ಲಕ್ನೋ” ಸಮಾಜವಾದಿ ಪಕ್ಷದ ವರಿಷ್ಠ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಹಿರಿಯ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಅವರಿಗೆ ಬೆದರಿಕೆ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಶುಕ್ರವಾರ ಸಂಜೆ 4:43ರ ಸುಮಾರಿಗೆ ಫೋನ್ ಕರೆ ಮಾಡಿ ನನಗೆ ಬೆದರಿಕೆ ಒಡ್ಡಲಾಗಿದೆ ಎಂದು 1992ರ ಬ್ಯಾಚ್ ಐಎಎಸ್ ಅಧಿಕಾರಿ ಠಾಕೂರ್ ದೂರಿದ್ದಾರೆ. ಇಬ್ಬರ ನಡುವಿನ ದೂರವಾಣಿ ಸಂಭಾಷಣೆಯ ಧ್ವನಿಮುದ್ರಿಕೆ ಬಹಿರಂಗಗೊಂಡಿದ್ದು ದೊಡ್ಡಮಟ್ಟದಲ್ಲಿ ವಿವಾದ ಪ್ರಾರಂಭವಾಗಿದೆ.
ದೂರವಾಣಿ ಸಂಖ್ಯೆ 0522-2235477 ರಿಂದ ನನ್ನ ಮೊಬೈಲ್ ನಂಬರ್ 094155-34526ಗೆ ಕರೆ ಮಾಡಿದ ವ್ಯಕ್ತಿಯೊಬ್ಬರು ನೇತಾಜಿ( ಮುಲಾಯಂ ಸಿಂಗ್ ಯಾದವ್) ನಿಮ್ಮ ಜತೆ ಮಾತನಾಡಬೇಕೆಂದರು. ಮುಲಾಯಂ ಮತ್ತು ನನ್ನ ನಡುವೆ ಒಟ್ಟು 2 ನಿಮಿಷ 10 ಸೆಕೆಂಡ್ಗಳ ಮಾತುಕತೆ ನಡೆಯಿತು. ಆ ಕಡೆಯಿಂದ ಮಾತನಾಡುತ್ತಿದ್ದ ವ್ಯಕ್ತಿ ( ಮುಲಾಯಂ ಸಿಂಗ್ ಯಾದವ್ಎಂದು ಹೇಳಿಕೊಂಡು) ನನ್ನ ಆದೇಶವನ್ನು ಯಾಕೆ ನಿರಾಕರಿಸುತ್ತಿದ್ದೀಯಾ? ಜಸ್ರಾನ್ನ ರಾಮ್ವೀರ್ನಲ್ಲಿ ನಡೆದ ಔತಣ ಕೂಟದಲ್ಲಿ ನಡೆದ ಘಟನೆ ನಿನಗೆ ನೆನಪಿಲ್ಲವೇ? ಅದನ್ನು ನಾವು ಮತ್ತೆ ಮರುಕಳಿಸಬೇಕು ಎಂದು ಅನ್ನಿಸುತ್ತಿದೆ ಎಂದು ಹಳೆಯ ಘಟನೆಯನ್ನು ನೆನಪಿಸಿ ಬೆದರಿಕೆ ಹಾಕಿದ್ದಾರೆ”, ಎಂದು ಐಪಿಎಸ್ ಅಧಿಕಾರಿ ದೂರಿದ್ದಾರೆ.
ಠಾಕೂರ್ ಮತ್ತು ಅವರ ಪತ್ನಿ ಸಾಮಾಜಿಕ ಕಾರ್ಯಕರ್ತೆ ನೂತನ್ ಠಾಕೂರ್ ಗುರುವಾರ ಗಣಿಗಾರಿಕೆ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿ ಮತ್ತು ಇತರ ಹಲವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮುಲಾಯಂ ಸಿಂಗ್ ಯಾದವ್ ತಮಗೆ ಬೆದರಿಕೆ ಒಡ್ಡಿದ್ದಾರೆ ಎಂದು ಅಧಿಕಾರಿ ಆಪಾದಿಸಿದ್ದಾರೆ.