ಬಂಟ್ವಾಳ, ಜುಲೈ.06: ರಸ್ತೆ ಬದಿ ಕೆಟ್ಟು ನಿಂತ ಪಿಕ್ಅಪ್ ವಾಹನವೊಂದನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಅಕ್ರಮ ಗೋ ಸಾಗಾಟ ನಡೆಸಲಾಗುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಅತಿ ವೇಗದಲ್ಲಿ ಬಂದ ಈ ಪಿಕ್ಅಪ್ ವಾಹನ ಬಂಟ್ವಾಳ ಬೈಪಾಸ್ ಜಂಕ್ಷನ್ ಬಳಿ ತಲುಪುತ್ತಿದ್ದಂತೆಯೇ ಚಕ್ರ ಕಳಚಿ ದಾರಿ ಬದಿ ನಿಂತಿತ್ತು. ಇದಾದ ತಕ್ಷಣ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದ. ಅಪಘಾತ ನಡೆದಿರಬಹುದೇ ಎಂದು ಸಂಶಯಿಸಿದ ಸ್ಥಳೀಯರು, ಸ್ಥಳಕ್ಕೆ ಧಾವಿಸಿ ಬಂದು ವಾಹನದೊಳಗೆ ಪರಿಶೀಲನೆ ನಡೆಸಿದಾಗ ಅದರಲ್ಲಿ ಗೋವುಗಳನ್ನು ತುಂಬಿರುವುದು ಕಂಡು ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ಬಜರಂಗದಳ ಬಂಟ್ವಾಳ ಸಮಿತಿ ಸದಸ್ಯರು ಹಾಗೂ ಹಿಂದು ಪರ ಸಂಘಟನೆಯ ಕಾರ್ಯಕರ್ತರು ಕಟ್ಟಿಹಾಕಲಾಗಿದ್ದ ಗೋವುಗಳನ್ನು ಬಿಡಿಸಿ ನೀರು ಹಾಕಿ ಸ್ವಚ್ಛಗೊಳಿಸಿ ಅವುಗಳನ್ನು ರಕ್ಷಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪಿಕ್ಅಪ್ ಸಹಿತ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಿಕ್ಅಪ್ನಲ್ಲಿ ಒಟ್ಟು 11 ದನ ಹಾಗೂ ಕರುಗಳ ಕಾಲುಗಳನ್ನು ಕಟ್ಟಿ ಹಿಂಸಾತ್ಮಕವಾಗಿ ತುಂಬಲಾಗಿತ್ತು. ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ತೆರಳಿದ ಬಂಟ್ವಾಳ ನಗರ ಪೊಲೀಸರು ವಾಹನ ಸಹಿತ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.