ಮಂಗಳೂರು,ಜುಲೈ.18: ಸಂಸ್ಕೃತ ಭಾಷೆಯಲ್ಲಿ ಬಂಧಿತವಾಗಿದ್ದ ಆಧ್ಯಾತ್ಮಿಕ ಶಾಸ್ತ್ರ ಸಾರವನ್ನು ಸ್ವಾಮಿ ಚಿನ್ಮಯಾನಂದರು ಆಂಗ್ಲ ಭಾಷೆಯ ಮೂಲಕ ಜಗತ್ತಿಗೆ ಸಾರಿದರು ಎಂದು ಪೇಜಾವರ ಮಠದ ಹಿರಿಯ ಯತಿ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಚಿನ್ಮಯ ಮಿಷನ್ ವತಿಯಿಂದ ನಗರದ ಟಿ.ವಿ.ರಮಣ ಪೈ ಕನ್ವೆನ್ಶನ್ ಸೆಂಟರ್ನಲ್ಲಿ ಶುಕ್ರವಾರ ನಡೆದ ಚಿನ್ಮಯ ಜನ್ಮ ಶತಾಬ್ದಿ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀಪಾದರು ಆಶೀರ್ವಚನ ನೀಡಿದರು.
ಸ್ವಾಮಿ ವಿವೇಕಾನಂದರ ಬಳಿಕ ಆಧ್ಯಾತ್ಮಿಕ ಕ್ರಾಂತಿಯನ್ನು ಚಿನ್ಮಯಾನಂದರು ಮಾಡಿದ್ದರು ಎಂದು ಹೇಳಿದ ಸ್ವಾಮೀಜಿ, ಅಸಡ್ಡೆ ತೋರಿದ ಜನರನ್ನು ಆಧ್ಯಾತ್ಮದೆಡೆಗೆ ಸೆಳೆಯುವ ಕಾರ್ಯವನ್ನು ಮಾಡಿದ್ದರು ಎಂದರು.
ವಿಜ್ಞಾನ ಕೂಡಾ ಹಲವು ಬೆಳಕಿನಲ್ಲಿ ಒಂದಾಗಿದ್ದರೂ, ತಾವರೆ ಅರಳಲು ಸೂರ್ಯನ ಬೆಳಕು ಬೇಕಾಗುವಂತೆ ಹೃದಯ ಕಮಲ ಅರಳಲು ಆಧ್ಯಾತ್ಮದ ಬೆಳಕು ಅಗತ್ಯ ಎಂದು ಅವರು ನುಡಿದರು.
ಭಯರಹಿತ ಆರಾಧನೆ: ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಭಯರಹಿತವಾಗಿ ಭಗವಂತನನ್ನು ಆರಾಧಿಸಬೇಕು ಎಂಬ ತತ್ವವನ್ನು ಸ್ವಾಮಿ ಚಿನ್ಮಯಾನಂದರು ಸಾರಿದ್ದರು ಎಂದರು. ಅಪನಂಬಿಕೆ, ಕುತೂಹಲಗಳಿಂದಲೇ ದೇವರ ಅಸ್ತಿತ್ವವನ್ನು ನೋಡಿದರೂ ಕೂಡಾ ಒಂದು ಬಾರಿ ವಿಶ್ವಾಸ ದೃಢಗೊಂಡ ಬಳಿಕ ಚಂಚಲತೆ ಮೂಡಬಾರದು ಎಂದು ಅವರು ತಿಳಿಸಿದರು.
ದೇವಭಕ್ತಿ, ದೇಶಭಕ್ತಿ: ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ದೇವ ಭಕ್ತಿ ಮತ್ತು ದೇಶಭಕ್ತಿ ಮೂಲಕ ಭಗವದ್ಗೀತೆಯ ಸಾರವನ್ನು ಜಗತ್ತಿಗೆ ತೋರಿಸಿದ ಚಿನ್ಮಯಾನಂದರು ಧರ್ಮಜ್ಯೋತಿಯನ್ನು ಬೆಳಗಿಸಿದ್ದಾರೆ ಎಂದರು.
ಬೆಂಗಳೂರು ಚಿನ್ಮಯ ಸೇವಾ ಟ್ರಸ್ಟ್ ಮುಖ್ಯ ಆಡಳಿತಾಧಿಕಾರಿ ಸ್ವಾಮೀ ರಾಮಾತ್ಮಾನಂದಜೀ ಉಪಸ್ಥಿತರಿದ್ದರು. ಜನ್ಮ ಶತಾಬ್ದಿ ಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಎಸ್.ಎಂ.ಶರ್ಮ ಸ್ವಾಗತಿಸಿದರು. ಹುಬ್ಬಳ್ಳಿ ಚಿನ್ಮಯ ಮಿಷನ್ನ ಆಚಾರ್ಯ ಸ್ವಾಮೀ ಹಂಸಾನಂದಜೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿನ್ಮಯಿ ಪ್ರಾರ್ಥಿಸಿದರು.