ಮಂಗಳೂರು, ಜುಲೈ.18: ಸ್ಥಗಿತಗೊಂಡಿರುವ ಪಡೀಲ್ ಬಜಾಲ್, ರೈಲ್ವೇ ಕೆಳಸೇತುವೆ ಸಂಪರ್ಕ ರಸ್ತೆ ಕಾಮಗಾರಿ ಪ್ರಾರಂಭಿಸಲು ಡಿವೈಎಫ್ಐ ಹಾಗೂ ಸಿಪಿಎಂ ಸ್ಥಳೀಯ ಘಟಕಗಳ ನಿಯೋಗ ಮಂಗಳೂರು ಮೇಯರ್ ಜೆಸಿಂತಾ ಅವರನ್ನು ಭೇಟಿ ಮಾಡಿ ಸೇತುವೆ ಕಾಮಗಾರಿ ಕೂಡಲೇ ಪ್ರಾರಂಭಿಸುವಂತೆ ಒತ್ತಾಯಿಸಿದೆ.
ಕಳೆದ ಆಗಸ್ಟ್ 2014ರಲ್ಲಿ ರೈಲ್ವೇ ಕೆಳಸೇತುವೆ ಶಂಕು ಸ್ಥಾಪಿಸಿದ ನಂತರ ಫೆಬ್ರವರಿಯಲ್ಲಿ ಜನರ ಬಳಕೆಗೆ ಕಲ್ಪಿಸಿಕೊಡಲಾಗುವುದು ಎಂದು ಆಗಿನ ರೈಲ್ವೇ ಸಚಿವ ಸದಾನಂದ ಗೌಡರು ಭರವಸೆ ನೀಡಿದ್ದರು. ಸಂಪರ್ಕ ರಸ್ತೆ ಮಾಡಬೇಕಾಗಿದ್ದ ಮನಪಾ ಮಾತ್ರ ಪ್ರಾರಂಭಿಸಲೇ ಇಲ್ಲ ಯಾಕೆ ಎಂದು ನಿಯೋಗ ಮೇಯರ್ ಅವರನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಪಾಲಿಕೆ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಜಶೇಖರ್ ಅವರನ್ನು ಕರೆಯಿಸಿ ಸಮ್ಮುಖದಲ್ಲಿ ಚರ್ಚೆ ನಡೆಸಿದರು. ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವಂತೆ ಆದೇಶಿಸಿದ ಅವರು, ಹಾಗೂ ಸೇತುವೆ ಕೆಲಸ ಕೂಡಲೇ ಕೈಗೊಳ್ಳುತ್ತೇವೆ ಎಂಬ ಭರವಸೆಯನ್ನು ನೀಡಿದರು.
ನಿಯೋಗದಲ್ಲಿ ಡಿವೈಎಫ್ಐನ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಇಮ್ತಿಯಾಜ್, ಸಿಪಿಐಎಂ ಮುಖಂಡರಾದ ಸುರೇಶ್ ಬಜಾಲ್, ಪ್ರೇಮನಾಥ್ ಜಲ್ಲಿಗುಡ್ಡೆ, ಮೋಹನ್ ಜಲ್ಲಿಗುಡ್ಡೆ ಉಪಸ್ಥಿತರಿದ್ದರು.
