ಕರ್ನಾಟಕ

ಕಿಡ್ನಾಪ್ ರಹಸ್ಯ ಬಿಚ್ಚಿಟ್ಟ ಮಾಜಿ ಸಚಿವ ವರ್ತೂರು ಪ್ರಕಾಶ್​ : ಇಲ್ಲಿದೆ ಸಂಪೂರ್ಣ ವಿವರ – ಬಗೆ ಹರಿಯದ ಸಂಶಯ!

Pinterest LinkedIn Tumblr

ಕೋಲಾರ,ಡಿಸೆಂಬರ್.02 : ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ ಮಾಜಿ ಸಚಿವ ವರ್ತೂರು ಪ್ರಕಾಶ್​ ಅವರ ಕಿಡ್ನಾಪ್ ಕುರಿತಂತೆ ಹಲವು ಅಂತೆಕಂತೆಗಳು ಹರಿದಾಡುತ್ತಿರುವ ಸಂದರ್ಭದಲ್ಲೇ ಮಾಜಿ ಸಚಿವ ವರ್ತೂರು ಪ್ರಕಾಶ್ ತಮ್ಮ ಕಿಡ್ನಾಪ್ ಹಿನ್ನೆಲೆಯ ಮಾಹಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ತಮ್ಮನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಲ್ಲದೆ, ಕೊಲೆ ಬೆದರಿಕೆಯನ್ನೂ ಹಾಕಲಾಗಿತ್ತು ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಪೊಲೀಸರಿಗೆ ನಿನ್ನೆ ದೂರು ನೀಡಿದ್ದರು. ಇಂದು ಕೋಲಾರದಲ್ಲಿ ಖುದ್ದು ಮಾಧ್ಯಮಗಳ ಮುಂದೆ ವರ್ತೂರು ಪ್ರಕಾಶ್ ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಲ್ಲದೆ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ, ನಡೆದ ಘಟನೆಯನ್ನು ವಿವರಿಸಿದ್ದಾರೆ. ಹಾಗೇ, ತಮಗೆ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ.

ಕೋಲಾರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವರ್ತೂರು ಪ್ರಕಾಶ್, ಅಪಹರಣಕಾರರು ಪಕ್ಕಾ ವೃತ್ತಿಪರ ಕಿಡ್ನಾಪರ್ಸ್​ ಆಗಿದ್ದರು. ನನ್ನ ಹತ್ತಿರ ಹಣ ಪಡೆಯಲು ಕಿಡ್ನಾಪ್ ಮಾಡಿದ್ದಾರೆ. ಕೋಲಾರ ತಾಲೂಕಿನ ಬೆಗ್ಲಿ ಹೊಸಹಳ್ಳಿ ಗ್ರಾಮದ ಸಮೀಪವಿರುವ ತಮ್ಮ ತೋಟದ ಬಳಿ ಬುಧವಾರ ಸಂಜೆ ನಾನು, ಫಾರ್ಮ್ ಹೌಸ್ ನಿಂದ ಹೊರಬರುತ್ತಿದ್ದ ವೇಳೆ ಎರಡು ಕಾರುಗಳಲ್ಲಿ ಬಂದ ಎಂಟು ಮಂದಿ ಅಪರಿಚಿತರು ಅಡ್ಡಗಟ್ಟಿ ನನ್ನ ಹಾಗೂ ಚಾಲಕನನ್ನು ಅಪಹರಣ ಮಾಡಿ ಲಾಂಗ್ ಮಚ್ಚು, ಗನ್ ಗಳಿಂದ ಅಟ್ಯಾಕ್ ಮಾಡಿದ್ದರು.

ಕೋಲಾರದಲ್ಲಿ ನಾಲ್ಕೈದು ಮದುವೆ ಇತ್ತು. ಹೀಗಾಗಿ, ನಾನು ಫಾರ್ಮ್ ಹೌಸ್​ನಿಂದ ಹೋಗುತ್ತಿರುವಾಗ 8 ಜನ ಬಂದು ನನ್ನ ಕಾರಿನ ಮೇಲೆ ಅಟ್ಯಾಕ್ ಮಾಡಿದರು. ಕಾರಿನ ಬಾಗಿಲು ತೆಗೆದು ನನಗೆ ಮಂಕಿ ಕ್ಯಾಪ್ ಹಾಕಿದರು. ನಮ್ಮ ಕಾರಿನ ಡ್ರೈವರ್​ಗೆ ಮಚ್ಚಿನಲ್ಲಿ ಹೊಡೆದರು.

