ಕುಂದಾಪುರ: ನಗರದ ಕೆನರಾ ಬ್ಯಾಂಕ್ನಲ್ಲಿ ಹಣ ಕಟ್ಟಲು ಬಂದ ಗ್ರಾಹಕರೊಬ್ಬರ ಗಮನವನ್ನು ಬೇರೆಡೆ ಸೆಳೆದು ೨ ಲಕ್ಷ ರೂಪಾಯಿ ದೋಚಿ ಪರಾರಿಯಾದ ಘಟನೆ ಡಿ.೨೩ರಂದು ಬೆಳಿಗ್ಗೆ ನಡೆದಿದೆ. ರವಿ ಖಾರ್ವಿ ಎನ್ನುವ ಯುವಕ ಪೆಟ್ರೋಲ್ ಬಂಕ್ ಒಂದರ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಬೆಳಿಗ್ಗೆ ಬ್ಯಾಂಕ್ಗೆ ಬಂದಿದ್ದು, ಈ ಸಂದರ್ಭ ಕ್ಯಾಶ್ ಕೌಂಟರ್ ಮೇಲೆ ಎರಡು ಲಕ್ಷ ರೂಪಾಯಿ ಕಟ್ಟನ್ನು ಇಟ್ಟುಕೊಂಡಿದ್ದರು. ಆ ಸಂದರ್ಭ ಸರದಿಯಲ್ಲಿ ಅವರ ಹಿಂದೆ ವ್ಯಕ್ತಿ ಕೆಳಗೆ ಹಣ ಬಿದ್ದಿದೆ ಎತ್ತಿಕೊಳ್ಳಿ ಎಂದು ರವಿ ಖಾರ್ವಿಯ ಗಮನ ಬೇರೆಡೆ ಸೆಳೆದು ಎರಡು ಲಕ್ಷವನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯ ವಿವರ: ಸುಬ್ರಹ್ಮಣ್ಯ ಕಾಂತ ಎನ್ನುವವರ ಬಸ್ರೂರಿನ ಮಹಾಲಿಂಗೇಶ್ವರ ಪೆಟ್ರೋಲ್ ಬಂಕ್ನ್ನು ಕಿಶೋರ್ ಕುಮಾರ್ ಅವರು ನಡೆಸುತ್ತಿದ್ದು, ಅದರ ಹಣ ಮೂರು ಲಕ್ಷದ ಹನ್ನೊಂದು ಸಾವಿರವನ್ನು ಅಲ್ಲಿನ ಸಿಬ್ಬಂದಿ ರವಿ ಖಾರ್ವಿ ಬ್ಯಾಂಕಿಗೆ ಕಟ್ಟಲು ಬಂದಿದ್ದರು. ಮೂರು ಲಕ್ಷ ಹನ್ನೊಂದು ಸಾವಿರ ಮೊತ್ತಕ್ಕೆ ಎರಡು ಸ್ಲಿಪ್ಗಳನ್ನು ಮಾಡಿಸಿದ್ದು, ಆಗಲೇ ಒಂದು ಲಕ್ಷವನ್ನು ಪಾವತಿಸಿದ್ದರು. ಉಳಿದ ಎರಡು ಲಕ್ಷ ಮೊತ್ತವನ್ನು ಪಾವತಿಸಲು ಕ್ಯಾಶ್ ಕೌಂಟರ್ ಮೇಲಿಟ್ಟುಕೊಂಡಿದ್ದರು. ಆ ಸಂದರ್ಭ ಸರತಿಯಲ್ಲಿ ಇವರ ಹಿಂದೆ ಇದ್ದ ವ್ಯಕ್ತಿ ನಿಮ್ಮ ಹತ್ತು ರೂಪಾಯಿಗಳ ನೋಟು ಕೆಳೆಗೆ ಬಿದ್ದಿದೆ. ಎತ್ತಿಕೊಳ್ಳಿ ಎಂದು ರವಿ ಖಾರ್ವಿಯ ಗಮನ ಬೇರೆಡೆ ಸೆಳೆದಿದ್ದಾನೆ. ರವಿ ಖಾರ್ವಿ ಕೆಳಗೆ ಬಿದ್ದ ಹಣ ಎತ್ತಿಕೊಂಡು ಟೇಬಲ್ ಮೇಲೆ ನೀಡುವಷ್ಟರಲ್ಲಿ ಕೌಂಟರ್ ಟೇಬಲ್ ಮೇಲಿದ್ದ ಹಣ ನಾಪತ್ತೆಯಾಗಿತ್ತು. ಹಿಂದೆ ಇದ್ದ ವ್ಯಕ್ತಿಯೂ ಅಲ್ಲಿರಲಿಲ್ಲ. ತಕ್ಷಣ ರವಿ ಖಾರ್ವಿ ಬ್ಯಾಂಕ್ನ ಗಮನಕ್ಕೆ ತಂದಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಆದರೆ ಹಣ ದರೋಡೆ ಮಾಡಿದ ವ್ಯಕ್ತಿಯ ಯಾವುದೇ ಸುಳಿವು ಸಿಗಲಿಲ್ಲ.
ಸಿಸಿ ಕ್ಯಾಮರ ಆಫ್ : ಬ್ಯಾಂಕಿನಲ್ಲಿ ಅಳವಡಿಸಲಾದ ಸಿಸಿ ಕ್ಯಾಮರ ಆ ಸಂದರ್ಭ ಆಫ್ ಆಗಿತ್ತು. ಸಿಸಿ ಕ್ಯಾಮರ ಅನ್ ಆಗಿದ್ದು ಬೆಳಿಗ್ಗೆ ೧೦.೫೯ಕ್ಕೆ. ಸಿಸಿ ಕ್ಯಾಮರ ಅನ್ ಇದ್ದಿದ್ದರೆ ಹಣ ದರೋಡೆಯಾದ ಪೂರ್ಣ ಮಾಹಿತಿ ಸಿಗುತ್ತಿತ್ತು. ಬ್ಯಾಂಕಿನಲ್ಲಿ ಸಿಸಿ ಕ್ಯಾಮರ ಆಫ್ ಆಗಿರುವ ಪೂರ್ಣ ಮಾಹಿತಿಯನ್ನು ಪಡೆದೇ ಈ ದರೋಡೆ ಮಾಡಲಾಗಿದೆ. ಇಷ್ಟಕ್ಕೂ ಬ್ಯಾಂಕಿನಲ್ಲಿ ನಿರಂತರ ಕಾರ್ಯಚರಿಸಬೇಕಾದ ಸಿಸಿ ಕ್ಯಾಮರ ಆಫ್ ಆಗಿದ್ದು ಏಕೆ ಎನ್ನುವ ಮಾಹಿತಿ ಇಲ್ಲ. ವಿಶೇಷವೆಂದರೆ ಸಾಕಷ್ಟು ವ್ಯವಹಾರ ನಡೆಯುವ ಈ ಬ್ಯಾಂಕ್ ಶಾಖೆಯಲ್ಲಿ ಹೊರಗಡೆ ಸಿಸಿ ಕ್ಯಾಮರ ಇಲ್ಲ. ಒಳಗೆ ಇರುವ ಕ್ಯಾಮರ ಕೂಡಾ ಸ್ಥಬ್ದವಾಗಿದ್ದಿದ್ದು ಕಳ್ಳನಿಗೆ ಮೊದಲೇ ಗೊತ್ತಿತ್ತೆ ಎನ್ನುವ ಅನುಮಾನವನ್ನು ಜನ ವ್ಯಕ್ತ ಪಡಿಸುತ್ತಿದ್ದಾರೆ.