ಮಂಗಳೂರು : ಕೆಎಂಸಿ ಆಸ್ಪತ್ರೆಯ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಒಳಗೊಂಡಿರುವ ಆ್ಯಂಬುಲೆನ್ಸ್ ಸೇವೆ ಮಣಿಪಾಲ್ ಆಂಬುಲೆನ್ಸ್ ರೆಸ್ಪಾನ್ಸ್ ಸರ್ವೀಸ್ಗೆ ಶುಕ್ರವಾರ ನಗರದ ಡಾ| ಅಂಬೇಡ್ಕರ್ ವೃತ್ತದ ಬಳಿ ಇರುವ ಕೆಎಂಸಿ ಆಸ್ಪತ್ರೆಯಲ್ಲಿ ಜರಗಿದ ಸಮಾರಂಭದಲ್ಲಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಶರಣಪ್ಪ ಅವರು (ಮಾರ್ಸ್) ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, “ಮಾರ್ಸ್’ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು ತುರ್ತು ಚಿಕಿತ್ಸೆ ಒದಗಿಸುವಲ್ಲಿ ಉಪಯುಕ್ತವಾಗಿದೆ. ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ, ಅಪಘಾತದಲ್ಲಿ ಗಾಯಗೊಂಡವರಿಗೆ ಕ್ಷಿಪ್ರ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆತಾಗ ಜೀವರಕ್ಷಣೆ ಸಾಧ್ಯವಾಗುತ್ತದೆ. ಕೆಎಂಸಿ ಆಸ್ಪತ್ರೆ ಆರಂಭಿಸಿರುವ ನೂತನ ಸೌಲಭ್ಯ ಅತ್ಯಾವಶ್ಯ ಮತ್ತು ಜನಪರ ಕ್ರಮವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಮಣಿಪಾಲ ವಿಶ್ವವಿದ್ಯಾನಿಲಯ ಸಹ ಕುಲಪತಿ ಡಾ| ಸುರೇಂದ್ರ ವಿ. ಶೆಟ್ಟಿ ಅವರು ಮಾತನಾಡಿ, ಶ್ರೇಷ್ಠ ಮುತ್ಸದ್ಧಿ ಡಾ| ಟಿ.ಎಂ.ಎ. ಪೈ ಅವರ ದೂರದರ್ಶಿತ್ವ ಮತ್ತು ಜನಪರ ಕಾಳಜಿಯ ಫಲವಾಗಿ ರೂಪುಗೊಂಡಿರುವ ಕೆಎಂಸಿ ವೈದ್ಯಕೀಯ ಕ್ಷೇತ್ರದಲ್ಲಿನ ಅತ್ಯಾಧುನಿಕ ಚಿಕಿತ್ಸೆಗಳು, ಸೌಲಭ್ಯಗಳು, ತಂತ್ರಜ್ಞಾನಗಳನ್ನು ಪರಿಚಯಿಸುತ್ತಾ ಗುಣಮಟ್ಟದ ವೈದ್ಯಕೀಯ ಸೇವೆಯ ಪರಂಪರೆಯನ್ನು ಹೊಂದಿದ್ದು ಇಂದು ಆರಂಭಗೊಂಡಿರುವ ಮಾರ್ಸ್ ಸೇವೆ ಇದರ ಭಾಗವಾಗಿದೆ ಎಂದರು.
ಮಣಿಪಾಲ ಕೆಎಂಸಿ ಸಿಇಒ ಹಾಗೂ ವೈದ್ಯಕೀಯ ಅಧೀಕ್ಷಕ ಕ| ಡಾ| ದಯಾನಂದ್ ಅವರು ಮಾರ್ಸ್ ಈಗಾಗಲೇ ಬೆಂಗಳೂರಿನಲ್ಲಿ ಅತ್ಯಂತ ಉಪಯುಕ್ತ ಸೇವೆಯ ಮೂಲಕ ಜನಮನ್ನಣೆಗೆ ಪಾತ್ರವಾಗಿದೆ ಎಂದು ವಿವರಿಸಿದರು.
ಮಂಗಳೂರು ಎಸಿಪಿ ಉದಯ ನಾಯಕ್ ಅವರು ಮಾರ್ಸ್ ದೂರವಾಣಿ ಸಂಖ್ಯೆಯನ್ನು ಅನಾವರಣಗೊಳಿಸಿದರು. ಮಂಗಳೂರು ಕೆಎಂಸಿ ಡೀನ್ ಡಾ| ಎಂ.ವಿ. ಪ್ರಭು, ಮಣಿಪಾಲ ಹೆಲ್ತ್ ಎಂಟರ್ಪ್ರೈಸಸ್ ಗ್ಲೋಬಲ್ ಮಾರ್ಕೆಟಿಂಗ್ ಹೆಡ್ ಸೋನಾಲ್ ಅತಿಥಿಯಾಗಿದ್ದರು.
ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಆನಂದ್ ವೇಣುಗೋಪಾಲ್ ಸ್ವಾಗತಿಸಿದರು. ಕೆಎಂಸಿ ಆಸ್ಪತ್ರೆಯ ಘಟಕದ ಮುಖ್ಯಸ್ಥ ಸಗೀರ್ ಸಿದ್ದಿಕಿ, ಡಾ| ಮೇಬಲ್ ಉಪಸ್ಥಿತರಿದ್ದರು. ಅಂಜಲಿ ಕಾರ್ಯಕ್ರಮ ನಿರೂಪಿಸಿದರು.
ಬ್ಯಾರಿಕೇಡ್ ಕೊಡುಗೆ : ಮಂಗಳೂರು ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಪೂರಕವಾಗಿ ಕೆಎಂಸಿ ಆಸ್ಪತ್ರೆ ವತಿಯಿಂದ 60 ಬ್ಯಾರಿಕೇಡ್ಗಳನ್ನು ಪೊಲೀಸ್ ಇಲಾಖೆಗೆ ನೀಡಲು ನಿರ್ಧರಿಸಲಾಗಿದ್ದು ಇದರ ಪ್ರಥಮ ಕಂತನ್ನು ಮಣಿಪಾಲ ಹೆಲ್ತ್ ಎಂಟರ್ಪ್ರೈಸಸ್ ಗ್ಲೋಬಲ್ ಮಾರ್ಕೆಟಿಂಗ್ ಹೆಡ್ ಸೋನಾಲ್ ಅವರು ಎಸಿಪಿ ಉದಯ ನಾಯಕ್ ಅವರಿಗೆ ಹಸ್ತಾಂತರಿಸಿದರು.
“ಮಾರ್ಸ್’
ಮಣಿಪಾಲ್ ಆ್ಯಂಬುಲೆನ್ಸ್ ರೆಸ್ಪಾನ್ಸ್ ಸರ್ವೀಸ್ (ಮಾರ್ಸ್) ಅತ್ಯಾಧುನಿಕ ಸೌಲಭ್ಯ ಹಾಗೂ ತಂತ್ರಜ್ಞಾನಗಳನ್ನು ಒಳಗೊಂಡಿರುವ ಹವಾನಿಯಂತ್ರಿತ ಆ್ಯಂಬುಲೆನ್ಸ್ ಸೇವೆಯಾಗಿದೆ. ಮಾರ್ಸ್ನಲ್ಲಿ ಒಟ್ಟು 17 ಆ್ಯಂಬುಲೆನ್ಸ್ಗಳು ಕಾರ್ಯಾಚರಿಸುತ್ತಿದ್ದು ಕೇರಳ ಹಾಗೂ ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ಕೇಂದ್ರಗಳಿರುತ್ತವೆ. ತುರ್ತು ಸಂಖ್ಯೆ 0824- 2222227ಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ.
ತುರ್ತು ವೈದ್ಯಕೀಯ ನೆರವು ತಂತ್ರಜ್ಞರು, ಮೂಲ ಜೀವರಕ್ಷಕ ಔಷಧಗಳು, ಇಸಿಜಿ, 4 ಆಮ್ಲಜನಕ ಸಿಲಿಂಡರ್ಗಳು, ವೆಂಟಿಲೇಟರ್ ಮುಂತಾದ ಸೌಲಭ್ಯ ಗಳಿರುತ್ತವೆ. ಜಿಪಿಎಸ್ ಹಾಗೂ ಲೈವ್ ವೆಬ್ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿದ್ದು, ಕೆಎಂಸಿ ಆಸ್ಪತ್ರೆಯಲ್ಲಿರುವ ತುರ್ತು ವೈದ್ಯಕೀಯ ಚಿಕಿತ್ಸಾ ಕೇಂದ್ರಕ್ಕೆ ಸಂಪರ್ಕ ಹೊಂದಿರುತ್ತದೆ. ಆ್ಯಂಬುಲೆನ್ಸ್ಗೆ ವರ್ಗಾಯಿಸಿದ ಕೂಡಲೇ ರೋಗಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಆರಂಭವಾಗುತ್ತದೆ.
ಆ್ಯಂಬುಲೆನ್ಸ್ನಲ್ಲಿರುವ ರೋಗಿಯ ಆರೋಗ್ಯ ಸ್ಥಿತಿಯನ್ನು ಕೇಂದ್ರದ ಮೂಲಕ ಗಮನಿಸಲಾಗುತ್ತದೆ ಮತ್ತು ಕಾಲಕಾಲಕ್ಕೆ ವೈದ್ಯಕೀಯ ತಂತ್ರಜ್ಞರಿಗೆ ವೈದ್ಯರು ನಿರ್ದೇಶನಗಳನ್ನು ನೀಡುತ್ತಾರೆ. ಆ್ಯಂಬುಲೆನ್ಸ್ನಲ್ಲಿ ತುರ್ತು ಔಷಧಗಳನ್ನು ಇಡಲಾಗಿದೆ.