ನಾಲ್ಕು ಗಂಟೆ ಕಾರಲ್ಲೇ ಇದ್ದರು. ನನ್ನ ತಲೆಗೆ ರಾಡ್ ನಲ್ಲಿ ಹೊಡೆದರು. 30 ಕೋಟಿ ರೂ. ಕೊಡುವಂತೆ ಟಾರ್ಚರ್ ಕೊಟ್ಟರು. ನಂತರ ಕಾಡಿಗೆ ಕರೆದೊಯ್ದು ಮೂರು ಗಂಟೆಯವರೆಗೂ ಹೊಡೆದರು

ಇನ್ನು ರಾತ್ರಿಯಿಡಿ ನನ್ನನ್ನು ಕಾರಿನಲ್ಲಿ ಸುತ್ತಾಡಿಸಿ ಹಣ ಎಲ್ಲಿ ಇಟ್ಟಿದ್ದಿರಾ, ಒಡವೆ ಎಲ್ಲಿಟ್ಟಿದ್ದಿರಾ ಅಂತ 30 ಕೋಟಿ ಹಣಕ್ಕೆ ಬೇಡಿಕೆ ಇಟ್ಟು ರಾತ್ರಿಯಿಡಿ ಹಲ್ಲೆ ಮಾಡಿದ್ದರು. ಗುರುವಾರ ಬೆಳಗ್ಗೆ ಸಹ ನನ್ನ ಮೇಲೆ ನಿರಂತರವಾಗಿ ಹಲ್ಲೆ ನಡೆಸಿದರು. ನಂತರ ಗುರುವಾರ ಸಂಜೆ ನನ್ನ ಸ್ನೇಹಿತನ ಬಳಿಯಿಂದ 50 ಲಕ್ಷ ಹಣ ಕೊಡಿಸಿದ್ದೆ. ಕೋಲಾರದ ಕಾಫಿ ಡೇ ಬಳಿ ಬಂದು ಅವರ ಕಡೆಯವರು ಹಣ ಪಡೆದುಕೊಂಡು ಹೋದರು, ಮತ್ತೆ ಶುಕ್ರವಾರ ರಾತ್ರಿ ಸಹ ಟಾರ್ಚರ್ ಕೊಡಲು ಆರಂಭಿಸಿದರು ಎಂದು ನಡೆದ ಘಟನೆಯನ್ನು ವರ್ತೂರು ಪ್ರಕಾಶ್ ವಿವರಿಸಿದ್ದಾರೆ.

ಅಲ್ಲಿಂದ ನನ್ನನ್ನು ಬೇರೆ ಜಾಗಕ್ಕೆ ಕರೆದುಕೊಂಡು ಹೋದರು. ಅಲ್ಲಿ ಕೂಡ ನನ್ನ ಮುಖಕ್ಕೆ ಹಾಕಿದ್ದ ಮಂಕಿ ಕ್ಯಾಪ್ ತೆಗೆಯಲಿಲ್ಲ. ಅವರ ಹಿಂಸೆ ತಾಳಲಾರದೆ ಕೋಲಾರದ ಸ್ನೇಹಿತರಿಗೆ ಕರೆ ಮಾಡಿ 50 ಲಕ್ಷ ರೂ. ತಲುಪಿಸಿದೆ. ನನ್ನ ಮೊಬೈಲ್ ಆನ್​ ಮಾಡಿಯೇ ಇಟ್ಟಿದ್ದರು. ನಾನು ಕಿಡ್ನಾಪ್ ಆಗಿದ್ದೇನೆ ಎಂದು ನಮ್ಮ ಕುಟುಂಬಸ್ಥರಿಗೆ ಅನುಮಾನ ಬಾರದಂತೆ ನೋಡಿಕೊಂಡರು. ಯಾರಿಗಾದರೂ ಈ ವಿಷಯ ಹೇಳಿದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದರು ಎಂದು ವರ್ತೂರು ಪ್ರಕಾಶ್ ತಿಳಿಸಿದ್ದಾರೆ.

