ಮೈಸೂರು: ಇಲ್ಲಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯನ್ನು ಸ್ಫೋಟಿಸುವುದಾಗಿ ಬಂದ ದೂರವಾಣಿ ಬೆದರಿಕೆ ಕರೆಯು ಹುಸಿ ಎಂದು ದೃಢಪಟ್ಟಿದ್ದು, ಅರಮನೆಯ ಅಂಗಳ ದಲ್ಲಿ ಶುಕ್ರವಾರ ಮಧ್ಯಾಹ್ನ ನಿರ್ಮಾ ಣವಾಗಿದ್ದ ಆತಂಕ ದೂರವಾಗಿದೆ. ಅರಮನೆ ಭದ್ರತಾ ಪಡೆಯ ಕೊಠಡಿಗೆ (0821– -2418552) ಮಧ್ಯಾಹ್ನ 2 ಗಂಟೆಗೆ ಬಂದ ದೂರವಾಣಿ ಕರೆ, ಈ ಆತಂಕ ಮೂಡಿಸಿತ್ತು.
ಕೊಠಡಿಯ ಸಿಬ್ಬಂದಿ ಲಿಂಗರಾಜು ಕರೆ ಸ್ವೀಕರಿಸಿದಾಗ ‘ವರಹಾ ದ್ವಾರದ ಬಳಿ ಇರುವ ಪಾರ್ಕಿಂಗ್ ಬಳಿ ಎರಡರಿಂದ ಮೂರು ಕಡೆ ಬಾಂಬ್ ಇಡಲಾಗಿದೆ. 2.45ರ ಸುಮಾರಿಗೆ ಬಾಂಬ್ ಸ್ಫೋಟಗೊ ಳ್ಳಲಿವೆ’ ಎಂದು ಕರೆ ಮಾಡಿದವನು ಹೇಳಿ ಸಂಪರ್ಕ ಕಡಿತಗೊಳಿಸಿದ್ದಾನೆ.
ಇದರಿಂದ ಆತಂಕಕ್ಕೆ ಒಳಗಾದ ಸಿಬ್ಬಂದಿ ತಕ್ಷಣ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಎಚ್ಚೆತ್ತು ಕೊಂಡ ಪೊಲೀಸರು, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎ.ಎನ್. ರಾಜಣ್ಣ ನೇತೃತ್ವದಲ್ಲಿ ಸ್ಥಳಕ್ಕೆ ದೌಡಾಯಿಸಿದರು. ದೇವರಾಜ ಉಪ ವಿಭಾಗದ ಎಸಿಪಿ ಎಂ.ಪಿ. ಜಯಮಾ ರುತಿ ಹಾಗೂ ಅರಮನೆಯ ಎಸಿಪಿ ಚೆನ್ನಯ್ಯ ನೇತೃತ್ವದ ತಂಡಗಳು ಅರಮನೆ ಭದ್ರತೆಯನ್ನು ಬಿಗಿಗೊಳಿಸುವಲ್ಲಿ ಕಾರ್ಯೋನ್ಮುಖರಾದರು. ಅರಮನೆಯ ಸುತ್ತಲಿನ ವಾಹನ ದಟ್ಟಣೆಯನ್ನು ತಹಂಬದಿಗೆ ತಂದು ಬಾಂಬ್ ಪತ್ತೆಗೆ ಮುಂದಾದರು.
‘ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಬಾಂಬ್ ಪತ್ತೆಗೆ ಶೋಧಕಾರ್ಯ ನಡೆಸಿದವು. ದುಷ್ಕರ್ಮಿಗಳು ಸೂಚಿ ಸಿದ್ದ ಪಾರ್ಕಿಂಗ್ ಸ್ಥಳ, ಅರಮ ನೆಯ ಸುತ್ತಲಿನ ಕಾಂಪೌಂಡ್ ಹೊರ ಮತ್ತು ಒಳಭಾಗವನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ಆದರೆ, ಯಾವುದೇ ಬಾಂಬ್ ಪತ್ತೆಯಾಗಲಿಲ್ಲ. ಹೀಗಾಗಿ, ಇದೊಂದು ಹುಸಿ ಬಾಂಬ್ ಕರೆ ಎಂಬ ನಿರ್ಧಾರಕ್ಕೆ ಬರಲಾಯಿತು’ ಎಂದು ಎಸಿಪಿ ಚೆನ್ನಯ್ಯ ಮಾಹಿತಿ ನೀಡಿದರು.
