ಧರ್ಮಸ್ಥಳ, ಜ.07 : ಅಮೇರಿಕಾದ ಬಿಷಪರುಗಳಾದ ಸುದರ್ಶನ ದೇವಧರ್, ವಾರ್ನರ್ ಬ್ರೌನ್ ಮತ್ತು ಸಂಡ್ರಾ ಎಲ್. ಸ್ಟೈನರ್ಬಾಲ್ ನೇತೃತ್ವದಲ್ಲಿ 36 ಮಂದಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರೊಡನೆ ಮಾತನಾಡಿ ಕ್ಷೇತ್ರದ ಬಗ್ಗೆ ಮಾಹಿತಿ ಪಡೆದರು.
ಧರ್ಮಸ್ಥಳದ ವಿಶಿಷ್ಟ ಪದ್ಧತಿಗಳಾದ ನ್ಯಾಯದಾನ, ಹೊಯಿಲು ತೀರ್ಮಾನ, ಆಣೆಮಾತು ತೀರ್ಮಾನ, ಚತುರ್ವಿಧ ದಾನ ಪರಂಪರೆ ಇತ್ಯಾದಿ ಬಹುಮುಖಿ ಸೇವೆಗಳ ಬಗ್ಗೆ ಹೆಗ್ಗಡೆಯವರು ವಿವರಿಸಿದರು. ದೇವಸ್ಥಾನ, ಗ್ರಾಮಾಭಿವೃದ್ಧಿ ಯೋಜನೆ, ಮಂಜೂಷಾ ವಸ್ತು ಸಂಗ್ರಹಾಲಯ, ಕಾರ್ ಮ್ಯೂಸಿಯಂ, ಶಾಂತಿವನ, ಅನ್ನಪೂರ್ಣ ಭೋಜನಾಲಯಕ್ಕೆ ಭೇಟಿ ನೀಡಿದ ಅವರು ಇಲ್ಲಿನ ಕಾರ್ಯವೈಖರಿ ಮತ್ತು ಸೇವಾ ವಿಧಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೆಗ್ಗಡೆಯವರು ಬಿಷಪರುಗಳನ್ನು ಕ್ಷೇತ್ರದ ಪರವಾಗಿ ಸನ್ಮಾನಿಸಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಬದುಕು ನೀರ ಮೇಲಿನ ಗುಳ್ಳೆಯಂತೆ ಕ್ಷಣಿಕವಾಗಿದ್ದು ನಮಗೆ ಸಿಗುವ ಅವಕಾಶದ ಸದುಪಯೋಗ ಪಡೆದು ಏನಾದರು ವಿಶಿಷ್ಟ ಸಾಧನೆ ಮಾಡಬೇಕು ಎಂದು ಪ್ರಸಂಗ ಸಾಗರ ಮುನಿ ಮಹಾರಾಜರು ಮಂಗಲ ಪ್ರವಚನ ನೀಡಿದರು.
ಗೌತಮ ಬುದ್ಧ, ಮಹಾವೀರ, ರಾಮ, ಕೃಷ್ಣ ಮೊದಲಾದವರು ಮಾಡಿದ ವಿಶೇಷ ಸಾಧನೆಗಾಘಿ ಅವರನ್ನು ನಾವು ಇಂದು ಕೂಡಾ ಸ್ಮರಿಸುತ್ತೇವೆ. ಇದೇ ರೀತಿ ವಿಜ್ಞಾನಿಗಳು, ಸಾಹಿತಿಗಳು, ಸಂಶೋಧಕರು ಹಾಗೂ ಕಲಾವಿದರ ಕೊಡುಗೆಯೂ ಅಮೂಲ್ಯವಾಗಿದೆ, ಸಾಧಕರು ರೂಪಿಸಿದ ಕೃತಿಯಿಂದ ಮತ್ತು ಕೃತ್ಯದಿಂದ ನಾವು ಅವರನ್ನು ಸ್ಮರಿಸುತ್ತೇವೆ. ಶಬ್ಧ, ಸಮಯ ಮತ್ತು ಅವಕಾಶದ ಸದುಪಯೋಗ ಪಡೆದು ನಾವು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಪ್ರಾಣಿ-ಪಕ್ಷಿಗಳು ಕೂಡಾ ತಮ್ಮ ಧರ್ಮ ಮತ್ತು ಕರ್ತವ್ಯವನ್ನು ಬಿಡುವುದಿಲ್ಲ. ಹಾಗಾಗಿ ಮನುಷ್ಯರು ಕೂಡಾ ಜಾಗೃತರಾಗಿ ಧರ್ಮಾನುರಾಗಿಗಳಾಗಿ ಸಾರ್ಥಕ ಜೀವನ ನಡೆಸಬೇಕು. ಸಾಮೂಹಿಕ ಭಜನೆ, ಧ್ಯಾನ, ಪ್ರಾರ್ಥನೆ ಮೊದಲಾದ ಕ್ರಿಯೆಗಳಿಂದ ವಿಶೇಷ ಪುಣ್ಯ ಸಂಚಯವಾಗುತ್ತದೆ. ಶಾಂತಿ, ನೆಮ್ಮದಿ ನೆಲೆಸುತ್ತದೆ. ನಾವು ಎಷ್ಟು ಜನರನ್ನು ಪ್ರೀತಿಸುತ್ತೇವೆ ಅನ್ನುವುದಕ್ಕಿಂತಲೂ ಎಷ್ಟು ಜನರು ನಮ್ಮನ್ನು ಪ್ರೀತಿಸುತ್ತಾರೆ ಎನ್ನುವುದು ಮುಖ್ಯ. ಮುಕ್ತ ಮನಸ್ಸಿನಿಂದ ಎಲ್ಲರೊಂದಿಗೂ ಪ್ರೀತಿ-ವಿಶ್ವಾಸದಿಂದ ಇರಬೇಕು. ಸದಾ ಉನ್ನತ ಚಿಂತನೆಯೊಂದಿಗೆ ಸರಳ ಜೀವನ ನಡೆಸಬೇಕು. ಸಾಧು-ಸಂತರ ಸೇವೆ ಹಾಗೂ ರಕ್ಷಣೆ ಮಾಡುವುದು ಶ್ರಾವಕ-ಶ್ರಾವಕಿಯರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.