ಮಂಗಳೂರು,ಜೂನ್ .25 : ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಭೇದಿಸಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಪಶ್ಚಿಮ ವಲಯದ ಐಜಿಪಿ ಅಮೃತ್ ಪೌಲ್ ಅವರು ಪ್ರಶಂಸಿಸಿ 35,000ರೂ. ನಗದು ಬಹುಮಾನ ಘೋಷಿಸಿದ್ದಾರೆ.
9ನೇ ತರಗತಿಯ ಸುಮಾರು 16 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿ ಜೂ. 20ರಂದು ಉಪ್ಪಿನಂಗಡಿಯಲ್ಲಿರುವ ತನ್ನ ಶಾಲೆಯಿಂದ ಒಳಕಡಮ, ಕೊನೆಮಜಲು ದಾರಿಯಾಗಿ ಒಬ್ಬಳೇ ಮನೆಗೆ ಹಿಂತಿರುಗುತ್ತಿದ್ದಾಗ, ಆಕೆಯನ್ನು ಪದವು ಎಂಬಲ್ಲಿ ತಡೆದ ಅಪರಿಚಿತನೊಬ್ಬ ಕಾಡಿನೊಳಗೆ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ. ಬಳಿಕ ವಿದ್ಯಾರ್ಥಿನಿ ನೀಡಿದ ದೂರಿನ ಅನ್ಚಯ ಅಪರಿಚಿತ ವ್ಯಕ್ತಿಯ ಮೇಲೆ ಪೋಕ್ಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿದ ಪೊಲೀಸರು ಆಕೆ ನೀಡಿದ ಸುಳಿವಿನಂತೆ ಅತ್ಯಾಚಾರ ಮಾಡಿದ ಆರೋಪಿ ಶೇಖರ ಎಂಬಾತನನ್ನು ಬಂಧಿಸುವಲ್ಲಿ ಸಫಲರಾದರು.ನ್ಯಾಯಾಲಯವು ಆರೋಪಿಗೆ ಜು. 6ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಕ್ಲಿಷ್ಟಕರ ಪ್ರಕರಣ ಭೇದಿಸುವಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತ ಕುಮಾರ್, ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ್ ಎಸ್., ಪುತ್ತೂರು ವಿಭಾಗದ ಡಿವೈಎಸ್ಪಿ ಭಾಸ್ಕರ ರೈ ಎನ್.ಜಿ., ಪುತ್ತೂರು ಗ್ರಾಮಾಂತರ ವೃತ್ತದ ಸಿಪಿಐ ಅನಿಲ್ ಎಸ್. ಕುಲಕರ್ಣಿ, ಪುತ್ತೂರು ನಗರ ಠಾಣೆಯ ಪಿಐ ಮಹೇಶ್ ಪ್ರಸಾದ್, ಕಡಬ ಠಾಣೆಯ ಪಿಎಸ್ಐ ಯೋಗೀಶ್ ಕುಮಾರ್ ಬಿ.ಸಿ., ಬಂಟ್ವಾಳ ಗ್ರಾಮಾಂತರದ ಪಿಎಸ್ಐ ರಕ್ಷಿತ್, ಸಿಬ್ಬಂದಿ ಪುಟ್ಟಸ್ವಾಮಪ್ಪ, ತಾರನಾಥ, ಪ್ರವೀಣ್, ಕೃಷ್ಣಪ್ಪ, ಭಾಸ್ಕರ, ಕನಕರಾಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ನಿಟ್ಟಿನಲ್ಲಿ 24ಗಂಟೆಯೊಳಗೆ ಗಂಭೀರ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾದ್ದರಿಂದ ಐಜಿಪಿ ಬಹುಮಾನ ಘೋಷಿಸಿದ್ದಾರೆ.