ಅವರೆಲ್ಲ ಕುಡಿತದ ಅಮಲಿನಲ್ಲಿದ್ದ ವೇಳೆ ನನ್ನ ಕಾರು ಚಾಲಕನನಿಗೆ ಪ್ರಜ್ಞೆ ಬಂದು ಪೊದೆ ಒಳಗೆ ಸೇರಿಕೊಂಡು ತಪ್ಪಿಸಿಕೊಂಡಿದ್ದಾರೆ ನನ್ನನ್ನು ಶುಕ್ರವಾರ ಬೆಳಗ್ಗೆ 4 ಗಂಟೆಗೆ ಅಪಹರಣಾಕಾರರು ಬಿಟ್ಟಿದ್ದಾಗಿ ತಿಳಿಸಿದ ವರ್ತೂರು ಪ್ರಕಾಶ್, ದಾರಿಹೋಕ ಕಾರಿನವರ ಸಹಾಯದಿಂದ ಕೆ ಆರ್ ಪುರದ ಸತ್ಯಸಾಯಿ ಆಸ್ಪತ್ರೆಗೆ ಬಂದೆ. ಅಲ್ಲಿಂದ ನನ್ನ ಮಗ ಬಂದು ನನ್ನ ಮನೆಗೆ ಕರೆದುಕೊಂಡು ಹೋದ.

ನಾನು ಯಾರಿಗೂ ಹತ್ತು ಲಕ್ಷ ಹಣ ಕೊಡಬೇಕಾಗಿಲ್ಲ. ನಾನು ಎಂಎಲ್‌ಎ ಆದ ಮೇಲೆ ಸೈಟ್ ವ್ಯಾಪಾರ ಮಾಡೋದು ಬಿಟ್ಟೆ. ಎಂಎಲ್‌ಎ ಆಗುವ ಮೊದ್ಲು ಸೈಟ್ ವ್ಯಾಪಾರ ಮಾಡುತ್ತಿದ್ದೆ. ಯಾರಾದರೂ ನನ್ನ ಕೊಲೆಗೆ ಸುಪಾರಿ ಕೊಟ್ಟಿದ್ರೆ 5 ನಿಮಿಷಕ್ಕೆ ಮುಗಿಸಿ ಬಿಡುತ್ತಿದ್ದರು. ಆದ್ರೆ ಇವರು ಹಣಕ್ಕಾಗಿ ಬಂದವರು ಎಂದು ನನಗೆ ಅನಿಸುತ್ತಿದೆ.

ಅಪರಿಚಿತರು ಆದರು ಕನ್ನಡ, ತಮಿಳು ಭಾಷೆ ಮಾತನಾಡುತ್ತಿದ್ದರು. ನಾನು ಅವರ ಜೊತೆ ಇದ್ದ ವೇಳೆ ಅನುಮಾನ ಬಾರದ ರೀತಿಯಲ್ಲಿ ವರ್ತಿಸುತ್ತಿದ್ದರು. ಇನ್ನು ಮೂರು ದಿನಗಳಲ್ಲಿ ಕಿಡ್ನಾಪ್​ ಮಾಡಿದವರು ಸಿಕ್ಕೆ ಸಿಗುತ್ತಾರೆ. ಇದು ಏಕಾಏಕಿ ಪ್ಲಾನ್ ಮಾಡಿರೋದು ಅಲ್ಲ. ಒಂದು ತಿಂಗಳಿನಿಂದ ನಡೆದಿದೆ ಎಂದು ವರ್ತೂರು ಪ್ರಕಾಶ್ ಅನುಮಾನ ವ್ಯಕ್ತಪಡಿಸಿದರು.

ನಾನು ಯಾವುದೇ ವ್ಯವಹಾರಗಳನ್ನೂ ಮಾಡಿಲ್ಲ. ಅದೆಲ್ಲವೂ ಕಟ್ಟುಕತೆ. ನನಗೆ ಒಂದು ಲಕ್ಷ ರೂ. ಸಾಲವೂ ಇಲ್ಲ. ಇದು ಬೇರೆ ರಾಜ್ಯದವರು ಮಾಡಿದ ಕೃತ್ಯವಲ್ಲ. ಬೆಂಗಳೂರಿನ ಅಪಹರಣಕಾರರೇ ಮಾಡಿರುವ ಕೆಲಸ. ನನಗೆ ಯಾರೊಂದಿಗೂ ರಾಜಕೀಯ ದ್ವೇಷ ಇಲ್ಲ. ಇದು ಯಾರೋ ದುಡ್ಡಿಗೋಸ್ಕರ ಮಾಡಿರೋ ಕೆಲಸ ಎಂದು ವರ್ತೂರು ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.

