ಮಂಗಳೂರು,ಜುಲೈ.29: ರಾಷ್ಟ್ರೀಯ ಪರಿಶೀಲನಾ ಮತ್ತು ಮೌಲ್ಯಮಾಪನಾ ಸಮಿತಿ (ನ್ಯಾಕ್) ಯು ಬೆಸೆಂಟ್ ಸಂಧ್ಯಾ ಕಾಲೇಜಿಗೆ ಇತ್ತೀಜೆಗೆ ಭೇಟಿ ನೀಡಿ ಮೂರು ದಿನಗಳ ಕಾಲ ಪರಿಶೀಲನೆ ನಡೆಸಿತು. ತಂಡದಲ್ಲಿ ಅರುಣಾಚಲ ಪ್ರದೇಶ ಇಟಾ ನಗರದ ರಾಜೀವ ಗಾಂಧಿ ಕೇಂದ್ರೀಯ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ. ತಾಮೋ ವಿಮಾಂಗ್, ಅಧ್ಯಕ್ಷರು, ಎಸ್.ಐ.ಇ.ಎಸ್ ಕಾಲೇಜು, ಮುಂಬೈನ ಪ್ರಾಚಾರ್ಯರಾದ ಡಾ. ಹರ್ಷ ಮೆಹ್ತಾ ಸಂಯೋಜಕ ಸದಸ್ಯರಾಗಿ ಹಾಗೂ ಡಾ. ಶಾಕುಂತಲಾ ಮಿಶ್ರಾ ರಾಷ್ಟ್ರೀಯ ಪುನರ್ವಸತಿ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮುಖ್ಯಸ್ಥರಾದ ಪ್ರೊ. ಎ.ಪಿ.ತಿವಾರಿಯವರು ಸದಸ್ಯರಾಗಿದ್ದರು.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಪರಿಶೀಲನೆ ನಡೆಸಿದ ತಂಡವು ಕಾಲೇಜಿನ ಪ್ರಾಚಾರ್ಯರಾದ ಡಾ. ಕಾರ್ಮೆಲೀಟಾ ಗೋವಿಯಾಸ್ ಅವರಿಗೆ ವರದಿಯನ್ನು ಸಲ್ಲಿಸಿ, ವಿದ್ಯಾರ್ಥಿಗಳ ಕಲಿಕೆಯೊಂದಿಗೆ ದುಡಿಮೆಯ ಸಿದ್ಧಾಂತಕ್ಕೆ ಹರ್ಷ ವ್ಯಕ್ತಪಡಿಸಿತು. ಅಲ್ಲದೇ ಕಾಲೇಜಿನ ಗ್ರಂಥಾಲಯ, ಕಂಪ್ಯೂಟರ್ ಪ್ರಯೋಗಾಲಯ, ಭಾಷಾ ಪ್ರಯೋಗಾಲಯ, ವಾಣಿಜ್ಯ ಪ್ರಯೋಗಾಲಯ, ಹಳ್ಳಿಗಳ ದತ್ತು ಸ್ವೀಕರಿಸಿ ಸಲ್ಲಿಸುತ್ತಿರುವ ಸೇವೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ತಂಡವು, ಕಾಲೇಜಿಗೆ ಸಕಲ ಸೌಲಭ್ಯಗಳನ್ನು ನೀಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರುವ ಆಡಳಿತ ಮಂಡಳಿಯ ದೂರ ದೃಷ್ಟಿಯ ಚಿಂತನೆಯನ್ನು ಶ್ಲಾಘಿಸಿತು.
ವರದಿ ಸ್ವೀಕರಿಸಿದ ಪ್ರಾಚಾರ್ಯರು ಪ್ರಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕುಡ್ಪಿ ಜಗದೀಶ ಶೆಣೈ, ಉಪಾಧ್ಯಕ್ಷರಾದ ಶ್ರೀ ಅಣ್ಣಪ್ಪ ನಾಯಕ್, ಕಾರ್ಯದರ್ಶಿಯವರಾದ ಶ್ರೀ ಶಾಮ ಸುಂದರ ಕಾಮತ್, ಸದಸ್ಯರಾದ ಶ್ರೀ ಸುರೇಶ್ ಮಲ್ಯ, ಶ್ರೀ ಸತೀಶ್ ಭಟ್ ಉಪಸ್ಥಿತರಿದ್ದರು. ಸಂಯೋಜಕರಾದ ಡಾ. ಸತೀಶ್ ಕುಮಾರ್ ಶೆಟ್ಟಿಯವರು ಸ್ವಾಗತಿಸಿದರು. ಸಹ ಸಂಯೋಜಕರಾದ ಡಾ. ವಾಸಪ್ಪ ಗೌಡ ಅವರು ವಂದಿಸಿದರು. ಡಾ. ಲಕ್ಷ್ಮೀನಾರಾಯಣ ಭಟ್ ಅವರು ನಿರೂಪಿಸಿದರು.