ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್. ಲೋಬೊ ರವರು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರು, ಉಪಮಹಾಪೌರರು, ವಿವಿಧ ಸಮಿತಿಗಳ ಅಧ್ಯಕ್ಷರುಗಳು, ಆಯುಕ್ತರು, ಜಂಟಿ ಆಯುಕ್ತರು ಹಾಗೂ ಮನಪಾದ ವಿವಿಧ ವಿಭಾಗದ ಅಧಿಕಾರಿಗಳೊಂದಿಗೆ ಅಭಿವೃದ್ಧಿ ವಿಚಾರಗಳ ಕುರಿತು ಮನಪಾದ ಸಮಿತಿ ಸಭಾಂಗಣದಲ್ಲಿ ಸಭೆ ನಡೆಸಿದರು. ಮುಖ್ಯವಾಗಿ ಮಳೆಗಾಲದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಹಾಗೂ ನಡೆಸಬೇಕಾದ ಪೂರ್ವ ತಯಾರಿ, ನಗರದ ಪಂಪುವೆಲ್ ಬಳಿ ನೂತನ ಬಸ್ಸ್ಟಾಂಡ್ ನಿರ್ಮಾಣ ಹಾಗೂ ನಗರದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣದ ಕುರಿತು ವಿಸ್ತಾರವಾಗಿ ಸಮಾಲೋಚನೆ ನಡೆಸಿದರು.
ನಗರದ ಸೆಂಟ್ರಲ್ ಮಾರುಕಟ್ಟೆಯನ್ನು ವ್ಯವಸ್ಥಿತವಾಗಿ ನಿರ್ಮಿಸಿ ಹೊಸ ಆಯಾಮ ನೀಡುವುದರೊಂದಿಗೆ ನಗರದ ಕದ್ರಿ, ಕಂಕನಾಡಿ ಮತ್ತು ಉರ್ವದಲ್ಲಿಯೂ ಆಧುನಿಕ ತಂತ್ರಜ್ಞಾನದೊಂದಿಗೆ ಸುಸಜ್ಜಿತ ಮಾರುಕಟ್ಟೆಗಳನ್ನು ನಿರ್ಮಾಣ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಾಯಿತು. ವಿವಿಧ ದಿನಬಳಕೆಯ ಅಗತ್ಯ ವಸ್ತುಗಳನ್ನು ಇದೀಗ ತಲೆಹೊರೆಯ ವ್ಯವಸ್ಥೆಯಂತೆ ಹಾಗೂ ನೂತನ ಮಾರುಕಟ್ಟೆಯಲ್ಲಿ ನಿರ್ಮಿಸಲಾದ ಅಂಗಡಿಗಳ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಡಿಮೆ ದರದಲ್ಲಿ ಗುಣಮಟ್ಟದ ಸಾಮಾಗ್ರಿಗಳನ್ನು ಈ ಮಾರುಕಟ್ಟೆಯಲ್ಲಿ ಪಡೆಯುವ ಬಗ್ಗೆ ಯೋಜಿಸಲಾಯಿತು.
ಮುಂದಕ್ಕೆ ಈ ಸಭೆಯ ನಡವಳಿಯ ಆಧಾರದಲ್ಲಿ ಮನಪಾ ಆಯುಕ್ತರು ಮಾರುಕಟ್ಟೆಯ ನೀಲಿನಕಾಶೆಯನ್ನು ಪರಿಶೀಲಿಸಿ ಮಹಾಪೌರರೊಂದಿಗೆ ವಿಮರ್ಶಿಸಿ ಮನಪಾದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಿಸಿ, ಅಂಗೀಕರಿಸಿ ಆದಷ್ಟು ಬೇಗ ಡಿಪಿಆರ್ ನ್ನು ತಯಾರಿಸುವ ಬಗ್ಗೆ ನಿರ್ಣಯಿಸಲಾಯಿತು.
ಸದ್ರಿ ಯೋಜನೆಗಳಿಗೆ ಅವಶ್ಯಕ ಯೋಜನಾ ವೆಚ್ಚವನ್ನು ಸರಕಾರದಿಂದ ಪಡೆಯುವ ಬಗ್ಗೆ ಮಾನ್ಯ ಶಾಸಕರಾದ ಶ್ರೀ ಜೆ. ಆರ್. ಲೋಬೊರವರು ಭರವಸೆ ನೀಡಿದರು. ಇದರಂತೆ ಆದಷ್ಟು ಬೇಗ ಮಾರುಕಟ್ಟೆಗಳ ನಿರ್ಮಾಣದ ಪೂರ್ವ ತಯಾರಿಯನ್ನು ನಡೆಸುವಂತೆ ಅಧಿಕಾರಿಗಳಿಗೆ ತಾಂತ್ರಿಕ ತಜ್ಞರಿಗೆ ಸಲಹೆ ನೀಡಿದರು.