ಕರ್ನಾಟಕ

ಪ್ರೇಮ ವೈಫ‌ಲ್ಯದಿಂದ ಶುಶ್ರೂಷಕಿ ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು: ಪ್ರೇಮ ವೈಫ‌ಲ್ಯದಿಂದ ನೊಂದ ನರ್ಸ್‌ವೊಬ್ಬರು ಡೆತ್‌ನೋಟ್‌ ಬರೆದಿಟ್ಟು ಆಸ್ಪತ್ರೆಯ ಕೊಠಡಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಂದ್ರಲೇಔಟ್‌ನ ಮಾರುತಿನಗರದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಮಾರುತಿನಗರದ ನಿಷ್ಕಲಾ (25) ಆತ್ಮಹತ್ಯೆ ಮಾಡಿಕೊಂಡ ನರ್ಸ್‌.

ನಾಗರಬಾವಿ ಬಳಿಯ ಮಾರುತಿನಗರದಲ್ಲಿರುವ ಶ್ರೀದೇವಿ ಆಸ್ಪತ್ರೆಯಲ್ಲಿ ನರ್ಸ್‌ಆಗಿ ಕೆಲಸ ಮಾಡುತ್ತಿರುವ ನಿಷ್ಕಲಾ, ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ್‌ನನ್ನು ಪ್ರೀತಿಸುತ್ತಿದ್ದರು. ಇತ್ತೀಚೆಗೆ ಗಂಗಾಧರ್‌ ನಿಷ್ಕಲಾಳ ಪ್ರೀತಿ ನಿರಾಕರಿಸಿದ್ದಾನೆ. ಇದಕ್ಕೆ ನೊಂದ ಆಕೆ ಬೆಳಗ್ಗೆ 8 ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಮರಾಜನಗರ ಮೂಲದ ನಿಷ್ಕಲಾ ಒಂದು ವರ್ಷದ ಹಿಂದೆ ನಗರಕ್ಕೆ ಬಂದಿದ್ದು, ಆರಂಭದಲ್ಲಿ ವಿಜಯನಗರದಲ್ಲಿರುವ ಸೋದರನ ಮನೆಯಲ್ಲಿ ಇದ್ದರು. ಬಳಿಕ ಶ್ರೀದೇವಿ ನರ್ಸಿಂಗ್‌ ಹೋಂನಲ್ಲಿ ಕೆಲಸಕ್ಕೆ ಸಿಕ್ಕ ಬಳಿಕ ಆಸ್ಪತ್ರೆ ಆಡಳಿತ ಮಂಡಳಿ ಆಕೆಗೆ ನೆಲೆಸಲು ಕೊಠಡಿ ಕೊಟ್ಟಿತ್ತು. ಇತರೆ ನರ್ಸ್‌ಗಳ ಜತೆ ಈಕೆ ಕೂಡ ತಂಗಿದ್ದರು.

ಇದೇ ಆಸ್ಪತ್ರೆಯಲ್ಲಿ 10 ವರ್ಷಗಳಿಂದ ಕೆಲಸ ಮಾಡುತ್ತಿರುವ ಗಂಗಾಧರ್‌ ಸಹ ಆಸ್ಪತ್ರೆಯ ನೆಲಮಳಿಗೆಯಲ್ಲಿ ಉಳಿದುಕೊಂಡಿದ್ದ. ಈ ವೇಳೆ ನಿಷ್ಕಲಾ ಮತ್ತು ಗಂಗಾಧರ್‌ ನಡುವೆ ಪ್ರೇಮಾಂಕುರವಾಗಿದೆ. ಕಳೆದ 10 ತಿಂಗಳಿಂದ ಪ್ರೀತಿಸುತ್ತಿದ್ದ ಗಂಗಾಧರ್‌ ಮದುವೆ ವಿಚಾರ ಪ್ರಸ್ತಾಪಿಸಿದಾಗ ನಿರಾಕರಿಸಿದ್ದಾನೆ.

ಇದೇ ವಿಚಾರವಾಗಿ ಕೆಲ ದಿನಗಳ ಹಿಂದೆ ಗಂಗಾಧರ್‌ ಬಳಿ ಹೋಗಿ ಮದುವೆ ಕುರಿತು ಸ್ಪಷ್ಟ ನಿರ್ಧಾರ ತಿಳಿಸುವಂತೆ ನಿಷ್ಕಲಾ ಕೋರಿದ್ದಾಳೆ. ವಿವಾಹಕ್ಕೆ ಜಾತಿ ಅಡ್ಡ ಬರುತ್ತದೆ. ನಮ್ಮ ಮನೆಯಲ್ಲಿ ಒಪ್ಪಿಕೊಳ್ಳುವುದಿಲ್ಲ ಎಂದು ಗಂಗಾಧರ್‌ ಜಾರಿ ಕೊಂಡಿದ್ದಾನೆ. ಮೂರು ದಿನಗಳ ಹಿಂದೆ ಇದಕ್ಕಿದ್ದಂತೆ ಕೆಲಸ ಸಹ ಬಿಟ್ಟಿದ್ದ.

ಗಂಗಾಧರ್‌ ಮತ್ತು ನಿಷ್ಕಲಾ ಪರಸ್ಪರ ಪ್ರೀತಿಸುತ್ತಿರುವ ವಿಚಾರ ಯುವತಿಯ ಪೋಷಕರಿಗೂ ಗೊತ್ತಿತ್ತು. ಹೀಗಾಗಿ ನೊಂದ ಯುವತಿ ಸೋಮವಾರ ಬೆಳಗ್ಗೆ ಸಹೋದ್ಯೋಗಿಗಳು ಇಲ್ಲದ ವೇಳೆ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನನ್ನ ಸಾವಿಗೆ ನಾನೇ ಕಾರಣ!: ನಿಷ್ಕಲಾ ಸಾವಿಗೂ ಮುನ್ನ ಡೆತ್‌ನೋಟ್‌ ಬರೆದಿದ್ದು, ಇದರಲ್ಲಿ “ನನ್ನ ಸಾವಿಗೆ ಯಾರು ಕಾರಣರಲ್ಲ. ನಾನೇ ಕಾರಣ’ ಎಂದು ಬರೆದಿದ್ದಾರೆ. ಆದರೆ, ಭಾನುವಾರ ಗಂಗಾಧರ್‌ ಜತೆ ನಿಷ್ಕಲಾ ಮಾತನಾಡಿರುವ ಆಡಿಯೋ ಪತ್ತೆಯಾಗಿದ್ದು, ಈ ವೇಳೆ ಗಂಗಾಧರ್‌ ನಿರ್ಲಕ್ಷ್ಯವಾಗಿ ಮಾತನಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಯುವತಿಯ ಪೋಷಕರು ನೀಡಿದ ದೂರಿನ ಅನ್ವಯ ಗಂಗಾಧರ್‌ ವಿರುದ್ಧ 306(ಆತ್ಮಹತ್ಯೆಗೆ ಪ್ರಚೋದನೆ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಚಂದ್ರಲೇಔಟ್‌ ಪೊಲೀಸರು ತಿಳಿಸಿದ್ದಾರೆ.

-ಉದಯವಾಣಿ

Comments are closed.