಲ್ಲಿ ಪಂಜಿನ ಮೆರವಣಿಗೆ ನಡೆಯಿತು. ಕೋಟ ಮೆಸ್ಕಾಂ ಕಛೇರಿಯೆದುರು ಜಯಕರ್ನಾಟಕ ಸಂಘಟನೆಯ ಸಾಲಿಗ್ರಾಮ ಮತ್ತು ಸಾಸ್ತಾನ ಘಟಕ ಹಾಗೂ ಜಯಕರ್ನಾಟಕ ವಾಹನ ಚಾಲಕರು ಮತ್ತು ಮಾಲಕರು, ವಿವಿಧ ಸಂಘಟನೆಗಳು ಸೇರಿದಂತೆ ಸಾರ್ವಜನಿಕರೊಡಗೂಡಿ ಈ ಪ್ರತಿಭಟನೆ ನಡೆದಿತ್ತು.
ಕೋಟ ಮೆಸ್ಕಾಂ ಕಛೇರಿಯೆದುರು ನಡೆದ ಪ್ರತಿಭಟನೆ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು, ಜಿಲ್ಲೆ ಹಾಗೂ ಸಮೀಪದ ಜಿಲ್ಲೆಯಲ್ಲಿ ಉತ್ಪಾದನೆಗೊಳ್ಳುವ ವಿದ್ಯುತನ್ನು ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಸರಬರಾಜು ಮಾಡುತ್ತಿದ್ದು, ನಮಗ್ಯಾಕೇ ಅನ್ಯಾಯ ಮಾಡುತ್ತೀರಾ? ನಾವು ವಿದ್ಯುತ್ ಉಪಯೋಗದಂತೆ ಇಲಾಖೆಯ ನಿಗದಿಯಂತೆ ಕಟ್ಟುವ ಬಿಲ್ಲು ಹಾಗೂ ನಗರದವರು ಕಟ್ಟುವ ಬಿಲ್ಲಿನ ವೆಚ್ಚವೂ ಒಂದೇ ಆಗಿದೆ. ಅದರೇ ಅವರಿಗೆ ಹೆಚ್ಚು ವಿದ್ಯುತ್ ನಮಗೆ ಕಮ್ಮಿ ವಿದ್ಯುತ್ ನೀಡುವ ಮೂಲಕ ನಮಗೆ ಅನ್ಯಾಯ ಮಾಡಲಾಗುತ್ತಿದೆ. ಈಗಾಗಲೇ ಪರೀಕ್ಷೆಗಳು ಆಗಮಿಸುತ್ತಿದೆ, ಅನಿಮಿಯತವಾಗಿ ವಿದ್ಯುತ್ ಕಡಿತವಾದರೇ ಓದಿಕೊಳ್ಳಬೇಕಾದ ವಿದ್ಯಾರ್ಥಿಗಳ ಭವೀಷ್ಯದ ಕಥೆಯೇನು, ಅಷ್ಟೇ ಅಲ್ಲ ಈಗಾಗಲೇ ಬೇಸಾಯಕ್ಕಾಗಿ ಹವಣಿಸುತ್ತಿರುವ ರೈತರ ಸಂಕಷ್ಟಕ್ಕೆ ಹೊಣೆಯಾದರೂ ಯಾರು ಎಂಬ ಅರ್ಥಗರ್ಬಿತ ಪ್ರಶ್ನೆ ಮೆಸ್ಕಾಂ ಮುಂದೆ ಪ್ರತಿಭಟನೆ ವೇಳೆ ಕೇಳಿಬಂದಿತು.
ಅವಿರತವಾಗಿ ವಿದ್ಯುತ್ ಕಡಿತಗೊಳಿಸುವ ಮೊದಲು ಅದರ ಸಮಯ ಹಾಗೂ ನಿಗದಿತ ವೇಳಾಪಟ್ಟಿಯನ್ನು ಮಾಧ್ಯಮಗಳಲ್ಲಿ ಪ್ರಕಟಿಸಬೇಕು, ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜಯಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿ, ಸಲಹೆಗಾರ ಸುಧಾಕರ, ಸಾಲಿಗ್ರಾಮ ಘಟಕದ ಅಧ್ಯಕ್ಷ ನಾಗರಾಜ್ ಸೇರಿದಂತೆ ವಿವಿಧ ಸಂಘಟನೆಯವರು ಮತ್ತು ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಬ್ರಹ್ಮಾವರ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಪುತ್ರನ್ ಇವರಿಗೆ ವಿವಿಧ ಸಂಘಟನೆಗಳೂ ಮನವಿಯನ್ನು ನೀಡಿದರು.
ಚಿತ್ರ ಮತ್ತು ವರದಿ- ಯೋಗೀಶ್ ಕುಂಭಾಸಿ