ಉಡುಪಿ: ಯುವನಟ ನಿರ್ದೇಶಕ ರಕ್ಷಿತ್ ಶೆಟ್ಟಿ ಇಂದು ಅಕ್ಷರಷ: ಮಣ್ಣಿನ ಮಗನಾಗಿದ್ದರು. ಉಡುಪಿಯ ಅಲೆವೂರು ರಕ್ಷಿತ್ ತವರು, ನಿರ್ದೇಶನಕ್ಕೆ ಫಿಲಂ ಪೇರ್ ಪ್ರಶಸ್ತಿ ಪಡೆದ ಬಳಿಕ ಹುಟ್ಟೂರಿಗೆ ಬಂದ ಗೆಳೆಯನನ್ನು ಕೆಸರು ಗದ್ದೆಯಲ್ಲಿ ಕುಣಿದಾಡಿಸಿ ಊರ ಜನ ಸಂಭ್ರಮಿಸಿದರು. ಕೈಯ್ಯಲ್ಲಿ ಕಂಬಳದ ಕೋಣ, ಕೆಸರು ತುಂಬಿದ ಗದ್ದೆಯಲ್ಲಿ ಕೋಣಗಳ ಓಟ. ಓಟಗಾರ ಬೇರ್ಯಾರೂ ಅಲ್ಲ ನಿರ್ದೇಶಕ ಕಂ ನಟ ರಕ್ಷಿತ್ ಶೆಟ್ಟಿ. ಫಿಲಂ ಫೇರ್ ಪ್ರಶಸ್ತಿ ಪಡೆದ ಬಳಿಕ ಇದೇ ಮೊದಲ ಬಾರಿಗೆ ರಕ್ಷಿತ್ ಅಲೆವೂರಿಗೆ ಬಂದಿದ್ದರು.
ಉಡುಪಿಯ ಅಲೆವೂರು ಯುವಕರು ಕಳೆದ 10 ವರ್ಷಗಳಿಂದ ಕೆಸರು ಗದ್ದೆಯಲ್ಲಿ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುತ್ತಾರೆ. ಈ ಬಾರಿಯೂ ಕೆಸರು ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳು ಏರ್ಪಾಟಾಗಿತ್ತು. ಓಟ, ಹಗ್ಗ ಜಗ್ಗಾಟ, ಪಿರಾಮೆಡ್, ಹಿಮ್ಮುಖ ಓಟಗಳಲ್ಲಿ ಭಾಗವಹಿಸಿ ಜನ ಹುಚ್ಚೆದ್ದು ಕುಣಿದರು.
ಭಾನುವಾರ ರಜಾದಿನವಾದ ಕಾರಣ ರಕ್ಷಿತ್ ಗೆಳೆಯರು ಕೆಸರು ಗದ್ದೆಯಲ್ಲಿ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿದ್ದರು. ರಕ್ಷಿತ್ ಬಂದಿದ್ದೇ ತಡ, ನೆಚ್ಚಿನ ಗೆಳೆಯನನ್ನು ಗದ್ದಗೆ ಇಳಿಸಿಯೇ ಬಿಟ್ಟರು. ಮೈಗೆಲ್ಲಾ ಕೆಸರು ಎರಚಿ ಸಂಭ್ರಮ ಪಟ್ಟರು. ‘ಉಳಿದವರು ಕಂಡಂತೆ’ ಚಿತ್ರದ ಹುಲಿ ಕುಣಿತಕ್ಕೆ ರಕ್ಷಿತ್ ಹೆಜ್ಜೆ ಹಾಕಿದರು.
ರಕ್ಷಿತ್ ಕೃಷಿ ಕುಟುಂಬದ ಕುಡಿ, ಅವರದೇ ಮನೆಯ ಗದ್ದೆಯಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳ ಆಯೋಜನೆಯಾಗಿತ್ತು.ಮನೆ ಮಗನ ಸಾಧನೆ ಎಲ್ಲರಿಗೂ ಹೆಮ್ಮೆ ತಂದಿತ್ತು. ಮಹಿಳೆಯರು ಮಕ್ಕಳು ಮುಗಿಬಿದ್ದು ಸೆಫ್ಲೀ ತೆಗೆಸಿಕೊಂಡರು. ಮೈಯೆಲ್ಲಾ ಮಣ್ಣಾದ ಬಳಿಕ ಗದ್ದೆಯಲ್ಲೇ ರಕ್ಷಿತ್ ಸ್ನಾನ ಪೂರೈಸಿದರು.
ರಕ್ಷಿತ್ ಮನೆಯವರು ಇಂದಿಗೂ ಕೃಷಿ ಮಾಡುತ್ತಾರೆ, ಗದ್ದೆ, ತೋಟ ಕೆಸರು ಅಂದ್ರೆ ರಕ್ಷಿತ್ ಗೂ ಪ್ರೀತಿ. ಅವರ ತವರಿನ ಸ್ಪೂರ್ತಿಯನ್ನು ಅವರ ಸಿನಿಮಾಗಳಲ್ಲೂ ಕಾಣಬಹುದು.