ಸುರತ್ಕಲ್: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ಹೊನ್ನಕಟ್ಟೆ ಜಂಕ್ಷನ್ ನಲ್ಲಿ ಶುಕ್ರವಾರ ಮುಂಜಾನೆ ಖಾಸಗಿ ಸರ್ವಿಸ್ ಬಸ್ ಹಿಂಭಾಗಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ:
ಕಿನ್ನಿಗೋಳಿಯಿಂದ ಮುಂಜಾನೆ 6 ಗಂಟೆಗೆ ಹೊರಟಿದ್ದ ಸರ್ವಾಣಿ ಹೆಸರಿನ ಸರ್ವಿಸ್ ಬಸ್ ಹೊನ್ನಕಟ್ಟೆ ಜಂಕ್ಷನ್ನಿನಲ್ಲಿ ಪ್ರಯಾಣಿಕರನ್ನು ತುಂಬಿಸುತ್ತಿದ್ದ ಸಂದರ್ಭ ಹಿಂದಿನಿಂದ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿಕೊಂಡು ಬಂದ ಲಾರಿ ನೇರವಾಗಿ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್ ಮುಂದಕ್ಕೆ ಚಲಿಸಿ ಪಕ್ಕದ ಕಮರಿಗೆ ಇಳಿದಿದೆ. ಬಸ್ಸಿನ ಹಿಂಬದಿ ಸೀಟುಗಳಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು ಅವರನ್ನು ಸ್ಥಳೀಯರು ತಕ್ಷಣವೇ ಹೊರಕ್ಕೆಳೆದು ಆಸ್ಪತ್ರೆಗೆ ಸಾಗಿಸಿದ್ದಾರೆ.
ಅಪಘಾತವೆಸಗಿದ ಲಾರಿಯ ಮುಂದಿನ ಚಕ್ರ ತುಂಡಾಗಿದ್ದು ಸ್ವಲ್ಪ ಮುಂದಕ್ಕೆ ಚಲಿಸಿ ನಿಂತಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸುರತ್ಕಲ್ ಪೊಲೀಸ್ ತಂಡ ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿದೆ. ಲಾರಿ ಚಾಲಕ ನಿದ್ದೆಯ ಮಂಪರಿನಲ್ಲಿ ವಾಹನ ಚಲಾಯಿಸುತ್ತಿರಬೇಕೆಂದು ಶಂಕಿಸಲಾಗಿದೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರ : ಶಶಿಧರ್ ಬಂಗೇರಾ