ಪುತ್ತೂರು,ಜುಲೈ.17: ಪ್ರಗತಿಪರ ಕೃಷಿಕ, ಶೈಕ್ಷಣಿಕ ತಜ್ಞ, ಸಾಮಾಜಿಕ ಹೋರಾಟಗಾರ, ಸಮಾಜ ಸೇವಕ ಪುತ್ತೂರಿನ ಸುಳ್ಯಪದವು ಕನ್ನಡ್ಕ ನಿವಾಸಿ ಕೆ. ಸದಾನಂದ ನಾಯಕ್ ಇಂದಾಜೆ (80) ಇಂದು ಅಲ್ಪಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸದಾ ಹಾಸ್ಯಪ್ರವೃತ್ತಿಯಿಂದ ಕೂಡಿರುವ ಸದಾನಂದ ನಾಯಕ್ ಅವರು, ಜಿಎಸ್ಬಿ ಸಮಾಜದಲ್ಲಿ ‘ಸದ್ ಮಾಮ್’ ಎಂದು ಖ್ಯಾತಿ ಪಡೆದಿದ್ದರು.
ಸುಳ್ಯಪದವಿನ ಸರ್ವೋಧಯ ಪ್ರೌಢಶಾಲೆ, ಬಾಲಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯ ಮಾಜಿ ಸಂಚಾಲಕರಾಗಿ ಹಳ್ಳಿಯೊಂದರಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದರು. ಹಲವು ಸಂಘ ಸಂಸ್ಥೆಗಳಿಗೆ ದೇಣಿಗೆ ನೀಡಿರುವ ಇವರು, ಗ್ರಾಮದ ಒಳಿಗಾಗಿ ಸಂಘಟನೆ ಮಾಡಿಕೊಂಡು ಹಲವು ಹೋರಾಟ ಮಾಡಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, ಹಲವು ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆ ನೀಡಿರುತ್ತಾರೆ.
ವೆನ್ಲಾಕ್ ಸಹಾಯ ಕೇಂದ್ರದಲ್ಲಿರುವ ಗಣೇಶ್ ನಾಯಕ್, ಪುತ್ತೂರಿನ ಚಾರ್ಟೆಡ್ ಅಕೌಂಟೆಂಡ್ ದಾಮೋದರ ನಾಯಕ್, ಉದ್ಯಮಿ ಆರ್.ಕೆ. ನಾಯಕ್, ಮಂಗಳೂರಿನ ಖ್ಯಾತ ವೈದ್ಯ ಡಾ. ಸುಬ್ರಾಯ ನಾಯಕ್, ಉದ್ಯಮಿ ವರದರಾಜ ನಾಯಕ್, ಉದಯ ಟಿವಿಯ ಮಂಗಳೂರು ಜಿಲ್ಲಾ ವರದಿಗಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ, ಪುತ್ತೂರಿನ ಪತ್ರಕರ್ತ ಮಾದವ ನಾಯಕ್, ಉದ್ಯಮಿ ವೆಂಕಟೇಶ್ ನಾಯಕ್ ಸೇರಿದಂತೆ ಎಂಟು ಪುತ್ರರು ಹಾಗೂ ಐವರು ಪುತ್ರಿರನ್ನು ಹೊಂದಿದ್ದರು. ಮೃತರ ಅಂತ್ಯಕ್ರೀಯೆಯು ಹುಟ್ಟೂರಾದ ಸುಳ್ಯಪದವಿನಲ್ಲಿ ಇಂದು ನಡೆಯಿತು.
ಕೇಂದ್ರ ಕಾನೂನು ಸಚಿವ ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ. ಖಾದರ್, ಕ್ರೀಡಾ ಸಚಿವ ಅಭಯಚಂದ್ರ ಜೈನ್, ನಗರಾಭಿವೃದ್ಧಿ ಖಾತೆ ಸಚಿವ ವಿನಯ ಕುಮಾರ್ ಸೊರಕೆ, ಸ್ಥಳೀಯ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಸಂತಾಪ ಸೂಚಿಸಿದ್ದಾರೆ.