‘ಹುಸಿ ಬಾಂಬ್ ಕರೆ’ಯಿಂದಾಗಿ ಕೆಲ ಕಾಲ ಅರಮನೆಯ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕರೆಯಿಂದ ಗಲಿಬಿಲಿಗೊಂಡ ಸಿಬ್ಬಂದಿ ತಕ್ಷಣ ಎಲ್ಲೆಡೆ ಭದ್ರತೆಯನ್ನು ಬಿಗಿಗೊ ಳಿಸಿದರು. ಪ್ರವಾಸಿಗರಿಗೆ ಪ್ರವೇಶ ಕಲ್ಪಿಸಿದ ಅರಮನೆಯ ವರಹಾ ದ್ವಾರದ ಬಳಿ ಹೆಚ್ಚುವರಿ ಸಿಬ್ಬಂದಿ ಯನ್ನು ನಿಯೋಜಿಸಲಾಯಿತು.
ಲೋಹ ಶೋಧಕ ಹಿಡಿದು ನಿಂತ ಪೊಲೀಸರು ಪ್ರತಿಯೊಬ್ಬರನ್ನು ತಪಾಸ ಣೆಗೆ ಒಳಪಡಿಸಿದರು. ಎಲ್ಲರ ಬ್ಯಾಗು ಗಳನ್ನು ಯಂತ್ರದ ಮೂಲಕ ಪರಿಶೀಲಿ ಸಿದರು. ಪ್ರವಾಸಿಗರು ಚದುರದಂತೆ ಎಲ್ಲೆಡೆ ಬ್ಯಾರಿಕೇಡ್ಗಳನ್ನು ಹಾಕಿ ಏಕಮುಖ ಸಂಚಾರ ವ್ಯವಸ್ಥೆ ಮಾಡ ಲಾಯಿತು. ಬಾಂಬ್ ಕರೆಯ ಮಾಹಿ ತಿಯನ್ನು ಗೋಪ್ಯವಾಗಿಟ್ಟ ಪರಿಣಾಮ ಪ್ರವಾಸಿ ಗರಿಗೆ ಯಾವುದೇ ತೊಂದರೆ ಯಾಗ ಲಿಲ್ಲ. ಬಿಗಿ ಭದ್ರತೆಯಿಂದ ಕಿರಿಕಿರಿ ಅನುಭವಿಸಿದ ಕೆಲವರು ಗೊಣ ಗುತ್ತಲೇ ಅರಮನೆಯ ಸೊಬಗನ್ನು ಕಣ್ತುಂಬಿಕೊಂಡರು.
‘ಕಾಲರ್ ಐಡಿ’ ಇಲ್ಲ!
ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಗೆ ಭದ್ರತೆ ಒದಗಿಸುವ ನಿಯಂತ್ರಣ ಕೊಠಡಿಯ ಸ್ಥಿರ ದೂರವಾಣಿಗೆ ‘ಕಾಲರ್ ಐಡಿ’ ಇಲ್ಲ ಎಂಬುದು ಶುಕ್ರವಾರ ಬೆಳಕಿಗೆ ಬಂದಿದೆ. ಇದರಿಂದ ಬೆದರಿಕೆ ಹಾಕಿದ ದವರ ಜಾಲವನ್ನು ಭೇದಿಸಲು ಪೊಲೀಸರಿಗೆ ಆರಂಭಿಕ ತೊಡಕು ಎದುರಾಗಿದೆ. ಕರೆ ಮಾಡಿದ ಸಂಖ್ಯೆ ಯನ್ನು ತಿಳಿಯಲು ಪೊಲೀಸರು ಈಗ ಬಿಎಸ್ಎನ್ಎಲ್ ನೆರವು ಪಡೆಯು ವುದು ಅನಿವಾರ್ಯ ವಾಗಿದೆ.
ಮೈಸೂರಿನ ಪಾರಂಪರಿಕ ಹಾಗೂ ಐತಿಹಾಸಿಕ ಕಟ್ಟಡವಾಗಿರುವ ಅರಮನೆಗೆ ಒದಗಿಸಿರುವ ಭದ್ರತೆ ವೈಫಲ್ಯವನ್ನು ಇದು ಎತ್ತಿ ತೋರಿಸು ತ್ತಿದೆ. ಕೆಆರ್ಎಸ್, ಚಾಮುಂಡಿ ಬೆಟ್ಟ, ಇನ್ಫೊಸಿಸ್, ರಕ್ಷಣಾ ಆಹಾರ ಮತ್ತು ಸಂಶೋಧನಾ ಕೇಂದ್ರ (ಡಿಎಫ್ಆರ್ಎಲ್), ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋ ಧನಾ ಸಂಸ್ಥೆಗಳಿಗೆ (ಸಿಎಫ್ಟಿ ಆರ್ಐ) ನೀಡಿದ ಭದ್ರತೆಯ ಕುರಿತು ಇದು ಅನುಮಾ ನಗಳನ್ನು ಹುಟ್ಟು ಹಾಕಿದೆ.
