ಕರ್ನಾಟಕ

ಕ್ಷುಲ್ಲಕ ಕಾರಣಕ್ಕೆ ಇಬ್ಬರಿಗೆ ಚೂರಿ ಇರಿದ ದುಷ್ಕರ್ಮಿಗಳು; ಓರ್ವ ಬಲಿ-ಇನ್ನೋರ್ವನಿಗೆ ಗಾಯ

Pinterest LinkedIn Tumblr

Hubli-murder

ಹುಬ್ಬಳ್ಳಿ, ಜು. 6: ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಇಬ್ಬರಿಗೆ ಚೂರಿ ಇರಿದ ಪರಿಣಾಮ ಓರ್ವ ಮೃತಪಟ್ಟು ಇನ್ನೋರ್ವ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ನಗರದ ಗೋಪನಕೊಪ್ಪ ವೆಂಕಟೇಶ್‌ಕಾಲನಿ ಬಳಿಯ ರೋಟರಿ ಶಾಲೆಯ ಮುಂಭಾಗದಲ್ಲಿ ನಡೆದಿದೆ.

ದೀಪಕ್ (22) ಎಂಬುವವನೇ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಕೇಶ್ವಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಘಟನೆ ವಿವರ : ದೀಪಕ್ (22) ಮತ್ತು ಸ್ನೇಹಲ್ (23) ಇಬ್ಬರೂ ಸ್ನೇಹಿತರು ರಾತ್ರಿ 9.30ಕ್ಕೆ ನಗರದ ಗೋಪನಕೊಪ್ಪದ ವೆಂಕಟೇಶ್ ಕಾಲನಿಯ ಹತ್ತಿರದ ರೋಟರಿ ಶಾಲೆಯ ಮುಂಭಾಗದಲ್ಲಿ ಮಾತನಾಡುತ್ತಾ ಕುಳಿತಿದ್ದರು. ಅದೇ ವೇಳೆಗೆ ಅಲ್ಲಿಗೆ ಬೈಕ್‌ನಲ್ಲಿ ಸಲೀಂ, ವಾಸಿಂ ಹಾಗೂ ಸಾದಿಕ್ ಎಂಬ ಮೂವರು ಬಂದು ದೀಪಕ್ ಹಾಗೂ ಸ್ನೇಹಲ್ ರೊಡನೆ ಜಗಳಕ್ಕೆ ಮುಂದಾದರು. ಮಾತಿಗೆ ಮಾತು ಬೆಳೆಯಿತು. ಕೋಪಗೊಂಡ ದುಷ್ಕರ್ಮಿಗಳು ದೀಪಕ್ ಹಾಗೂ ಸ್ನೇಹಲ್ ಇಬ್ಬರಿಗೂ ಚಾಕುವಿನಿಂದ ತಿವಿದರು. ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದ ದೀಪಕ್‌ನನ್ನು ಹಾಗೂ ಗಾಯಗೊಂಡ ಸ್ನೇಹಲ್‌ನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ದೀಪಕ್ ಮೃತಪಟ್ಟನು,

ಸ್ನೇಹಲ್ ಚೇತರಿಸಿಕೊಳ್ಳುತ್ತಿದ್ದಾನೆ. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಪೊಲೀಸರು ಸಲೀಂ, ವಾಸಿಂ ಹಾಗೂ ಸಾದಿಕ್‌ನನ್ನು ಬಂಧಿಸಿದ್ದಾರೆ. ವಿಚಾರಣೆ ನಂತರವಷ್ಟೇ ಸತ್ಯ ಹೊರಬೀಳಲಿದೆ ಎಂದು ಪೊಲೀರು ತಿಳಿಸಿದ್ದಾರೆ. ಎಸಿಪಿ ಸೋಮಲಿಂಗಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಕೇಶಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.

Write A Comment