ಉಪ್ಪಿನಂಗಡಿ: ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಕಸಾಯಿಖಾನೆಯೊಂದಕ್ಕೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ, ಆರೋಪಿಗಳ ವಶದಲ್ಲಿದ್ದ ಎರಡು ಹೋರಿ ಕರುಗಳ ಸಹಿತ ಕಸಾಯಿಖಾನೆಯಲ್ಲಿ ಬಳಸಲಾಗುತ್ತಿದ್ದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಭಾನುವಾರ ನಡೆದಿದೆ.
ಬಂಧಿತರನ್ನು ಝೈನುದ್ದೀನ್, ಅಬ್ದುರ್ರಹ್ಮಾನ್ ಹಾಗೂ ಮುಹಮ್ಮದ್ ಆಸೀಫ್ ಎಂದು ಗುರುತಿಸಲಾಗಿದೆ. ಖಚಿತ ವರ್ತಮಾನದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಪೊಲೀಸರು ಇದಿನಬ್ಬ ಎಂಬವರ ತೋಟದ ಮೂಲೆಯೊಂದರಲ್ಲಿ ಟೆಂಟ್ ಹಾಕಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಕಸಾಯಿಖಾನೆಯಿಂದ ತಕ್ಕಡಿ, ಮಾಂಸ ತುಂಡರಿಸಲು ಬಳಸುವ ಮರದ ತುಂಡು, ಜಾನುವಾರುಗಳ ಎಲುಬುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಭಾನುವಾರ ಗೋಳಿತೊಟ್ಟು ಕಡೆಯಿಂದ ಪಿಕ್ಅಪ್ ವಾಹನದಲ್ಲಿ ಜಾನುವಾರು ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನಾಧರಿಸಿ, ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ವಾಹನವನ್ನು ಹಿಂಬಾಲಿಸಿಕೊಂಡು ಬಂದಿದ್ದರೆನ್ನಲಾಗಿದೆ. ಈ ಸಂದರ್ಭ ಪಿಕ್ಅಪ್ ವಾಹನ ಇದಿನಬ್ಬನವರ ತೋಟದೊಳಗೆ ನುಗ್ಗಿದ್ದು, ಜಾನುವಾರುಗಳನ್ನು ಇಳಿಸಿ ವಾಹನ ಸಮೇತ ಚಾಲಕ ಪರಾರಿಯಾಗಿದ್ದ ಎನ್ನಲಾಗಿದೆ.
ಬಳಿಕ ಇದಿನಬ್ಬನವರ ಮನೆ ಮುಂದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಯಿಸಿದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಈ ತೋಟದೊಳಗೆ ಅಕ್ರಮ ಕಸಾಯಿಖಾನೆ ನಡೆಯುತ್ತಿದೆ ಎಂದು ಆರೋಪಿಸಿದರಲ್ಲದೆ, ಪೊಲೀಸರಿಗೆ ಮಾಹಿತಿ ನೀಡಿದರು.
ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ತೋಟದೊಳಗೆ ಪರಿಶೀಲನೆ ನಡೆಸಿದಾಗ, ತೋಟದ ಮೂಲೆಯೊಂದರಲ್ಲಿ ತೋಡೊಂದರ ಬದಿಯಲ್ಲಿ ಎರಡು ಶೆಡ್ಗಳು ಪತ್ತೆಯಾದವು. ಒಂದನ್ನು ಟಾರ್ಪಾಲ್ ಹಾಕಿ ನಿರ್ಮಿಸಿದ್ದರೆ, ಮತ್ತೊಂದಕ್ಕೆ ಬಿದಿರು ಕಂಬಗಳನ್ನು ಮಾತ್ರ ಅಡ್ಡಲಾಗಿ ಹಾಕಲಾಗಿತ್ತು. ಅಲ್ಲಿ ತಕ್ಕಡಿ, ಮಾಂಸ ತುಂಡರಿಸಲು ಬಳಸುವ ಮರದ ತುಂಡು, ಪ್ಲಾಸ್ಟಿಕ್ ಚೀಲಗಳು, ದನ ಕಟ್ಟುವ ಹಗ್ಗ, ಜಾನುವಾರುಗಳ ಎಲುಬು ತುಂಡುಗಳು ದೊರೆತವು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿ, ಸೊತ್ತು ಹಾಗೂ ಎರಡು ಹೋರಿ ಕರುಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ, ಕಡಬ ಠಾಣಾಧಿಕಾರಿ ಯೋಗೀಶ್ ಕುಮಾರ್ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಸುದ್ದಿ ತಿಳಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಒಂದೆಡೆ ಜಮಾಯಿಸತೊಡಗಿದರೆ, ಇನ್ನೊಂದೆಡೆ ಮುಸ್ಲಿಂ ಸಮುದಾಯದವರೂ ಜಮಾಯಿಸತೊಡಗಿದರು. ಈ ಸಂದರ್ಭ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಕಂಡು ಬಂತು. ಬಳಿಕ ಸ್ಥಳಕ್ಕೆ ಸಶಸ್ತ್ರ ಮೀಸಲು ಪೊಲೀಸರನ್ನು ಕರೆಸಿದ್ದು, ಅವರು ಇಬ್ಬಣಗಳನ್ನು ಸ್ಥಳದಿಂದ ಚದುರಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.