ಇನ್ನು ನಾನು ಕಾರ್​ನಲ್ಲಿದ್ದಾಗ ಖಾರದಪುಡಿ, ಮಹಿಳೆಯರ ಬಟ್ಟೆ ಸೇರಿದಂತೆ ಯಾವುದೇ ವಸ್ತುಗಳು ಇರಲಿಲ್ಲ. ಈಗ ಬಟ್ಟೆ ಪತ್ತೆಯಾಗಿರುವುದು ಗೊತ್ತಿಲ್ಲ. ನನ್ನ ಕಾರಿನಲ್ಲಿ ಬೇರೆ ಕೃತ್ಯಗಳು ಎಸಗಿದ್ದಾರೆ. ಎಲ್ಲದರ ಬಗ್ಗೆ ತನಿಖೆ ಮಾಡಲು ನಾನು ಕಮಿಷನರ್ ಬಳಿ ಹೇಳಿದ್ದೇನೆ. ಶನಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕೋಲಾರದ ಎಸ್ಪಿ ಕಾರ್ತಿಕ್​ ರೆಡ್ಡಿ ಅವರಿಗೆ ಮಾಹಿತಿ ಕೊಟ್ಟಿದ್ದೇನೆ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ವರ್ತೂರು ಪ್ರಕಾಶ್ ನಡೆದ ಘಟನೆಯನ್ನು ವಿವರಿಸಿದ್ದಾರೆ. ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ನನಗೆ, ನನ್ನ ಕುಟುಂಬದವರಿಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿದ್ದೇನೆ.

ಸೂಕ್ತ ಭದ್ರತೆ ಒದಗಿಸುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲು ಮನವಿ ಮಾಡಿದ್ದೇನೆ. ನನ್ನ ಮುಂದೆಯೇ ಬೊಮ್ಮಾಯಿ ಅವರು ಕಮಿಷನರ್ ಬಳಿ ಮಾತನಾಡಿದ್ದಾರೆ. ಶೀಘ್ರದಲ್ಲೇ ಆರೋಪಿಗಳು ಸಿಕ್ಕಿಬೀಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ವರ್ತೂರು ಪ್ರಕಾಶ್ ತಿಳಿಸಿದ್ದಾರೆ.

ಇನ್ನು ಕೋಲಾರಕ್ಕೆ ಪ್ರಕರಣ ಶಿಫ್ಟ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತಕ್ಷಣ ತನಿಖೆ ಆರಂಭಿಸಿದ್ದಾರೆ. ಹೆಚ್ಚುವರಿ ಎಸ್ಪಿ ಜಾಹ್ನವಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋಲಾರ ತಾಲೂಕಿನ ಜಂಗಾಲಹಳ್ಳಿ ರಸ್ತೆಯಲ್ಲಿ ಪರಿಶೀಲನೆ ನಡೆಸಿದ ಪೊಲೀಸರು, ನಂತರ ವರ್ತೂರು ಪ್ರಕಾಶ್ ತೋಟದ ಮನೆಗೆ ಭೇಟಿ ನೀಡಿ ಘಟನೆ ನಡೆದ ದಿನದ ಮಾಹಿತಿ ಪಡೆದಿದ್ದಾರೆ.

ಇನ್ನು ಮಾಜಿ ಸಚಿವ ವರ್ತೂರ್ ಪ್ರಕಾಶ್​ಗೆ ಪ್ರಾಣ ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ, ಗೃಹ ಸಚಿವರ ಸೂಚನೆ ಮೇರೆಗೆ ಗನ್ ಮ್ಯಾನ್ ಕೂಡ ನೇಮಕ ಮಾಡಿದ್ದಾರೆ. ಒಟ್ಟಾರೆ ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಬೆಳ್ಳಂದೂರು ಠಾಣೆಯಲ್ಲಿ ದಾಖಲಿಸಿರುವ ದೂರಿಗೂ, ಅವರು ನೀಡುತ್ತಿರುವ ಹೇಳಿಕೆಗೂ, ಘಟನೆ ನಡೆದ ಸ್ಥಳಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸತ್ಯಮರೆಮಾಚಿ ಪ್ರಕರಣ ದಿಕ್ಕುತಪ್ಪಿಸಲು ಮಾಜಿ ಸಚಿವರು ಯತ್ನಿಸುತ್ತಿದ್ದಾರೆ ಎಂಬ ಅನುಮಾನ ಮೂಡಿದೆ, ಪೋಲಿಸರು ಸಮಗ್ರ ತನಿಖೆ ನಡೆಸಿ, ನಿಜಾಂಶ ತಿಳಿಯಬೇಕಿದೆ.

Comments are closed.