ಮಂಗಳೂರು, ಫೆ.3: ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ವಧುವಿಗೆ ತೊಡಿಸಲು ತಂದಿದ್ದ ಸುಮಾರು 5.06 ಲಕ್ಷ ರೂ. ವೌಲ್ಯದ ಚಿನ್ನಾಭರಣ ಕಳವಾದ ಘಟನೆ ಫೆ.1ರಂದು ನಡೆದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾರಾಯಣ ಶೆಟ್ಟಿ ಎಂಬವರ ಪುತ್ರಿ ನವ್ಯ ಎಂಬಾಕೆಯ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಇಲ್ಲಿನ ಹೊಟೇಲೊಂದರಲ್ಲಿ ರೂಮ್ ಮಾಡಲಾಗಿತ್ತು. ಹೊಟೇಲಿನ 304ನೆ ರೂಮ್ನಲ್ಲಿ ಅವರ ಪುತ್ರಿಯರಾದ ನವ್ಯ ಮತ್ತು ದ್ರವ್ಯ ಎಂಬವರು ತಂಗಿದ್ದರು. ನವ್ಯ ಧರಿಸಿದ್ದ ಸುಮಾರು 5.06 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ತೆಗೆದು ಪೆಟ್ಟಿಗೆಯೊಂದರಲ್ಲಿ ಹಾಕಿ ರೂಮ್ನಲ್ಲಿ ಇದ್ದ ಕ್ಯಾರಿಯರ್ ಬ್ಯಾಗಿನೊಳಗಡೆ ಇಟ್ಟು ಭದ್ರಪಡಿಸಿದ್ದರು.
ಮಧ್ಯಾಹ್ನ 12:30 ಗಂಟೆಗೆ ರೂಮ್ನ ಬಾಗಿಲಿಗೆ ಬೀಗ ಹಾಕಿ ಕಾರ್ಯಕ್ರಮಕ್ಕೆ ಹೋಗಿ ಬಳಿಕ ವಾಪಾಸು ರೂಮ್ಗೆ ಬಂದು ಅಪರಾಹ್ನ 3:30 ಗಂಟೆಗೆ ತಮ್ಮ ಕ್ಯಾರಿಯರ್ ಬ್ಯಾಗ್ನೊಂದಿಗೆ ಹೊಟೇಲ್ ರೂಮ್ನಿಂದ ಹೊರಟು ಮನೆಗೆ ಹೋಗಿದ್ದರು. 4 ಗಂಟೆಯ ಸುಮಾರಿಗೆ ಮನೆಯಲ್ಲಿ ಕ್ಯಾರಿಯರ್ ಬ್ಯಾಗ್ನ್ನು ತೆರೆದು ನೋಡಿದಾಗ ಬ್ಯಾಗ್ನಲ್ಲಿ ಇಟ್ಟಿದ್ದ ಚಿನ್ನಾಭರಣಗಳಿದ್ದ ಪೆಟ್ಟಿಗೆ ಇರಲಿಲ್ಲ ಎಂದು ಪಾಂಡೇಶ್ವರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.