ಕುಂದಾಪುರ: ನಾಲ್ಕನೇ ತರಗತಿ ವಿದ್ಯಾರ್ಥಿ ಕೋಟ ಸಮೀಪದ ಬನ್ನಾಡಿಯ ಉಪ್ಲಾಡಿ ನಿವಾಸಿ ಸುಘೋಶ್ (10) ಕೊಲೆ ಪ್ರಕರಣದ ಬಾಲಾರೋಪಿ ಜಯದೇವ ವಾಸವಿದ್ದ ಆತನ ಚಿಕ್ಕಪ್ಪನಾದ ಕಲ್ಯಾಣಕುಮಾರ್ ಅಡಿಗ ಅವರ ಮನೆಗೆ ಬುಧವಾರ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಘಟನೆ ವಿವರ: ಸುಘೋಶನ ಕೊಲೆ ಆರೋಪಿ ಜಯದೇವನ ಚಿಕ್ಕಪ್ಪ ಕಲ್ಯಾಣಕುಮಾರ ವಾಸವಿದ್ದ ಬನ್ನಾಡಿಇ ಉಪ್ಲಾಡಿ ನಿವಾಸದಲ್ಲಿ ಮಲಗಿದ್ದ ವೇಳೆ ಬುಧವಾರ ತಡರಾತ್ರಿ ಹೊರಭಾಗದಲ್ಲಿ ಕೆಲವು ಮಂದಿ ದುಷ್ಕರ್ಮಿಗಳು ಆಗಮಿಸಿ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಐದಾರು ಮಂದಿ ಗುಂಪು ಕತ್ತಲೆಯಲ್ಲಿ ಮನೆಯ ಮುಖ್ಯದ್ವಾರ, ಬಲಭಾಗದ ಕೊಟ್ಟಿಗೆ ಮತ್ತು ಗೋದಾಮಿಗೆ ಹಾಗೂ ಮನೆ ಮುಂಭಾಗ ಸಂಗ್ರಹಿಸಿಟ್ಟಿದ್ದ ತೆಂಗಿನಕಾಯಿ ಹಾಗೂ ಎದುರಿನಲ್ಲಿ ಶೇಖರಿಸಿಟ್ಟಿದ್ದ ತೆಂಗಿನಗರಿಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ತಗಡಿನ ಮೇಲ್ಚಾವಣಿ, ಪಕ್ಕಾಸೆ, ಒಣಹುಲ್ಲು, ಕಿಟಕಿ ಗಾಜುಗಳು ಹಾಗೂ ಗೋದಾಮಿನಲ್ಲಿದ್ದ ನಿತ್ಯೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿದೆ. ಕೂಡಲೇ ಕುಂದಾಪುರ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಘಟನೆ ಹಿನ್ನೆಲೆ: ಕಳೆದ ಶನಿವಾರ ಸಂಜೆ 4 ನೇ ತರಗತಿ ವಿದ್ಯಾರ್ಥಿ ಸುಘೋಶ್ ತನ್ನ ಸ್ನೇಹಿತನಾದ ಜಯದೇವನ ಮನೆಗೆ ಆಟವಾಡಲು ತೆರಳಿ ಬಳಿಕ ನಾಪಾತ್ತೆಯಾಗಿದ್ದು ಸೋಮವಾರ ಬೆಳಿಗ್ಗೆ ಜಯದೇವ ವಾಸವಿದ್ದ ಆತನ ಚಿಕ್ಕಪ್ಪನ ಮನೆಯ ಪಂಪುಸೆಟ್ ಬಾವಿಯಲ್ಲಿ ಹೆಣವಾಗಿ ಪತ್ತೆಯಾಗಿದ್ದ. ವಿಚಾರಣೆ ವೇಳೆ ಜಯದೇವ ಹಾಗೂ ಸುಘೋಶ್ ನಡುವೆ ನಡೆದ ಮಾತಿನ ಚಕಮಕಿಯಲ್ಲಿ ಸುಘೋಶನನ್ನು ಜಯದೇವ ಹೊಡೇದು ಕೊಂದು ಬಳಿಕ ಬಾವಿಗೆಸೆದಿರುವುದು ತಿಳಿದಿತ್ತು. ಈ ವಿಚಾರ ತಿಳಿದ ಸ್ಥಳಿಯರು ಈ ಕೊಲೆಗೆ ಜಯದೇವನ ಚಿಕ್ಕಪ್ಪ ಕಲ್ಯಾಣಕುಮಾರನ ಸಹಕಾರವಿತ್ತೆಂದು ಆರೋಪಿಸಿ ಅವರಿಗೆ ಹಲ್ಲೆ ಮಾಡಿ, ಮನೆಗೂ ಕಲ್ಲು ತೂರಾಟ ನಡೆಸಿದ್ದರು.
ಘಟನಾ ಸ್ಥಳಕ್ಕೆ ಮಂಗಳೂರು ವಿಧಿವಿಜ್ಞಾನ ಪ್ರಯೋಗಾಲಯ ತಂಡ ಭೇಟಿ ನೀಡಿದೆ. ಉಡುಪಿ ಡಿವೈಎಸ್ಪಿ ಚಂದ್ರಶೇಖರ್, ಬ್ರಹ್ಮಾವರ ವೃತ್ತನಿರೀಕ್ಷಕ ಅರುಣ ನಾಯಕ್, ಕೋಟ ಠಾಣಾಧಿಕಾರಿ ಕೆ.ಆರ್.ನಾಯ್ಕ್ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.