ಕುಂದಾಪುರ: ಕಳೆದೆರಡು ದಿನಗಳ ಹಿಂದೆ ಗೇರುಬೀಜ ಸಂಗ್ರಹಣೆಗಾಗಿ ಹಾಡಿಗೆ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿದ್ದು ಅವರ ಶವ ಮನೆ ಸಮೀಪದ ಅಕೇಶಿಯಾ ಪ್ಲಾಂಟೇಶನ್ನಲ್ಲಿ ಶನಿವಾರ ಬೆಳಿಗ್ಗೆ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ಗಂಗೊಳ್ಳಿ ಸಮೀಪದ ಗುಜ್ಜಾಡಿಯ ನಿವಾಸಿ ಚಂದ್ರಶೇಖರ್ ದೇವಾಡಿಗ (41) ಎನ್ನುವವರೇ ಶವವಾಗಿ ಪತ್ತೆಯಾದವರಾಗಿದ್ದಾರೆ.
ಘಟನೆ ವಿವರ; ಎಪ್ರಿಲ್ 23 ರಂದು ತಮ್ಮ ಗುಜ್ಜಾಡಿಯ ನಿವಾಸದಿಂದ ಮನೆ ಸಮಿಪದ ಗೆರು ಹಾಡಿಗೆ ಗೇರುಬೀಜ ಸಂಗ್ರಹಣೆಗಾಗಿ ತೆರಳಿದ್ದ ಅವರು ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಮನೆಯವರು ಹಾಗೂ ಸಮಿಪದವರು ಹುಡುಕಾಟ ನಡಿಸಿದರೂ ಯಾವುದೇ ಪ್ರಯೋಜನವಾಗದ ಕಾರಣ ಎ.24 (ಶುಕ್ರವಾರ) ಗಂಗೊಳ್ಳಿ ಪೊಲೀಸು ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಆದರೇ ಶನಿವಾರ ಬೆಳಿಗ್ಗೆ ಚಂದ್ರ ಅವರು ತಮ್ಮ ಮನೆ ಸಮೀಪದ ಅಕೇಶಿಯಾ ಪ್ಲಾಂಟೇಶನ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಚಂದ್ರ ಅವರ ಶವದ ಸಮೀಪವೇ ಅವರ ಚಪ್ಪಲಿ ಹಾಗೂ ಸಂಗ್ರಹಿಸಿದ ಗೇರು ಬೀಜಗಳ ಚೀಲವೂ ಪತ್ತೆಯಾಗಿದ್ದು, ಶವವನ್ನು ಗಮನಿಸಿದ ಸ್ಥಳೀಯರು ಹಾಗೂ ಆತನ ಕುಟುಂಬಿಕರು ಅನುಮಾನ ವ್ಯಕ್ತಪಡಿಸಿದ ಕಾರಣ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸುದರ್ಶನ್, ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.