ಬೆಂಗಳೂರು, ಮಾ.1- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಂತಲೂ ನಾನು ಹಿರಿಯ ಅನುಭವಿ ರಾಜಕಾರಣಿ. ನಾನು ಇರುವುದರಿಂದಲೇ ಸಂಪುಟಕ್ಕೆ ಗೌರವ ಇದೆ ಎಂದು ಕಂದಾಯ ಸಚಿವ ಶ್ರೀನಿವಾಸ್ಪ್ರಸಾದ್ ಹೇಳಿದ್ದಾರೆ. ಅಸಮರ್ಥ ಮತ್ತು ಅದಕ್ಷ ಸಚಿವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ವಿಧಾನಸೌಧದ ಮೊಗಸಾಲೆಯಲ್ಲಿ ಖಾರವಾಗಿಯೇ ಪ್ರತಿಕ್ರಿಯಿಸಿದ ಅವರು, ನಾನು ಸಿದ್ದರಾಮಯ್ಯ ಅವರನ್ನು ಕೇಳಿಕೊಂಡು ಸಚಿವನಾದವನಲ್ಲ.
ಈ ಹಿಂದೆ ಅಟಲ್ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಕೇಂದ್ರ ಸಂಪುಟದಲ್ಲಿ ಸಚಿವನಾಗಿದ್ದ ಹಿರಿಯ ರಾಜಕಾರಣಿ. ನನ್ನಂಥವರು ಸಂಪುಟದಲ್ಲಿರುವುದು ಭೂಷಣ ಎಂದು ಹೇಳುವ ಮೂಲಕ ಸಂಪುಟದಿಂದ ಕೈ ಬಿಡುವ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಅಸಮರ್ಥರನ್ನು ಕೈ ಬಿಡುವ ಬಗ್ಗೆ ಮಾಜಿ ಸಂಸದ ಎಚ್.ವಿಶ್ವನಾಥ್ ನೀಡಿರುವ ಹೇಳಿಕೆಗೆ ಏಕವಚನ ಬಳಸಿ ಕಿಡಿಕಾಡಿರುವ ಶ್ರೀನಿವಾಸ್ಪ್ರಸಾದ್, ಆತನಿಗೆ ಪ್ರಚಾರದ ಹುಚ್ಚು. ಯಾರೂ ಸಿಗದೇ ಇದ್ದರೆ ಸ್ವಂತ ಮನೆಯವರ ವಿರುದ್ಧವೇ ಮಾತನಾಡುತ್ತಾನೆ ಎಂದು ಲೇವಡಿ ಮಾಡಿದರು. ವಿಶ್ವನಾಥ್ ನನಗೂ ಒಳ್ಳೆಯ ಸ್ನೇಹಿತ. ಆದರೂ ಈ ರೀತಿ ಏಕೆ ಆಡುತ್ತಾನೆ ಎಂಬುದು ಗೊತ್ತಿಲ್ಲ. ಮೇಲಾಗಿ ನನ್ನನ್ನು ಪ್ರಶ್ನಿಸಲು ವಿಶ್ವನಾಥ್ ಯಾರು? ಸಚಿವರುಗಳು ಎಲ್ಲಿ ಹೋಗುತ್ತೇವೆ. ಎಲ್ಲಿ ಬರುತ್ತೇವೆ ಎಂಬುದರ ಬಗ್ಗೆ ವಿಶ್ವನಾಥ್ಗೆ ವರದಿ ನೀಡುವ ಅಗತ್ಯವಿದೆಯೇ ಎಂದು ಶ್ರೀನಿವಾಸ್ಪ್ರಸಾದ್ ತರಾಟೆಗೆ ತೆಗೆದುಕೊಂಡರು. ನನಗೆ ವಿಶ್ವನಾಥ್ ಕಡೆಯಿಂದ ಅಧಿಕಾರ ಬಂದಿಲ್ಲ. ಅನಗತ್ಯವಾಗಿ ಈ ರೀತಿ ಟೀಕೆ ಮಾಡುವುದು ಒಳ್ಳೆಯದಲ್ಲ ಎಂದು ಅವರು ಎಚ್ಚರಿಸಿದರು.