ಮಂಗಳೂರು, ಫೆ.02 : ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಜನಸಂಖ್ಯೆ ಹೆಚ್ಚುತ್ತಲೇ ಸ್ವಚ್ಛತಾ ಸಮಸ್ಯೆಯೂ ಅಧಿಕವಾಗಿ ಕಾಡುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾದರೆ ಸ್ವಚ್ಛತಾ ಸಮಸ್ಯೆಯನ್ನು ಸರಿಪಡಿಸಲು ಸಾಧ್ಯ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎನ್.ವಿನಯ ಹೆಗ್ಡೆ ಅಭಿಪ್ರಾಯಪಟ್ಟರು. ರಾಮಕೃಷ್ಣ ಮಿಷನ್ ವತಿಯಿಂದ ನಗರದ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ರವಿವಾರ ನಡೆದ ‘ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು. ಸ್ವಚ್ಛ ಭಾರತ ಪರಿಕಲ್ಪನೆಗೆ ಒತ್ತು ನೀಡುವುದರೊಂದಿಗೆ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಸ್ವಾಮಿ ಆತ್ಮರೂಪಾನಂದಜೀ ಹೇಳಿದರು. ಸ್ವಚ್ಛತಾ ಕಾರ್ಯಕ್ಕೆ ಯುವಜನತೆ ಮುಂದಾಗಿರುವುದು ಒಳ್ಳೆಯ ಲಕ್ಷಣ. ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಿದಲ್ಲಿ ಯಶಸ್ಸು ಸಿಗುತ್ತದೆ. ಹಾಗೇ ಯುವಜನತೆಯಿಂದ ಮಹತ್ತರ ಬದಲಾವಣೆ ಸಾಧ್ಯ ಎಂದು ಉದ್ಯಮಿ ಡಾ.ಬಿ.ಆರ್.ಶೆಟ್ಟಿ ಹೇಳಿದರು.
ಸಮಾರಂಭದಲ್ಲಿ 70 ಮಂದಿ ಸ್ವಚ್ಛತಾ ಪೌರಕಾರ್ಮಿಕರನ್ನು ಗೌರವಿಸಲಾಯಿತು. ಈ ಸಂದರ್ಭ ಸ್ವಾಮಿ ವಿವೇಕಾನಂದರ ಕುರಿತ ‘ಸ್ಫೂರ್ತಿ ಸೂಕ್ತಿ’ ಟೇಬಲ್ ಟಾಪ್ ಕ್ಯಾಲೆಂಡರನ್ನು ಬಿಡುಗಡೆಗೊಳಿಸಲಾಯಿತಲ್ಲದೆ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸ್ವಚ್ಛತಾ ಉಪಕರಣಗಳನ್ನು ಹಸ್ತಾಂತರಿಸಲಾಯಿತು.
ನಗರ ಸ್ವಚ್ಛತೆಗೆ ಪಾಲಿಕೆ ವಿಶೇಷ ಒತ್ತು ನೀಡುತ್ತಿದೆ. ಜನತೆ ಕೂಡ ಸಹಭಾಗಿತ್ವ ವಹಿಸಬೇಕು. ಸ್ವಚ್ಛತೆಯಲ್ಲಿ ರಾಷ್ಟ್ರದಲ್ಲೇ ಮಂಗಳೂರು ನಗರ 8ನೆ ಸ್ಥಾನ ಪಡೆದಿದೆ. ಅದನ್ನು ಮೊದಲ ಸ್ಥಾನಕ್ಕೆ ತರಬೇಕಾಗಿದೆ ಎಂದು ಮೇಯರ್ ಮಹಾಬಲ ಮಾರ್ಲ ತಿಳಿಸಿದರು.
ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಡಾ.ಜೀವರಾಜ್ ಸೊರಕೆ, ಪ್ರೊ.ರಘೋತ್ತಮ ರಾವ್, ಪಾಲಿಕೆ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ರಾಮ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಸ್ವಚ್ಛ ಭಾರತ ಪರಿಕಲ್ಪನೆಯ ಹಿನ್ನೆಲೆಯಲ್ಲಿ ರಾಮಕೃಷ್ಣ ಮಿಷನ್ ಜನತೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ರಾಮಕೃಷ್ಣ ಮಠದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸಹಿತ 4 ಸಾವಿರ ಮಂದಿ ಸ್ವಚ್ಛತಾ ಅಭಿಯಾನದಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಪ್ರತಿ ರವಿವಾರ ವಾರ್ಡ್ನ್ನು ಆಯ್ಕೆ ಮಾಡಿ ಶುಚಿಗೊಳಿಸುವುದರೊಂದಿಗೆ ಎನ್ನೆಸ್ಸೆಸ್, ಎನ್ಸಿಸಿ ವಿದ್ಯಾರ್ಥಿಗಳು ಜನತೆಯಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸುವ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ರವಿವಾರ ‘ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು’ ಕಾರ್ಯಕ್ರಮದ ಅಂಗವಾಗಿ ಮಂಗಳಾದೇವಿ ವಾರ್ಡ್ನಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಸಭಾ ಕಾರ್ಯಕ್ರಮಕ್ಕೆ ಮುನ್ನ ನೆಹರೂ ಮೈದಾನದಿಂದ ಮಠದವರೆಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಸ್ವಚ್ಛತಾ ಜಾಗೃತಿ ಜಾಥಾ ನಡೆಸಿದರು.