ಕುಂದಾಪುರ: ಕುಂದಾಪುರದಿಂದ ಉಡುಪಿಯೆಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸು ಹಾಗೂ ಉಡುಪಿಯಿಂದ ಕುಂದಾಪುರಕ್ಕೆ ಆಗಮಿಸುತ್ತಿದ್ದ ಮಹಿಂದ್ರಾ ಪಿಕ್ಅಪ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಬ್ಬರು ಸಾವನ್ನಪ್ಪಿದ ಘಟನೆ ಕುಂಭಾಸಿ ರಾಷ್ಜ್ರೀಯ ಹೆದ್ದಾರಿ-66 ರಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.
ಅಪಘಾತದಲ್ಲಿ ಪಿಕ್ಅಪ್ ವಾಹನ ಚಾಲಕ ವಂಡ್ಸೆ ನಿವಾಸಿ ಚಂದ್ರ ಪೂಜಾರಿ ಹಾಗೂ ಕುಂದಾಪುರ ನಿವಾಸಿ ಮಂಜುನಾಥ ಮಲ್ಯ ಗಂಭೀರವಾಗಿ ಗಾಯಗೊಂಡಿದ್ದು ಇಬ್ಬರನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪೈಕಿ ಮಂಜುನಾಥ ಮಯ್ಯ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನು ಬಸ್ಸಿನಲ್ಲಿದ್ದ ೮ ಜನರಿಗೆ ಗಾಯವಾಗಿದ್ದು ಕೋಟ ಮೂಲದ ಕಾಳಪ್ಪ ಗಾಣಿಗ (80) ಗಂಭೀರ ಗಾಯಗೊಂಡು ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ: ಮಂಗಳವಾರ ಸಂಜೆ ಕುಂದಾಪುರದಿಂದ ಮಂಗಳೂರಿಗೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಟಿದ್ದ ಎಸ್.ಆರ್. ಬ್ರದರ್ಸ್ ಹೆಸರಿನ ಬಸ್ಸು ಇದಾಗಿದ್ದು ಈ ವೇಳೆ ಗನ್ ಪೌಡರ್ ಸಾಗಣಿಕೆಯ ಪಿಕ್-ಅಪ್ ವಾಹನಕ್ಕೆ ಕುಂಭಾಸಿಯಲ್ಲಿ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಮಂಹಿದ್ರಾ ಪಿಕ್ಅಪ್ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ವಾಹನದಲ್ಲಿಯೇ ಸಿಲುಕಿಕೊಂಡಿದ್ದ ಚಂದ್ರ ಹಾಗೂ ಮಂಜುನಾಥ ಮಲ್ಯ ಅವರನ್ನು ಸ್ಥಳೀಯರು ಹೊರಕ್ಕೆಳೆದು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕೊಂಡೊಯ್ಯಲಾಯಿತಾದರೂ ಮಂಜುನಾಥ ಮಯ್ಯ ಮೃತಪಟ್ಟಿದ್ದಾರೆ.
ಬಸ್ಸಿನಲ್ಲಿದ್ದ ಪ್ರಯಾಣಿಕರು ಹಾಗೂ ಅಪಘಾತವನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಬಸ್ಸು ಬಹಳ ವೇಗವಾಗಿ ಅಜಾಗರುಕತೆಯಿಂದ ಸಂಚರಿಸಿತ್ತು ಎನ್ನಲಾಗಿದೆ. ಅಪಘಾತದ ಸಂದರ್ಭದಲ್ಲಿ ಕೆಲಕಾಲ ಸಂಚಾರ ವ್ಯವಸ್ಥೆಗೆ ಅಡಚಣೆಯುಂಟಾಗಿತ್ತು.
ಘಟನಾ ಸ್ಥಳಕೆ ಕುಂದಾಪುರ ಸಂಚಾರಿ ಠಾಣೆಯ ಪಿಎಸ್ಐ ಇಮ್ರಾನ್ ಹಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜನರ ಆಕ್ರೋಷ: ತಾಲೂಕಿನಾದ್ಯಂತ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ಸುಗಳ ಮಿತಿಮೀರಿದ ವೇಗದಿಂದ ಇತರೇ ವಾಹನ ಸವಾರರಿಗೆ ತೊಂದರೆಯುಂಟಾಗುತ್ತಿದ್ದು, ಸಂಚಾರಿ ಪೊಲಿಸರು ಹಾಗೂ ಸಂಬಂದಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದ್ದಾಗಿದೆ.